ಸಿಎಂಗೂ ಶೋಭಾಗೂ ಎಂತಹ ಸಂಬಂಧವಿದೆ ?

ಗುರುವಾರ 13 ನವೆಂಬರ್ ಸಂಜೆ 6.30 ರಿಂದ 7.30ರ ವರೆಗೆ ಝೀ ಟಿವಿಯಲ್ಲಿ 'ಬದುಕು ಜಟಕಾ ಬಂಡಿ' ಎಂಬ ನಿಜ ಜೀವನ್ನವನ್ನಾಧರಿಸಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ನಟಿ, ನಿರೂಪಕಿ ಮಾಳವಿಕಾ ಅವರು ಮೇಲಿನ ಪ್ರಶ್ನೆಯನ್ನು ಮಂತ್ರಿ ಪದವಿ ಕಳೆದುಕೊಂಡಿರುವ ಯಡಿಯೂರಪ್ಪ ಸಂಪುಟ ಏಕೈಕ ಮಹಿಳೆ ಶೋಭಾ ಕರಂದ್ಲಾಜೆ ಅವರನ್ನು ಕೇಳಿದ್ದು. ಮಾಳವಿಕಾ ಕೂಡಾ ಒಬ್ಬ ಮಹಿಳೆ. ಲಕ್ಷಾಂತರ ಜನ ಕಾರ್ಯಕ್ರಮ ವೀಕ್ಷಿಸುತ್ತಿರುತ್ತಾರೆ ಎಂಬುದು ಅವರಿಗೂ ಗೊತ್ತು. ಚಲನಚಿತ್ರ, ಧಾರವಾಹಿಗಳಲ್ಲಿ ನಟಿಸಿರುವ ಮಾಳವಿಕಾ ಅವರನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ, ಅವರಿಗ್ಯಾಕೆ ಇಂತಹ ಪ್ರಶ್ನೆಯನ್ನ ಕೇಳಬೇಕು ಅನಿಸಿತು ಎನ್ನುವುದು ಒಂದು ಪ್ರಶ್ನೆ.
"ನಾನು ಅನೇಕ ಬಾರಿ ಮಾಧ್ಯಮಗಳ ಮೂಲಕ ಹೇಳಿರುವೆ. ತಂದೆಯಷ್ಟು ವಯಸ್ಸಾಗಿರುವ ಯಡಿಯೂರಪ್ಪ ಅವರೊಂದಿಗೆ ಸಂಬಂಧ ಕಲ್ಪಿಸುವುದು ಎಷ್ಟರ ಮಟ್ಟಿಗೆ ಸರಿ. ಒಬ್ಬ ಮಹಿಳೆ ಬೆಳೆಯುತ್ತಿದ್ದಾಳೆ ಎಂದರೆ ಅದು ಗಂಡಸರಿಗೆ ಕಣ್ಣು ಕುಕ್ಕುವ ಸಂಗತಿ. ಭಾರತೀಯ ಸಂಸ್ಕೃತಿಯೇ ಹಾಗೆ. ಇಂತಹ ಆರೋಪಕ್ಕೆ ದೊಡ್ಡ ಇತಿಹಾಸವಿದೆ. ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರನ್ನೂ ಈ ಪೀಡೆ ಬಿಟ್ಟಿಲ್ಲ. ಇದು ನನ್ನನ್ನು ರಾಜಕೀಯವಾಗಿ ತುಳಿಯುವ ಷಢ್ಯಂತ್ರ. ಇಂತಹ ಬೆದರಿಕೆ ನಾನು ಬಗ್ಗಲ್ಲ. ಮಹಿಳೆ ಅಬಲೆಯಲ್ಲ, ಸಬಲೆ ಎಂದು ಈ ಪುರುಷ ಪ್ರಧಾನ ಸಮಾಜಕ್ಕೆ ತೋರಿಸಲು ನಾನು ಇಂತಹ ಎಲ್ಲ ಆರೋಪಗಳನ್ನು ನುಂಗಿಕೊಂಡಿರುವೆ" ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.
ಉಪಚುನಾವಣೆಯ ಕಾಲ ಆಡಳಿತ ಪಕ್ಷ ಬಿಜೆಪಿಯನ್ನು ಹೇಗಾದರೂ ಬಗ್ಗು ಬಡಿಯಬೇಕು ಎಂದು ಕಾಂಗ್ರೆಸ್ ನಾಯಕರು ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಅವರ ಮೇಲೆ ನೇರ ವಾಗ್ದಾಳಿ ನಡೆಸಿದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಆರ್ ವಿ ದೇಶಪಾಂಡೆ ಅವರು, ಯಡಿಯೂರಪ್ಪನವರ ಸರಕಾರ ಒಬ್ಬ ಮಹಿಳೆಯ ಕೈಯಲ್ಲಿದೆ. ಆ ಮಹಿಳೆಯೇ ಸರಕಾರದ ಕೀಲಿ ಕೈ ಎಂದು ಟೀಕಿಸಿ ಮಜಾ ತೆಗೆದುಕೊಂಡಿದ್ದರು. ಬಿಜೆಪಿಯ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಕೂಡಾ ಬಿಜೆಪಿ ಬಿಕ್ಕಟ್ಟು ಆರಂಭವಾದ ನಂತರ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಸರಕಾರ ಮುಗಿಯಿತು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇಂತಹ ಪ್ರಶ್ನೆಗಳು ಸಾರ್ವಜನಿಕವಾಗಿ ಚರ್ಚೆಯಾಗಬೇಕೆ ಎನ್ನುವುದೇ ಪ್ರಶ್ನೆ.


Click it and Unblock the Notifications











