ಸುವರ್ಣ ವಾಹಿನಿಯಲ್ಲಿ ರಕ್ಷಿತಾ 'ಸ್ವಯಂವರ'!
ಇದೇನಿದು ರಕ್ಷಿತಾ ಅವರಿಗೆ ಈಗಾಗಲೇ ನಿರ್ದೇಶಕ ಪ್ರೇಮ್ ಜೊತೆ ಮದುವೆಯಾಗಿ ಮಗು ಸಹ ಇದೆಯಲ್ಲಾ? ಇದ್ಯಾವ 'ಸ್ವಯಂವರ' ಎಂಬುದು ತಾನೆ ನಿಮ್ಮ ಪ್ರಶ್ನೆ! 'ಸ್ವಯಂವರ' ಎಂಬ ಟಿವಿ ಕಾರ್ಯಕ್ರಮಕ್ಕೆ ರಕ್ಷಿತಾ ಈಗಾಗಲೇ ಸಹಿ ಹಾಕಿದ್ದಾರೆ. ಬೆಳ್ಳಿತೆರೆಯಿಂದ ದೂರ ಸರಿದಿದ್ದ ರಕ್ಷಿತಾ ಇದೀಗ ಕಿರುತೆರೆಯ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ರಾಖಿ ಸಾವಂತ್ ಹಾಗೂ ರಾಹುಲ್ ಮಹಾಜನ್ ಅವರ 'ಸ್ವಯಂವರ'ಕ್ಕಿಂತಲೂ ಇದು ವಿಭಿನ್ನ ಕಾರ್ಯಕ್ರಮವಂತೆ. ಇದೊಂದು ಭಿನ್ನ ಪರಿಕಲ್ಪನೆಯ ಹಾಸ್ಯ ಕಾರ್ಯಕ್ರಮವಾಗಿದ್ದು ಏಪ್ರಿಲ್ ನಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ರಕ್ಷಿತಾ ತಿಳಿಸಿದ್ದಾರೆ.
ನಟಿಯರಾದ ಲಕ್ಷ್ಮಿ, ಮಾಳವಿಕಾ ಅವಿನಾಶ್, ತಾರಾ, ಅನುಪ್ರಭಾಕರ್ ಮತ್ತು ಪ್ರಿಯಾಂಕಾ ಉಪೇಂದ್ರ ಈಗಾಗಲೇ ಕಿರುತೆರೆಯಲ್ಲಿ ಮಿನುಗುತ್ತಿದ್ದಾರೆ. ಇದೀಗ ಈ ಪಟ್ಟಿಗೆ ರಕ್ಷಿತಾ ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ರಕ್ಷಿತಾ ಅವರ ಮತ್ತೊಂದು ವಿಶೇಷವೆಂದರೆ, ಕಿರುತೆರೆಯಲ್ಲಿ ಉಳಿತ ತಾರೆಗಳಿಗಿಂತ ಅತ್ಯಧಿಕ ಸಂಭಾವನೆ ಪಡೆಯುತ್ತಿರುವುದು.
ಮೂಲಗಳ ಪ್ರಕಾರ ಉಳಿದ ತಾರೆಗಳಿಗಿಂಗ ಶೇ.40ರಷ್ಟು ಅಧಿಕ ಸಂಭಾವನೆಯನ್ನು ರಕ್ಷಿತಾ ಅವರಿಗೆ ಸುವರ್ಣ ವಾಹಿನಿ ನೀಡಲು ಮುಂದಾಗಿದೆ. ಕಾರಣ ಇಷ್ಟೆ, ಉಳಿದ ತಾರೆಗಳಿಗಿಂತ ರಕ್ಷಿತಾ ಜನಪ್ರಿಯತೆ ಹೆಚ್ಚು. ಪ್ರೇಕ್ಷಕರಿಗೆ ಬೇಗನೆ ತಟ್ಟುತ್ತಾರೆ ಎಂಬುದು ಲಾಜಿಕ್. ನಲವತ್ತು ಕಂತುಗಳಲ್ಲಿ 'ಸ್ವಯಂವರ' ಸಾಗಲಿದೆ.
ಏತನ್ಮಧ್ಯೆ ರಕ್ಷಿತಾ ಚೊಚ್ಚಲ ನಿರ್ಮಾಣದ 'ಜೋಗಯ್ಯ' ಚಿತ್ರ ಮುಹೂರ್ತ ನೆರವೇರಿತು. ಪ್ರೇಮ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್ ಎಂಬುದು ಗೊತ್ತೆ ಇದೆ. 'ಜೋಗಿ' ಚಿತ್ರದ ಮುಂದುವರಿದ ಭಾಗ 'ಜೋಗಯ್ಯ' ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಭರವಸೆ ಸಹ ಮೂಡಿದೆ.


Click it and Unblock the Notifications











