ರಾಖಿ ನಾಮರ್ದ ಎಂದಿದ್ದಕ್ಕೆ ಜೀವತೆತ್ತ ದುರ್ದೈವಿ
'ರಾಖಿ ಕಾ ಇನ್ಸಾಫ್' ಎಂಬ ರಿಯಾಲಿಟಿ ಷೋನಲ್ಲಿ ಕಾರ್ಯಕ್ರಮದ ರುವಾರಿ ಡ್ರಾಮಾ ಕ್ವೀನ್ ರಾಖಿ ಸಾವಂತ್ 25 ವರ್ಷದ ಸ್ಪರ್ಧಿಯೊಬ್ಬನಿಗೆ "ನಾಮರ್ದ" ಎಂದು ಜರೆದಿದ್ದಾರೆ. ಇದರ ಪರಿಣಾಮ 25 ವರ್ಷದ ಆ ತರುಣ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಾಖಿಯಿಂದ ಅಪಮಾನಕ್ಕೀಡಾಗಿ ದುರಂತ ಸಾವು ಕಂಡ ವ್ಯಕ್ತಿಯನ್ನು ಝಾನ್ಸಿ ಮೂಲದ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಕಿರುತೆರೆಗೆ ಅದರಲ್ಲೂ ರಿಯಾಲಿಟಿ ಷೋಗಳಿಗೆ ಸೆನ್ಸಾರ್ ಅಗತ್ಯವಿದೆ ಎಂಬ ಕೂಗಿಗೆ ಮತ್ತೆ ಜೀವ ಬಂದಿದೆ.
"ಲಕ್ಷ್ಮಣ್ ತುಂಬಾ ಉತ್ಸಾಹದಿಂದ ರಾಖಿ ಕ ಇನ್ಸಾಫ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಆದರೆ, ರಾಖಿಯ ಚುಚ್ಚುಮಾತುಗಳನ್ನು ಸಹಿಸಲಾಗದೆ ತೀವ್ರವಾಗಿ ಮನನೊಂದುಬಿಟ್ಟ. ಮಾನಸಿಕ ಖಿನ್ನತೆಗೆ ಒಳಗಾಗಿ ಯಾವುದರಲ್ಲೂ ಆಸಕ್ತಿಯಿಲ್ಲದೆ ಆಹಾರ ತೊರೆದು ನಿಶ್ಯಕ್ತಿಯಿಂದ ಬಳಲತೊಡಗಿದ್ದ. ಆತನನ್ನು ನ.9 ರಂದು ಝಾನ್ಸಿ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ(ನ.11) ಮೃತಪಟ್ಟ" ಎಂದು ಲಕ್ಷ್ಮಣ್ ನ ಸಂಬಂಧಿ ಬಲ್ಬೀರ್ ಹೇಳುತ್ತಾರೆ.
ವಿವಾಹ ಸಂಬಂಧ ಸರಿಪಡಿಸಿಕೊಳ್ಳುವ ಆಸೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಫೆ. 19 ರಂದು ಅನಿತಾ ಎಂಬುವವರನ್ನು ವರಿಸಿದ್ದ. ಮನಸ್ತಾಪಗಳು ಹೆಚ್ಚಾದ ಕಾರಣ ರಾಖಿಯ ಉಪದೇಶ, ಪರಿಹಾರ ಕೇಳಲು ಕಾರ್ಯಕ್ರಮಕ್ಕೆ ಬಂದಿದ್ದ. ಆದರೆ, ಸಮಸ್ಯೆಗೆ ಪರಿಹಾರ ಸೂಚಿಸುವ ಬದಲಿಗೆ ಲಕ್ಷ್ಮಣ್ ವಿರುದ್ಧ ರಾಖಿ ಹರಿಹಾಯ್ದು "ನಾಮರ್ದ, ನಪುಂಸಕ" ಎಂದೆಲ್ಲಾ ಹೀಯಾಳಿಸಿದ್ದು ಆತನಿಗೆ ತೀವ್ರ ಆಘಾತ ತಂದಿತು ಎಂದು ಬಲ್ಬೀರ್ ದುಃಖ ತೊಡಿಕೊಂಡಿದ್ದಾರೆ.
NDTV Imagine ನಲ್ಲಿ ಪ್ರಸಾರವಾಗುವ ರಾಖಿ ಸಾವಂತ್ ಕಾರ್ಯಕ್ರಮದ ವಿರುದ್ಧ ಲಕ್ಷ್ಮಣ್ ಕುಟುಂಬದವರು ಕಾನೂನು ಸಮರ ಸಾರಲು ಸಿದ್ಧತೆ ನಡೆಸಿದ್ದಾರೆ. ಜನಸಾಮಾನ್ಯರಲ್ಲಿ ವಿನಂತಿ, ನಿಮ್ಮ ಸಮಸ್ಯೆಗಳಿಗೆ ರಾಖಿ ಪರಿಹರಿಸುತ್ತಾಳೆ, ಷೋನಲ್ಲಿ ಭಾಗವಹಿಸಬೇಕೆ 505101010 ಅಥವಾ 1255510 ಗೆ ಕರೆ ಮಾಡಿ. ಅಥವಾ ನಿಮ್ಮ ವಿವರಗಳನ್ನು [email protected] ಗೆ ಮೇಲ್ ಮಾಡಿ ಎಂಬ ಜಾಹೀರಾತು ಎನ್ ಡಿಟಿವಿಯಲ್ಲೂ ಈಗಲೂ ಪ್ರಸಾರವಾಗುತ್ತಲೇ ಇದೆ.


Click it and Unblock the Notifications











