ಶೀಘ್ರದಲ್ಲೆ ಸುವರ್ಣ ವಾಹಿನಿಯಲ್ಲಿ ಪಡುವಾರಳ್ಳಿ ಪಡ್ಡೆಗಳು
"ಎಸ್ಎಸ್ಎಲ್ಸಿ ನನ್ ಮಕ್ಳು" ನಂತಹ ಶುದ್ಧ ತರಲೆ ಧಾರಾವಾಹಿ ನಿರ್ದೇಶಿಸಿದ್ದ ಮಾಸ್ಟರ್ ಆನಂದ್ ಈಗ ಮತ್ತೊಂದು ಮನರಂಜನಾತ್ಮಕ ಧಾರಾವಾಹಿಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಾಸ್ಯ ಧಾರಾವಾಹಿ ಹೆಸರು ' ಪಡುವಾರಳ್ಳಿ ಪಡ್ಡೆಗಳು'. ಸುವರ್ಣ ವಾಹಿನಿಯಲ್ಲಿ ಏ.25ರಿಂದ ಪ್ರತಿನಿತ್ಯ ರಾತ್ರಿ 10.30ಕ್ಕೆ ಸರಿಯಾಗಿ ಪ್ರಸಾರವಾಗಲಿದೆ.
"ಸುವರ್ಣ ವಾಹಿನಿಯಲ್ಲಿ ಕಳೆದ ಕೆಲ ದಿನಗಳಿಂದ ಕಾಮಿಡಿ ಮಿಸ್ ಆಗುತ್ತಿದೆ. ಬೆಳಗ್ಗೆಯಿಂದ ಸಂಜೆ ತನಕ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಮೂಲಕ ಶೃಂಗಾರ, ಹಾಸ್ಯ, ಕರುಣ ರಸಗಳನ್ನು ಸವಿದ ಪ್ರೇಕ್ಷಕ ರಾತ್ರಿಯಾಗುತ್ತಿದ್ದಂತೆ ಒಂಚೂರು ಹಾಸ್ಯರಸವನ್ನು ನಿರೀಕ್ಷಿಸುತ್ತಾನೆ."ಎಸ್ಎಸ್ಎಲ್ಸಿ ನನ್ ಮಕ್ಳು" ಧಾರಾವಾಹಿ ಆ ಕೊರತೆಯನ್ನು ನೀಗಿಸಿತ್ತು." ಎನ್ನುತ್ತಾರೆ ಸುವರ್ಣ ಟಿವಿಯ ಬ್ಯುಸಿನೆಸ್ ಮುಖ್ಯಸ್ಥ ಅನೂಪ್ ಚಂದ್ರಶೇಖರನ್.
ಈಗ ಮೂಡಿಬರಲಿರುವ "ಪಡುವಾರಳ್ಳಿ ಪಡ್ಡೆಗಳು" ಹಾಸ್ಯ ಧಾರಾವಾಹಿ ಅರೆ ಗ್ರಾಮೀಣ ಹಿನ್ನೆಲೆಯುಳ್ಳದ್ದು. ನಿರುದ್ಯೋಗಿ ಯುವಕರ ಜೀವನದಲ್ಲಿ ನಡೆಯುವ ಪ್ರತಿನಿತ್ಯದ ತಿಳಿಹಾಸ್ಯವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದೇವೆ. ಈಗ ಪ್ರಸಾರವಾಗುತ್ತಿರುವ ಬಹುತೇಕ ಹಾಸ್ಯ ಧಾರಾವಾಹಿಗಳು ನಗರ ಹಾಗೂ ಕುಟುಂಬ ಕೇಂದ್ರೀಕೃತವಾಗಿವೆ. "ಪಡುವಾರಳ್ಳಿ ಪಡ್ಡೆಗಳು" ಧಾರಾವಾಹಿ ಗ್ರಾಮೀಣ ಹಿನ್ನೆಲೆಯುಳ್ಳದ್ದಾಗಿದ್ದು, ಪ್ರೇಕ್ಷಕರನ್ನು ಖಂಡಿತ ಹಿಡಿದಿಡುತ್ತದೆ ಎಂಬ ವಿಶ್ವಾಸವನ್ನು ಮಾಸ್ಟರ್ ಆನಂದ್ ವ್ಯಕ್ತಪಡಿಸಿದ್ದಾರೆ.


Click it and Unblock the Notifications











