50ನೇ ಸಂಚಿಕೆಯಲ್ಲಿ ಮಹತ್ತರ ತಿರುವು ಪಡೆಯಲಿದೆ 'ಸರ್ವ ಮಂಗಳ ಮಾಂಗಲ್ಯೇ'
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿರುವ 'ಸರ್ವ ಮಂಗಳ ಮಾಂಗಲ್ಯೇ' ಧಾರಾವಾಹಿ ಆಕ್ಟೋಬರ್ 8 ರಂದು 50 ಸಂಚಿಕೆಗಳನ್ನು ಪೂರೈಸಲಿದೆ.
ತಳಿರು ಕ್ರಿಯೇಶನ್ಸ್ ನಿರ್ಮಾಣ ಸಂಸ್ಥೆಯಡಿಯಲ್ಲಿ ಮೂಡಿ ಬರುತ್ತಿರುವ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯನ್ನು ಕಿರುತೆರೆಯ ಅನುಭವಿ ನಿರ್ದೇಶಕ ತ್ರಿಶೂಲ್ ನಿರ್ದೇಶನ ಮಾಡುತ್ತಿದ್ದು, 50 ನೇ ಸಂಚಿಕೆಯಲ್ಲಿ ಕಥೆ ಮಹತ್ತರ ತಿರುವು ಪಡೆಯಲಿದೆ.
ಸಂಸ್ಕಾರ, ಸಂಪ್ರದಾಯ ಹಾಗೂ ಧರ್ಮವನ್ನೇ ಬದುಕು ಅಂದುಕೊಂಡಿರುವ ನಾಯಕ ಮಹಾಶಂಕರ ಬಲವಂತವಾಗಿ ಪಾರ್ವತಿಯನ್ನು ಮದುವೆಯಾಗುತ್ತಾನೆ. ಈ ಮದುವೆ ದೈವ ನಿರ್ಣಯ ಎಂದು ಸಮರ್ಥಿಸಿಕೊಳ್ಳುವ ಮಹಾಶಂಕರನಿಗೆ ಪಾರ್ವತಿ ವ್ಯಕ್ತಿತ್ವ ಯಾವ ರೀತಿಯಲ್ಲೂ ಹೊಂದಿಕೊಳ್ಳುವುದಿಲ್ಲ. ಪಾರ್ವತಿಯ ಅಜ್ಜಿಗೆ ಸಾಲ ಕೊಟ್ಟು ಮನೆಯ ಪತ್ರವನ್ನು ಅಡವಿಟ್ಟುಕೊಂಡಿರುವ ಮಹಾಶಂಕರನಿಗೆ ಪಾರ್ವತಿ ಯಾರು ಎಂಬ ಸತ್ಯ ತಿಳಿದಿರುವುದಿಲ್ಲ.

ಸಮಯ ನೋಡಿ ತನ್ನ ಮನೆಯ ಪತ್ರವನ್ನು ಕದ್ದು ಊರಿಗೆ ವಾಪಾಸ್ ಹೊರಡುವ ಪ್ರಯತ್ನದಲ್ಲಿರುವ ಪಾರ್ವತಿಗೆ ಮಹಾಶಂಕರನ ಬದುಕಿನ ಅನೇಕ ಸತ್ಯಗಳು ತಿಳಿಯುತ್ತದೆ. ಈ ನಡುವೆ ಮಹಾಶಂಕರನಿಗೆ ಪಾರ್ವತಿಯೆಡೆಗೆ ಆಳವಾದ ಪ್ರೀತಿ ಬೆಳೆಯುತ್ತದೆ.
ಪತ್ರ ಕದಿಯುವ ಪಾರ್ವತಿ ಶಂಕರನ್ನು ಬಿಟ್ಟು ಹೋಗುತ್ತಾಳಾ ?
ಪತ್ರ ಕದ್ದ ತಕ್ಷಣ ಪಾರ್ವತಿ ಆಸ್ತಿ ಅವರ ಕುಟುಂಬಕ್ಕೆ ಸಿಗುತ್ತಾ ?
ಪಾರ್ವತಿಯನ್ನು ತೀವ್ರವಾಗಿ ಪ್ರೀತಿಸುವ ಮಹಾಶಂಕರ ಅವಳಿಲ್ಲದೇ ಬದುಕನ್ನು ಎದುರಿಸುತ್ತಾನಾ ?
ಅಥವಾ ಪಾರ್ವತಿಗೆ ಮಹಾಶಂಕರನ ಮೇಲೆ ಪ್ರೀತಿ ಹುಟ್ಟುತ್ತಾ ? ಈ ಎಲ್ಲ ಪ್ರಶ್ನೆಗಳಿಗೆ 50 ನೇ ಸಂಚಿಕೆಯ ನಂತರ ಉತ್ತರ ಸಿಗುತ್ತದೆ.
ಇದರ ನಡುವೆ ದಸರಾ ವಿಶೇಷ ಸಂಚಿಕೆಗಳೂ ಕೂಡಾ ಅಕ್ಟೋಬರ್ 8 ರಿಂದ ಪ್ರಸಾರವಾಗಲಿದ್ದು. ಇದನ್ನು ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ. ಈ ವಿಶೇಷ ಸಂಚಿಕೆಗೆ 'Rambo-2' ಹಾಗೂ 'ಮುಗುಳುನಗೆ' ಸಿನಿಮಾದ ನಾಯಕಿ ಆಶೀಕಾ ರಂಗನಾಥ್ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯ ನಾಯಕಿ ಪಾರ್ವತಿಗೆ ಸಹಾಯ ಮಾಡುವ ಸಂದರ್ಭ ಎದುರಾಗಲಿದೆ.


Click it and Unblock the Notifications











