ಸ್ಟುಡಿಯೋದಲ್ಲೇ ಸೃಜನ್ ಲೋಕೇಶ್ ಜೊತೆ ದಿನಕರ್ ಜಟಾಪಟಿ

ಕಳೆದ ಶನಿವಾರದ (ಜು . 9) ಮಜಾ ವಿತ್ ಸೃಜ ಕಾರ್ಯಕ್ರಮಕ್ಕೆ ನಿರ್ದೇಶಕ ದಿನಕರ್ ತೂಗುದೀಪ್ ಮತ್ತು ಸಾಹಿತಿ ಕವಿರಾಜ್ ಆಗಮಿಸಿದ್ದರು. ಎಂದಿನ ತನ್ನ ಶೈಲಿಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಸೃಜನ್ ಪ್ರಶ್ನೆಗಳಿಗೆ, ಅದೇಕೋ ದಿನಕರ್ ಗೆ ಸರಿ ಅನಿಸಲಿಲ್ಲ. ಬಾಲ್ಯ ಸ್ನೇಹಿತರಾದ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿತ್ತು.
ಈ ಕಾರ್ಯಕ್ರಮದ ಮಧ್ಯದಲ್ಲೇ ದಿನಕರ್ ವಾಕ್ ಔಟ್ ಮಾಡಿದ್ರು. ಇದನ್ನೆಲ್ಲಾ ಗಮನಿಸುತ್ತಿದ್ದ ಕವಿರಾಜ್ ನೀವೇ ಕಾರ್ಯಕ್ರಮಕ್ಕೆ ಕರೆದು ಈ ರೀತಿಯ ಪ್ರಶ್ನೆ ಕೇಳಿದ್ದು ತಪ್ಪು. ನೀವು ಕಾರ್ಯಕ್ರಮ ಚೆನ್ನಾಗಿ ನಡೆಸಿ ಕೊಡುತ್ತಿದ್ದೀರಾ. ಇನ್ನೂ ಚೆನ್ನಾಗಿ ನಡೆಸಿಕೊಡಿ ಎಂದು ಸೃಜನ್ ಗೆ ಹಿತವಾಗಿ ಹೇಳಿದರು.
ಎರಡು ಹಿಟ್ ಚಿತ್ರವನ್ನು (ಜೊತೆಜೊತೆಯಲಿ, ನವಗ್ರಹ) ನೀಡಿದ ನಿರ್ದೇಶಕ ದಿನಕರ್ನನ್ನು ನೀನೊಬ್ಬ ನಿರ್ದೇಶಕನೇ ಅಲ್ಲ ಎಂದು ಸೃಜನ್ ಹೇಳಿದರೆ ಅವರಿಗೆ ಹೇಗಾಗಿರಬೇಡ? ಈ ವಿಷಯದಲ್ಲಿ ಮಾತಿಗೆ ಮಾತು ಬೆಳೆದು, ನಿರ್ದೇಶಕರಿದ್ದರೆ ನೀವೆಲ್ಲಾ ನಟರು ನೆನಪಿರಲಿ. ನಾನು ನವಗ್ರಹ ಚಿತ್ರದಲ್ಲಿ ನಿನಗೆ ಚಾನ್ಸ್ ಕೊಡದಿದ್ದರೆ ನೀನು ಇನ್ನೂ ಕಿರುತೆರೆಯಲ್ಲೇ ಇರಬೇಕಾಗಿತ್ತು. ನಿರ್ದೇಶಕರು ಹೇಳಿದ್ದನ್ನು ನಟರು ಕೇಳಬೇಕು. ನಾವಿಲ್ಲದಿದ್ದರೆ ನೀವಿಲ್ಲ ಎಂದು ದಿನಕರ್ ವಾದಿಸಿದರು.
