ಅಮೀರ್ ಖಾನ್ ಸತ್ಯಮೇವ ಜಯತೇ ಮ್ಯಾಜಿಕ್ ಶುರು
ಈ ಮೊದಲು ಹೇಳಿದಂತೆ ಈ ಟಾಕ್ ಶೋನ ಕೇಂದ್ರ ವ್ಯಕ್ತಿ ಶ್ರೀ ಸಾಮಾನ್ಯ ಭಾರತೀಯ. ಇದರಲ್ಲಿ ತೋರಿಸಲಾಗುವ ಎಲ್ಲಾ ಅಂಶಗಳು ಸಾಮಾನ್ಯ ಜನರಿಗೆ ಸಂಬಂಧಿಸಿದ ಶಿಕ್ಷಣ, ನಿರುದ್ಯೋಗ, ಬಾಲಕಾರ್ಮಿಕ ಪದ್ಧತಿ, ಆರೋಗ್ಯ, ನೈರ್ಮಲ್ಯ ಮುಂತಾದ ಭಾರತ ದೇಶವನ್ನು ಕಾಡುತ್ತಿರುವ ಸದ್ಯದ ಜ್ವಲಂತ ಸಮಸ್ಯೆಗಳು. ಅಷ್ಟೇ ಅಲ್ಲ, ಜನಸಾಮಾನ್ಯರ ಸಮಸ್ಯೆಗೆ ಜನಸಾಮಾನ್ಯರೇ ಧ್ವನಿಯಾಗುವುದು.
ಈ ಶೋ ಮೂಲಕ ಜನಸಾಮಾನ್ಯರೇ ಜನಸಾಮನ್ಯರ ಸಮಸ್ಯೆಗಳನ್ನು ಮನಗಂಡು, ಅರ್ಥೈಸಿಕೊಂಡು ಅದರ ವಿರುದ್ಧ ಹೋರಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಾರಿಯನ್ನು ಕಂಡುಕೊಳ್ಳುವುದು ಈ ಶೋ ಮುಖ್ಯ ಉದ್ದೇಶ. ಇಂದು ಪ್ರಸಾರವಾದ ಕಾರ್ಯಕ್ರಮ ಸಹ ನಮ್ಮ ದೇಶವನ್ನು ಕಾಡುತ್ತಿರುವ ಸಾಮಾಜಿಕ ಪಿಡುಗು ಎನಿಸಿರುವ ಭ್ರೂಣ ಹತ್ಯೆ ಹಾಗು ಗಂಡು-ಹೆಣ್ಣು ಅನುಪಾತದಲ್ಲಿರುವ ಅಸಮಾನತೆ. ಅದರ ವಿರುದ್ಧ ಎದ್ದಿರುವ ಜನಸಾಮಾನ್ಯರ ಕೂಗು.
ಈ ಟಾಕ್ ಶೋ ಪ್ರಚಾರಕ್ಕೆ ಕಿರತೆರೆ ಇತಿಹಾಸದಲ್ಲಿಯೇ ಕಂಡುಕೇಳರಿಯದ ಮೊತ್ತ ರು. 6.25 ಕೋಟಿ ಸುರಿಯಲಾಗಿದೆ. ಸುದ್ದಿ ಮೂಲಗಳ ಪ್ರಕಾರ, ಅಮೀರ್ ಖಾನ್ ಈ ಶೋ ನಡೆಸಿಕೊಡಲು ಪಡೆಯುತ್ತಿರುವ ಸಂಭಾವನೆ ರು. 3 ಕೋಟಿಗೂ ಅಧಿಕ. ಇದು ಕಿರುತೆರೆಯ ಈವರೆಗಿನ ಅತ್ಯಧಿಕ ಸಂಭಾವನೆ. ಸತ್ಯಮೇವ ಜಯತೇ ಇನ್ನೂ ಅದೆಷ್ಟು ದಾಖಲೆ ಸ್ಥಾಪಿಸಲಿದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












