ಅಭಿಮಾನಿಯ ಮನದಾಸೆ ತಣಿಸಿದ ರಿಯಲ್ ಸ್ಟಾರ್
ಅಭಿಮಾನಿಯ ಮನದಾಸೆ ತಣಿಸಲು ಜೀ ಕನ್ನಡ ವೇದಿಕೆಗೆ ರಿಯಲ್ಸ್ಟಾರ್ ಉಪೇಂದ್ರಆಗಮಿಸಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಿಸುತ್ತಿರುವ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ನಾನಿರುವುದೆ ನಿಮಗಾಗಿ' ಈಗ ತನ್ನದೇ ಆದ ವಿಶೇಷಗಳೊಂದಿಗೆ ಜನಮನ ಗೆದ್ದಿದೆ.
ಸಂಚಿಕೆಯಿಂದ ಸಂಚಿಕೆಗೆ ಉತ್ತಮ ನೈಜ ಕಥೆಗಳನ್ನು ನೀಡುತ್ತಿರುವ ಕಾರ್ಯಕ್ರಮಕ್ಕೆ ಮತ್ತೋರ್ವ ಕನ್ನಡ ಚಲನಚಿತ್ರ ರಂಗದ ಜನಪ್ರಿಯ ನಾಯಕ ನಟ ಹಾಗೂ ನಿರ್ದೇಶಕ ಉಪೇಂದ್ರ ಅಥಿತಿಯಾಗಿ ಆಗಮಿಸಿದ್ದಾರೆ. ಅದೂ ಅಭಿಮಾನಿಯೊಬ್ಬರ ಮನದಾಸೆಯನ್ನು ತಣಿಸಲು ಎಂಬುದು ವಿಶೇಷ.
ಈ ಕುರಿತ ವಿವರಗಳು ಇದೇ ಮಂಗಳವಾರ(ಸೆ.28) ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ 'ನಾನಿರುವುದೇ ನಿಮಗಾಗಿ' ಕಾರ್ಯಕ್ರಮದಲ್ಲಿ ಭಿತ್ತರಗೊಳ್ಳಲಿವೆ. ಖ್ಯಾತ ನಾಯಕ ನಟ ಶಿವರಾಜ್ಕುಮಾರ್ ಪ್ರಸ್ತುತಪಡಿಸುತ್ತಿರುವ 'ನಾನಿರುವುದೆ ನಿಮಗಾಗಿ' ಕಾರ್ಯಕ್ರಮದಲ್ಲಿ ಸಾಮಾನ್ಯ ಜನರ ಅಪರೂಪದ ಆಸೆಗಳನ್ನು ಈಡೇರಿಸುವ ಪ್ರಯತ್ನವನ್ನು ಜೀ ಕನ್ನಡ ಮಾಡುತ್ತಿದೆ.
ಈ ನಿಟ್ಟಿನಲ್ಲಿ ನಟ ಉಪೇಂದ್ರ ಅವರನ್ನು ತನ್ನ ಆರಾಧ್ಯದೈವವೆಂದೇ ಭಾವಿಸಿ ಅವರ ಭೇಟಿಗಾಗಿ ಹಲವು ವರ್ಷಗಳಿಂದ ಹಂಬಲಿಸುತ್ತಿದ್ದ ಉಪೇಂದ್ರ ಅಭಿಮಾನಿಯ ಆಸೆಯನ್ನು ಈ ಸಂಚಿಕೆಯಲ್ಲಿ ನೆರವೇರಿಸಲಾಗಿದೆ ಎಂದು ಜೀ ಕನ್ನಡ ವ್ಯವಹಾರಗಳ ಮುಖ್ಯಸ್ಥರಾದ ಜೆ. ಶೇಖರ್ ತಿಳಿಸಿದ್ದಾರೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ


Click it and Unblock the Notifications











