ಆಗಸ್ಟ್ ಹೊತ್ತಿಗೆ ರೆಡ್ಡಿಗಳ ಕನಸಿನ ಕೂಸು ಜನನ

ಈ 24X 7 ಸುದ್ದಿವಾಹಿನಿಗೆ ಗಣಿಧಣಿಗಳು ಎಷ್ಟು ಹಣ ಹೂಡಿದ್ದಾರೆ ಎಂದು ತಿಳಿದುಬಂದಿಲ್ಲ. ಗಣಿಗಾರಿಕೆಯಲ್ಲಿ ತೊಡಗಿಸುವ ಬಂಡಾವಳಕ್ಕೆ ಹೋಲಿಸಿದರೆ, ಸುದ್ದಿವಾಹಿನಿ ಆರಂಭಕ್ಕೆ ಅಲ್ಪ ಪ್ರಮಾಣದ ಮೊತ್ತವಿದ್ದರೆ ಸಾಕು. ಈಗಾಗಲೇ ಕುಮಾರಸ್ವಾಮಿ ಹಾಗೂ ದೇವೇಗೌಡರ ಜೆಡಿಎಸ್ ಮುಖವಾಣಿಯಾಗಿ ಕಸ್ತೂರಿ ವಾಹಿನಿ , ಕಾಂಗ್ರೆಸ್ ಪಕ್ಷದ ಜಾರಕಿಹೊಳಿ ಆರಂಭಿಸಿರುವ 'ಸಮಯ' ವಾಹಿನಿ ಜೊತೆಗೆ ನೇರ ಯುದ್ಧ ಸಾರಲು ರೆಡ್ಡಿಗಳ ಚಾನೆಲ್ ಬರಲಿದೆ.
ಅಂದ ಹಾಗೆ, ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ'ಎಂದು ಹೆಸರಿಡಲಾಗಿದೆ. ಕೇಳುವುದಕ್ಕೆ ಯಾವುದೋ ಸರ್ಕಾರಿ ಯೋಜನೆಯ ಹೆಸರಿನಂತಿದ್ದರೂ, ಇದರರ್ಥ ಬೇರೆ ಇದೆ. ಜನಾರ್ದನ ರೆಡ್ಡಿ ಹೆಸರಿನಿಂದ 'ಜನ' ಹಾಗೂ ಶ್ರೀ ರಾಮುಲು ಹೆಸರಿನಿಂದ 'ಶ್ರೀ' ತೆಗೆದು 'ಜನಶ್ರೀ' ಎಂದು ಹೆಸರಿಸಲಾಗಿದೆಯಂತೆ.
ನಗರದ ಶ್ರೀಮಂತ ಬಡಾವಣೆಗಳಲ್ಲಿ ಒಂದೆನಿಸಿರುವ ಕೋರಮಂಗಲದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಜನಶ್ರೀ ವಾಹಿನಿ ಹೊಂದಲಿದೆ. ಅಗಷ್ಟ್ ವೇಳೆಗೆ ಸುದ್ದಿವಾಹಿನಿ ಪ್ರಸಾರ ಆರಂಭವಾಗುವ ಸಾಧ್ಯತೆಯಿದ್ದರೂ, ಶುಭ ಮಹೂರ್ತಕ್ಕಾಗಿ ದಸರಾ ಅಥವಾ ದೀಪಾವಳಿಯ ವರೆಗೂ ಕಾಯಲು ರೆಡ್ಡಿಗಳು ಸಿದ್ಧರಾಗಿದ್ದರಂತೆ. ಈ ಸುದ್ದಿವಾಹಿನಿರಾಜ್ಯದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕನಸಿನ ಕೂಸಾದರೂ, ವಾಹಿನಿಯ ದೈನಂದಿನ ಕೆಲಸದಲ್ಲಿ ಅವರು ತಲೆ ಹಾಕುವುದಿಲ್ಲವಂತೆ. ಅಧಿಕೃತವಾಗಿ ಇನ್ನೂ ಸುದ್ದಿ ಹೊರಬಿದ್ದಿಲ್ಲವಾದ್ದರಿಂದ, ತಾಳ್ಮೆಯಿಂದ ಕಾಯಲೇಬೇಕು.


Click it and Unblock the Notifications