ಎರಡು ಹಿಟ್ ಚಿತ್ರ ನೀಡಿದರೆ ನೀನೇನು ದೊಡ್ಡ ನಿರ್ದೇಶಕನಾಗಲ್ಲ. ನೀನೊಬ್ಬ ದೊಡ್ಡ ಸೆಲೆಬ್ರಿಟಿ ಅನ್ಕೊಂಡಿದ್ದೀಯಾ? ಎಂಥಾ ನಿರ್ದೇಶಕನಾದರೂ ಜನರಿಗೆ ಅದು ತಲುಪುವುದು ನಟರಿಂದ ನೆನಪಿರಲಿ. ನಾವು ಸರಿಯಾಗಿ ನಟಿಸಿಲ್ಲ ಅಂದರೆ ನಿರ್ದೇಶಕ ಏನು ಮಾಡುತ್ತಾರೆ? ನಿನ್ನ ಚಿತ್ರದಲ್ಲಿ ನನಗೆ ಚಾನ್ಸ್ ಕೊಡೆಂದು ನಾನೇನು ನಿನ್ನ ಬಳಿ ಬಂದಿಲ್ಲ.
ದರ್ಶನ್ ಕರೆದಿದ್ದಕ್ಕೆ ಬಂದೆ ಎಂದು ಸೃಜನ್ ಹೇಳಿದಾಗ ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡ್ತೀಯಾ ಎಂದು ದಿನಕರ್ ಎದ್ದು ಹೋದ್ರೆ ಈ ಕಡೆ ಸೃಜನ್ ಕೂಡ ಎದ್ದು ಹೋದ್ರು. ಇದನ್ನೆಲ್ಲಾ ಮೂಕ ಪ್ರೇಕ್ಷಕನಾಗಿ ನೋಡುತ್ತಿದ್ದ ಕವಿರಾಜ್ ಇಬ್ಬರನ್ನೂ ಸಮಾಧಾನ ಪಡಿಸಲು ಮುಂದೆ ಬಂದರೂ ಪ್ರಯೋಜನವಾಗಲಿಲ್ಲ.
ಈ ಇಬ್ಬರು ಬಾಲ್ಯ ಸ್ನೇಹಿತರು ತಮಾಷೆಗಾಗಿ ಜಗಳವಾಡಿದ್ರಾ? ನಿಜವಾಗಿಯೂ ಜಗಳವಾಡಿದರಾ. ಕೊನೆಗೂ ಕವಿರಾಜ್ ಗೆ ಇದು ತಿಳಿಯಲೇ ಇಲ್ಲ. ಕಾರ್ಯಕ್ರಮದ ಕೊನೆಯಲ್ಲಿ ದಿನಕರ್ ಮುಖಕ್ಕೆ ಪ್ಲಾಸ್ಟಿಕ್ ಬಕೆಟ್ ಹಾಕೊಂಡು ಮತ್ತೆ ವೇದಿಕೆಗೆ ಬಂದಿದ್ದರು.
ಇದಾದ ಬಳಿಕ (ಭಾನುವಾರ ಜುಲೈ 10) ಸಂಚಿಕೆಯಲ್ಲಿ ದಿನಕರ್ ಮತ್ತೆ ಸಾರಥಿ ಚಿತ್ರತಂಡದೊಂದಿಗೆ ಪ್ರತ್ಯಕ್ಷರಾದರು. ಈ ಕಾರ್ಯಕ್ರಮದಲ್ಲಿ ದರ್ಶನ್, ಹರಿಕೃಷ್ಣ, ದೀಪಾ ಸನ್ನಿಧಿ ಕೂಡ ಭಾಗವಹಿಸಿದ್ದರು. ದಿನಕರ್ ತೂಗುದೀಪ್ ಬಹು ನಿರೀಕ್ಷಿತ 'ಸಾರಥಿ' ಚಿತ್ರದ ನಿರ್ದೇಶಕ. ಈ ಸಂಚಿಕೆಯೊಂದಿಗೆ "ಮಜಾ ವಿದ್ ಸೃಜ ಸೀಸನ್ 1" ಕಾರ್ಯಕ್ರಮ ಮುಕ್ತಾಯ ಗೊಂಡಿದೆ.


Click it and Unblock the Notifications











