ಕಿರುತೆರೆಯ ತಿರುಳಿಲ್ಲದ ಮಾತುಗಾರರಿವರು
ಬೆರಳೆಣಿಕೆಯಷ್ಟು ಮಂದಿಯನ್ನು ಹೊರತುಪಡಿಸಿದರೆ ಕನ್ನಡದ ಕಿರುತೆರೆ ವಾಹಿನಿಗಳಲ್ಲಿ ವಿವಿಧ ಸಂದರ್ಶನಗಳನ್ನು ತೆಗೆದುಕೊಳ್ಳುವವರು ಹಾಗೂ ಚರ್ಚೆಗಳನ್ನು ನಡೆಸಿಕೊಡುವವರು ತಿರುಳಿಲ್ಲದ ಮಾತುಗಾರರಂತೆ ಕಂಡುಬರುತ್ತಾರೆ. ಸಾಮಾಜಿಕ, ಸಾಹಿತ್ಯಿಕ, ಆಧ್ಯಾತ್ಮಿಕ, ಆರೋಗ್ಯಸಂಬಂಧಿ, ಸಂಗೀತಸಂಬಂಧಿ ವಿಷಯಗಳ ಬಗ್ಗೆ ವಿದ್ವಾಂಸರ ಸಂದರ್ಶನ ತೆಗೆದುಕೊಳ್ಳುವಾಗ ಈ ಮಾತುಗಾರರು ಕಂಠಪಾಠದ ವಾಕ್ಯಗಳನ್ನು ಒಪ್ಪಿಸುವಲ್ಲೇ ಸುಸ್ತಾಗುತ್ತಾರೆ.
"ಹೊಸ ರುಚಿ", "ಹಳೆ ತಿಂಡಿ"ಯಂಥ ಕಾರ್ಯಕ್ರಮಗಳಲ್ಲಿವರು ನಿರರ್ಥಕ ಉದ್ಗಾರಗಳಲ್ಲೇ ಕಾಲ ಕಳೆಯುತ್ತಾರೆ. ರಾಜಕಾರಣಿಗಳ ಅಥವಾ ರಾಜಕಾರಣ ಸಂಬಂಧಿತ ಸಂದರ್ಶನಗಳಲ್ಲಿ/ಚರ್ಚೆಗಳಲ್ಲಿ ಈ ಮಾತುಗಾರರು ಚರ್ಚೆಯ ವಿಷಯದ ಬಗ್ಗೆ ಅವಶ್ಯ ಮಾಹಿತಿಗಳನ್ನಾಗಲೀ ಸೂಕ್ತ ಪರಿಜ್ಞಾನವನ್ನಾಗಲೀ ಹೊಂದಿರದೆ ಅತಿಥಿಗಳೆದುರು ಬರಿದೆ ಎಗರಾಡುತ್ತಾರೆ!
ಚರ್ಚೆಯಲ್ಲಿ/ಸಂದರ್ಶನದಲ್ಲಿ ಭಾಗವಹಿಸಿದ ರಾಜಕಾರಣಿಗಳ ಅಥವಾ ರಾಜಕೀಯ ವಿಶ್ಲೇಷಕರ ಮಾತುಗಳನ್ನು ಅರ್ಧಕ್ಕೇ ತಡೆಯುವುದು, ಮಧ್ಯೆಮಧ್ಯೆ ಅರ್ಥಶೂನ್ಯ ಅಥವಾ ಅಧಿಕಪ್ರಸಂಗಿ ಪ್ರಶ್ನೆಗಳನ್ನು ಕೇಳುವುದು, ವಿಷಯಾಂತರ ಮಾಡುವುದು, ವಿಷಯ ಗೊತ್ತಿಲ್ಲದಿದ್ದರೂ ಮಹಾ ಗೊತ್ತಿದ್ದವರಂತೆ ನಟಿಸುವುದು, ಸುಮ್ಮಸುಮ್ಮನೇ ಅಟ್ಟಹಾಸ ಪ್ರದರ್ಶಿಸುವುದು, ಬುರುಡೆಯೊಳಗೆ ಜ್ಞಾನ ಇಲ್ಲದಿದ್ದರೂ ಮಹಾ ಜ್ಞಾನಿಯಂತೆ ಆಗಾಗ ವ್ಯಂಗ್ಯ ನಗು ಬೀರುವುದು, ಇಷ್ಟೇ ಈ ತಿರುಳಿಲ್ಲದ ಮಾತುಗಾರರ ಬಂಡವಾಳ.
ಇಂಥ ಸೋಗಿನವರ ಕೈಯಲ್ಲಿ, ಇಂಥ ತಿಳಿಗೇಡಿಗಳ ಕೈಯಲ್ಲಿ ಸಿಕ್ಕಿಬಿದ್ದ ರಾಜಕಾರಣಿಗಳು ಹಾಗೂ ರಾಜಕೀಯ ವಿಶ್ಲೇಷಕರು ತಮ್ಮ ಮನದ ಮಾತುಗಳನ್ನು ಹೊರಗೆಡಹಲು ಅವಕಾಶಕ್ಕಾಗಿ ಪರದಾಡುವುದನ್ನು ಕಿರುತೆರೆಯಲ್ಲಿ ನಾವು ಪ್ರತಿನಿತ್ಯ ನೋಡುತ್ತೇವೆ.ಅಬ್ಬರದ ಉಡುಗೆ ತೊಟ್ಟು, ಗೊಬ್ಬರದಂಥ ಮೇಕಪ್ ಮೆತ್ತಿಕೊಂಡು ಕ್ಯಾಮೆರಾದೆದುರು ಕೂತು ಕ್ಷಣಕ್ಷಣಕ್ಕೂ ಕೃತಕ ನಗು ಹೊರಹಾಕುತ್ತ, ಅವಿವೇಕವೋ, ಆರ್ಥಹೀನವೋ, ಅಧಿಕಪ್ರಸಂಗವೋ, ಒಟ್ಟು ಬಾಯಿಗೆಬಂದದ್ದನ್ನೆಲ್ಲ ಒದರುತ್ತ, ಅತಿಥಿಗಳಿಗೆ ಆಜ್ಞೆ ಮಾಡುತ್ತ ಅರ್ಧ ಗಂಟೆಯನ್ನೋ ಒಂದು ಗಂಟೆಯನ್ನೋ ಕಳೆದುಬಿಟ್ಟಾಕ್ಷಣ ಸಂದರ್ಶನ/ಚರ್ಚೆ ಸಾರ್ಥಕವಾಗುವುದಿಲ್ಲ, ಅದು ಸಾರ್ಥಕವಾಗಬೇಕಾದರೆ ಅದನ್ನು ಪ್ರಸ್ತುತಪಡಿಸುವ "ಪ್ರಭೃತಿ"ಗಳ ಮಿದುಳುಗಳಲ್ಲಿ ತಿರುಳು ಇರಬೇಕಾಗುತ್ತದೆ.


Click it and Unblock the Notifications











