'ಪ್ರೀತಿ ಎಂದರೇನು?' ಉತ್ತರ ಕೆಎಂ ಚೈತನ್ಯರಿಗೆ ಗೊತ್ತು!
'ಆ ದಿನಗಳು' ಚಿತ್ರ ಖ್ಯಾತಿಯ ಕೆ.ಎಂ. ಚೈತನ್ಯ ಅವರು ದ್ವಾರಕೀಶ್ ಪ್ರೊಡೆಕ್ಷನ್ ನ 'ಆಟಗಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಮುಗಿಸಿದ್ದಾರೆ. ಈಗ ಬೆಳ್ಳಿತೆರೆಯಿಂದ ಮತ್ತೊಮ್ಮೆ ಕಿರುತೆರೆಯತ್ತ ವಾಲಿದ್ದಾರೆ. ಪ್ರೀತಿ ಎಂದರೇನು? ಎಂಬ ವಿಷಯದ ಬಗ್ಗೆ ತಲೆಕೆಡಿಸಿಕೊಂಡವರಿಗೆ ಪ್ರಣಯಭರಿತ ಹಾಸ್ಯಧಾಟಿಯಲ್ಲಿ ಉತ್ತರ ನೀಡಲು ಸಿದ್ಧರಾಗಿದ್ದಾರೆ.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರ ಕವನ ಸಾಲುಗಳನ್ನು ಈ ಹಿಂದೆ ವಿನು ಬಳಂಜ ಅವರು ಬಳಸಿಕೊಂಡಿದ್ದರು. 'ಪ್ರೀತಿ ಇಲ್ಲದ ಮೇಲೆ' ಹಾಡು ಸೂಪರ್ ಹಿಟ್ ಆಗಿತ್ತು. ಧಾರಾವಾಹಿ ಕೂಡಾ ಕ್ಲಿಕ್ ಆಗಿತ್ತು. ಈಗ ಜಿಎಸ್ ಶಿವರುದ್ರಪ್ಪ ಅವರ ಕವನದ ಸ್ಪೂರ್ತಿ ಪಡೆದು ಅವರ ಮೊಮ್ಮಗ ಚೈತನ್ಯ ಅವರು ತಮ್ಮ ಹೊಸ ಪ್ರಯತ್ನಕ್ಕೆ 'ಪ್ರೀತಿ ಎಂದರೇನು' ಎಂದು ಹೆಸರಿಟ್ಟಿದ್ದಾರೆ.
ಬೆಳ್ಳಿ ತೆರೆ- ಕಿರುತೆರೆ ನಡುವೆ ಅಂತರ ವಿದ್ದರೂ ಪ್ರೇಕ್ಷಕ ವರ್ಗದಲ್ಲಿ ವ್ಯತ್ಯಾಸವಿದ್ದರೂ ಉತ್ತಮ ಕಥೆ ಮೂಲಕ ಎಲ್ಲರ ಮನ ಮುಟ್ಟಬಹುದು. ಪ್ರೇಕ್ಷಕರ ಪ್ರತಿಕ್ರಿಯೆ ಆಧಾರವಾಗಿಟ್ಟುಕೊಂಡು ನಮ್ಮನ್ನು ನಾವು ತಿದ್ದುಕೊಳ್ಳಲು ಅನೇಕ ಅವಕಾಶಗಳಿರುತ್ತದೆ ಎಂದು ಚೈತನ್ಯ ಹೇಳಿದರು.

ಕಿರುತೆರೆಯಲ್ಲಿ ಚೈತನ್ಯ ಅನುಭವ
ಈ ಹಿಂದೆ ಉಮಾಶ್ರೀ ಅಭಿನಯದ 'ಕಿಚ್ಚು' ನಂತರ 'ಮುಗಿಲು', 'ಒಂದಾನೊಂದು ಕಾಲದಲ್ಲಿ' ಮುಂತಾದ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದರು.
ಇದಲ್ಲದೆ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದ ಕಾಲದಿಂದಲೂ ಡಾಕ್ಯುಮೆಂಟರಿ ಮಾಡುವ ಕಲೆ ಇವರಿಗೆ ಒಲಿದಿದೆ ಬಿಬಿಸಿಗಾಗಿ 'ಕ್ಯಾನ್ಸರ್ ಕಥೆಗಳು', ಗಿರೀಶ್ ಕಾರ್ನಾಡ್ ಕುರಿತ' ನಡೆದು ಬಂದ ದಾರಿ' ಇವರ ಪ್ರತಿಭೆಗೆ ಸಾಕ್ಷಿಯಾಗಿದೆ.

