ಕನ್ನಡ ಕಿರುತೆರೆ ನಟಿಯರಿಂದ ಪೊಲೀಸರ ಮೇಲೆ ಹಲ್ಲೆ
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಕಿರುತೆರೆ ನಟಿಯರು ಹಲ್ಲೆ ನಡೆಸಿದ ಘಟನೆ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.ಬಸವೇಶ್ವರ ನಗರ ಪೊಲೀಸರು ನಟಿಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಮಾಹಿತಿಯ ಪ್ರಕಾರ, ಘಟನೆಯ ವಿವರಗಳು ಹೀಗಿವೆ.
ಕಿರುತೆರೆ ಹಾಗೂ ಹಿರಿತೆರೆಯ ನಟಿ ಮೈತ್ರಿಯಾ (ಮಾಲಿಂಗ ಚಿತ್ರದ ನಾಯಕಿ), ಸುಪ್ರಿಯಾ ಸೇರಿದಂತೆ ಒಟ್ಟು ಐದು ಮಂದಿ ಸ್ಯಾಂಟ್ರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಿಗ್ನಲ್ ಜಂಪ್ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ ಸಂಚಾರಿ ಪೊಲೀಸ್ ಪೇದೆ ಶಿವಕುಮಾರ್ ಮತ್ತು ಸಬ್ ಇನ್ಸ್ಪೆಕ್ಟರ್ ರಾಜಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಸಿಗ್ನಲ್ ಜಂಪ್ ಮಾಡಿ ಮುನ್ನುಗ್ಗುತ್ತಿದ್ದ ಅವರನ್ನು ಪೊಲೀಸ್ ಪೇದೆ ಶಿವಕುಮಾರ್ ತಡೆದಿದ್ದಾರೆ. ಬಳಿಕ ದಂಡ ಕಟ್ಟುವಂತೆ ಅವರಿಗೆ ಹೇಳಲಾಗಿದೆ. ಈ ವಿಚಾರವಾಗಿ ನಟಿ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಕಡೆಗೆ ಶಿವಕುಮಾರ್ ಅವರ ಶರ್ಟ್ನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಕಾರಣಕ್ಕೆ ಬಸವೇಶ್ವರ ಠಾಣೆಯ ಪೊಲೀಸರು ವಿಚಾರಣೆ ನಡೆಸಿದ್ದಾರೆ.ಇದಿಷ್ಟು ಪೊಲೀಸರ ಕಡೆಯಿಂದ ಕೇಳಿಬರುತ್ತಿರುವ ಆರೋಪ. ಆದರೆ ಕಿರುತೆರೆ ನಟಿಯರಾದ ಮೈತ್ರಿಯಾ ಮತ್ತು ಸುಪ್ರಿಯಾ ತತ್ಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಪ್ರತಿಕ್ರಿಯಿಸಿದ ಬಳಿಕ ಪೂರ್ಣ ಸತ್ಯ ಹೊರಬೀಳಲಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











