ಮರಾಠಿ, ಬಂಗಾಳಿಗೆ ಕನ್ನಡ 'ಜೋಗುಳ'
ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿ ಯಶಸ್ವಿ 200 ಕಂತುಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ವಿನು ಬಳಂಜ ತಂಡ ಬೆಂಗಳೂರಿನ ಸಾಲಿಟೇರ್ ಹೋಟೆಲ್ ನಲ್ಲಿ ಶನಿವಾರ ಸಂಜೆ ಆಚರಿಸಿಕೊಂಡು ಖುಷಿಪಟ್ಟಿತು. ಇದೇ ಸಂದರ್ಭದಲ್ಲಿ ಖ್ಯಾತ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಮಂಜುನಾಥ ಹೆಗಡೆ ಅವರನ್ನು ಜೋಗುಳ ತಂಡ ಸನ್ಮಾನಿಸಿತು.
'ಜೋಗುಳ' ಬ್ಲಾಗ್ ಪುಸ್ತಕ 'ಕಾಡುವ ಬೆಳದಿಂಗಳು' ಸಹ ಅನಾವರಣಗೊಂಡಿತು. ಜೋಗುಳ ತಂಡದೊಂದಿಗೆ ಧರ್ಮಪ್ಪ ಗೌಡಮತ್ತು ಹಾಲಪ್ಪ ಚಾರ್ಯ ಉಪಸ್ಥಿತಿರಿದ್ದರು. ಜೋಗುಳ ಧಾರಾವಾಹಿಗೆ ಪ್ರೇಕ್ಷಕರಿಂದಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ವಿನುಬಳಂಜ ಅವರ ಕತೆಯಲ್ಲಿನ ಸತ್ವವೇ ಕಾರಣ ಎಂದರು ಜೀ ಕನ್ನಡ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ ಗುಂಡ್ಕಲ್.
ವಿನು ಬಳಂಜ ಮಾತನಾಡುತ್ತಾ, ಧಾರಾವಾಹಿಯೊಂದು 200 ಕಂತುಗಳನ್ನು ಪೂರೈಸುವುದು ಮುಖ್ಯವಲ್ಲ. ಉಳಿದ ಕೌಟುಂಬಿಕ ಧಾರಾವಾಹಿಗಳಿಗಿಂತ ಜೋಗುಳ ವಿಭಿನ್ನವಾಗಿತ್ತು. ಹಾಗಾಗಿ ಜೋಗುಳಕ್ಕೆ ಪ್ರೇಕ್ಷಕರು ಮನಸೋತರು ಎಂದರು. ಈ ಧಾರಾವಾಹಿಯಲ್ಲಿ ಬಾಡಿಗೆ ತಾಯಿಯಾಗುವುದು ದೇವಕಿ(ಪಾತ್ರಧಾರಿ ಜ್ಯೋತಿ ರೈ)ಗೆ ಹೇಗೆಅನಿವಾರ್ಯವಾಗುತ್ತದೆ ಎಂಬುದರ ಸುತ್ತ ಕತೆ ಸುತ್ತುತ್ತದೆ.
ಜೋಗುಳ ಧಾರಾವಾಹಿಯನ್ನು ನೋಡಿದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯ ದಕ್ಷಿಣ ಏಷ್ಯಾ ಮುಖ್ಯಸ್ಥೆ ನಮ್ಮ ಸಂಸ್ಥೆಗೆ ಭೇಟಿ ಕೊಟ್ಟು ಧಾರಾವಾಹಿಯ ಬಗ್ಗೆ ವಿವರಗಳನ್ನು ಪಡೆದರು. ಕರ್ನಾಟಕದಲ್ಲಿ ನಾಲ್ಕು ಮಂದಿ ಬಾಡಿಗೆ ತಾಯಂದಿರು ತಮಗೆ ಸಿಕ್ಕಿರುವುದಾಗಿ ಅವರು ತಿಳಿಸಿದರು. ಬಾಡಿಗೆ ತಾಯಂದಿರ ಕಷ್ಟ ಸುಖಗಳ ಬಗ್ಗೆ ಧಾರಾವಾಹಿಯಲ್ಲಿ ಮನಮಿಡಿಯುವಂತೆ ತೋರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾಗಿ ಗುಂಡ್ಕಲ್ ತಿಳಿಸಿದರು.
ಜೋಗುಳ ಧಾರಾವಾಹಿಗೆ ಸಂಭಾಷಣೆ ಮತ್ತು ಚಿತ್ರಕತೆಯನ್ನು ಸತ್ಯಮೂರ್ತಿ ಆನಂದೂರು ಬರೆದಿದ್ದಾರೆ. ಮತ್ತೊಂದು ಮುಖ್ಯ ಸುದ್ದಿ ಎಂದರೆ, ಈಗಾಗಲೇ ಜನಪ್ರಿಯವಾಗಿರುವ 'ಜೋಗುಳ' ಮರಾಠಿ ಮತ್ತು ಬಂಗಾಳಿ ಭಾಷೆಗಳಿಗೆ ರೀಮೇಕ್ ಆಗುತ್ತಿದೆ. ಮಾರಾಠಿಯಲ್ಲಿ 'ಅಗೈ' ಎಂದು ಹೆಸರಿಡಲಾಗಿದೆ. ಬಂಗಾಳಿ ಭಾಷೆಯ ಜೋಗುಳಕ್ಕೆ ಇನ್ನೂ ಹೆಸರಿಟ್ಟಿಲ್ಲ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