ಧಾರಾವಾಹಿ ತಾರಾಗಣ ಬಗ್ಗೆ
* ಪರಾರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜಾನವಿ ಕಾಮತ್ ಹಾಗೂ ಶೃಂಗ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಲಿದ್ದಾರೆ.
* ರೊಮ್ಯಾಂಟಿಕ್ ಕಾಮಿಡಿ ಸೀರಿಯಲ್ ಇದಾಗಿದ್ದು, ಮನೆ ಮಂದಿಗೆಲ್ಲ ಮುದ ನೀಡಲಿದೆ ಎಂದು ಚೈತನ್ಯ ಹೇಳಿದ್ದಾರೆ.
* ಸುವರ್ಣ ವಾಹಿನಿಯಲ್ಲಿ ಮೇ 25 ರಿಂದ ಸಂಜೆ 6.30 ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

ಬೆಳ್ಳಿತೆರೆಯಲ್ಲಿ ಮಿಶ್ರಫಲ ಉಂಡ ಚೈತನ್ಯ
ಕಾನೂರು ಹೆಗ್ಗಡತಿ ಚಿತ್ರದಲ್ಲಿ ಗಿರೀಶ್ ಕಾರ್ನಾಡರಿಗೆ ಸಹಾಯಕರಾಗಿ ದುಡಿದು ಕ್ಯಾನ್ ಫಿಡಾ ಪ್ರಶಸ್ತಿ ಗಳಿಸಿದ್ದರು. ಆ ದಿನಗಳು ಚಿತ್ರದ ಮೂಲಕ ಪ್ರೇಕ್ಷಕರು, ವಿಮರ್ಶಕರ ಮೆಚ್ಚುಗೆ ಪಡೆದ ಚೈತನ್ಯ ಅವರು ನಂತರ ಟ್ರ್ಯಾಕ್ ಬದಲಾಯಿಸಲು ಹೋಗಿ ಹಳಿ ತಪ್ಪಿದರು.
ಸೂರ್ಯಕಾಂತಿ ಬೆಳಗಲಿಲ್ಲ. ಪರಾರಿ ಯಶಸ್ಸು ಗಳಿಸಲಿಲ್ಲ. ಈಗ ಚಿರಂಜೀವಿ ಸರ್ಜಾ ನಾಯಕರಾಗಿರುವ ಆಟಗಾರ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚೈತನ್ಯ ಹಾಗೂ ರಂಗಭೂಮಿ
ಪತ್ರಿಕೋದ್ಯಮ, ಕಿರುತೆರೆ, ಡಾಕ್ಯುಮೆಂಟರಿ, ಬೆಳ್ಳಿತೆರೆ ಜೊತೆಗೆ ರಂಗಭೂಮಿ ಜೊತೆಗೂ ಚೈತನ್ಯ ನಂಟು ಹೊಂದಿದ್ದಾರೆ. ಮಹೇಶ್ ಎಲ್ಕುಂಚ್ವಾರ್ ಅವರ ಮರಾಠಿ ನಾಟಕದ ಕನ್ನಡ ರೂಪಾಂತರಕ್ಕೆ ನಿರ್ದೇಶನ ಮಾಡಿದ್ದಾರೆ. ಕಂಬಾರರ ಸಾಂಬಶಿವ ಪ್ರಹಸನ, ಲಂಕೇಶರ ಸಂಕ್ರಾಂತಿ, ಪ್ರಸನ್ನ ಅವರ ದಂಗೆಯ ಮುಂಚಿನ ದಿನಗಳು, ಕಾರ್ನಾಡರ ಒಡಕಲು ಬಿಂಬ ಸೇರಿದಂತೆ ಇನ್ನೂ ರಂಗಭೂಮಿ ನಂಟು ಉಳಿಸಿಕೊಂಡಿದ್ದಾರೆ.
'ಪ್ರೀತಿ ಎಂದರೇನು?' ಪ್ರೊಮೋಗಳು
'ಪ್ರೀತಿ ಎಂದರೇನು?' ಧಾರಾವಾಹಿಯ ಪ್ರೊಮೋಗಳು, ಟೀಸರ್ ಎಲ್ಲವೂ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಹಾಟ್ ಸ್ಟಾರ್ ಆಂಡ್ರಾಯ್ಡ್ ಅಪ್ಲಿಕೇಷನ್ ನಿಮ್ಮ ಮೊಬೈಲಿನಲ್ಲಿದ್ದಾರೆ. ಈ ಧಾರಾವಾಹಿ ನಿಮ್ಮ ಜೊತೆಗೆ ಇರುತ್ತದೆ.


Click it and Unblock the Notifications











