ನೊಂದ ಜೀವಗಳಿಗೆ ಕಟ್ಟಿಸಿಕೊಟ್ಟ ಚೆಂದದ ಮನೆಗೆ ಜಗ್ಗೇಶ್-ಪರಿಮಳ ಹೆಸರು
ಮಧುಗಿರಿ ತಾಲ್ಲೂಕಿನ ಡಿ.ವಿ. ಹಳ್ಳಿಯ ಪ್ರತಿಭಾವಂತ ಅಂಧ ಸಹೋದರಿಗೆ ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳಾ ಸಹಾಯದ ಹಸ್ತ ಚಾಚಿದ್ದರು. ಸೂರಿಲ್ಲದ ಈ ಬಡ ಗಾಯನ ಪ್ರತಿಭೆಗಳಿಗೆ ಸೂರು ನೀಡುವ ಭರವಸೆ ಮೂಲಕ ಅವರಿಗೆ ದಾರಿದೀಪವಾಗಲು ಜಗ್ಗೇಶ್ ಮುಂದಾಗಿದ್ದರು. ಈ ಮನೆ ಸಿದ್ಧವಾಗಿದ್ದು, ಮಾರ್ಚ್ 12ರಂದು ಗೃಹಪ್ರವೇಶ ನಡೆಸುವುದಾಗಿ ತಿಳಿಸಲಾಗಿತ್ತು.
Recommended Video
ಈಗ ಈ ಮನೆಯ ಫೋಟೊವೊಂದು ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿರ್ಮಾಣ ಹಂತದಲ್ಲಿರುವ ಮನೆಯ ಬಹುತೇಕ ಕಾರ್ಯ ಪೂರ್ಣಗೊಂಡಿರುವುದನ್ನು ಈ ಚಿತ್ರ ತೋರಿಸುತ್ತದೆ. ಈ ಮನೆಗೆ ಜಗ್ಗೇಶ್-ಪರಿಮಳ ನಿಲಯ ಎಂದು ಹೆಸರಿಡಲಾಗಿದ್ದು, ಗೋಡೆಯ ಮೇಲೆ ಬಣ್ಣ ಬಣ್ಣದಲ್ಲಿ ಸಂಗೀತಾಕ್ಷರದ ಸಂಕೇತಗಳನ್ನು ಬಿಡಿಸಲಾಗಿದೆ. ತಾರಸಿಯಲ್ಲಿ ಕನ್ನಡ ಧ್ವಜವನ್ನು ನೆನಪಿಸುವ ಹಳದಿ-ಕೆಂಪು ಬಣ್ಣವನ್ನು ಬಳಿಯಲಾಗಿದೆ.

ಶೋದಲ್ಲಿ ಸಹೋದರಿಯರ ಕರಾಮತ್ತು
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ರತ್ನಮ್ಮ ಮತ್ತು ಮಂಜಮ್ಮ ಎಂಬ ಸಹೋದರಿಯರು ಖಾಸಗಿ ವಾಹಿನಿಯೊಂದರ ಗಾಯನ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ. ಈ ಕುಟುಂಬದ ಅಂಧ ಸಹೋದರಿಯರು ಹಾಡುವ ವಿಡಿಯೋ ಹಿಂದೆಯೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮಾನವೀಯತೆಯ ದೃಷ್ಟಿಯಿಂದ ಅವರಿಗೆ ರಿಯಾಲಿಟಿ ಶೋದಲ್ಲಿ ಅವಕಾಶ ನೀಡಲಾಗಿತ್ತು.

ಬಡತನದ ಬೇಗೆಯಲ್ಲಿ ಪ್ರತಿಭೆಗಳು
ಕಾರ್ಯಕ್ರಮದ ವೇಳೆ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತಮ್ಮ ಬದುಕಿನ ಸಂಕಷ್ಟಗಳನ್ನು ತೆರೆದಿಟ್ಟಾಗ ಎಲ್ಲರ ಕಣ್ಣಲ್ಲೂ ನೀರು ಜಿನುಗಿತ್ತು. ಕಿತ್ತು ತಿನ್ನುವ ಬಡತನಕ್ಕೆ ಬರೆ ಎಳೆದಂತೆ ಎದುರಾದ ದೃಷ್ಟಿಹೀನತೆ, ಜತೆಗೆ ಆಶ್ರಯಕ್ಕೂ ಕೊರತೆಯ ಅವರ ಬದುಕಿಗೆ ನೆರವಾಗಲು ನಟ ಜಗ್ಗೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದವರು ಸಹಾಯಹಸ್ತ ಚಾಚಿದ್ದರು,.

ಗುರುವಾರ ಗೃಹಪ್ರವೇಶ
ಮನೆಯೇ ಗತಿ ಇಲ್ಲದ ಅವರಿಗೆ ಮನೆ ಕಟ್ಟಿಸಿಕೊಡುವುದಾಗಿ ಜಗ್ಗೇಶ್ ಹೇಳಿದ್ದರು. ಅದರಂತೆ ಜಗ್ಗೇಶ್ ಮತ್ತು ಪರಿಮಳಾ ದಂಪತಿ ಆಸ್ಥೆ ವಹಿಸಿ ಈ ಪ್ರತಿಭೆಗಳಿಗೆ ಸೂರಿನ ಆಸರೆ ಕಲ್ಪಿಸಿದ್ದಾರೆ. ಈ ನಿವಾಸದ ಗೃಹಪ್ರವೇಶವು ಮಾರ್ಚ್ 12ರಂದು ನಡೆಯಲಿದೆ. ಇದರಲ್ಲಿ ಜಗ್ಗೇಶ್ ದಂಪತಿಯ ಜತೆಗೆ ರಂಭಾಪುರಿ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಭಾಗವಹಿಸಲಿದ್ದಾರೆ.
ನಿಮ್ಮ ಕಾರ್ಯಕ್ಕೆ ಧನ್ಯವಾದಗಳು
ನವರಸ ನಾಯಕ ಜಗ್ಗೇಶ್ ರವರು ಜೀ ಕನ್ನಡ ವಾಹಿನಿ ಜನಮನ್ನಣೆ ಗಳಿಸಿರುವ ಸರಿಗಮಪದ ಮಧುಗಿರಿಯ ಅಂಧ ಗಾಯಕಿಯರಿಗೆ ಕಟ್ಟಿಸಿ ಕೊಟ್ಟಿರುವ ಮನೆ. ಜಗ್ಗೇಶ್ ಸಾರ್ ನಿಮ್ಮ ಈ ಕಾರ್ಯ ಸದಾ ಹೀಗೆ ಸಾಗಲಿ ಧನ್ಯವಾದಗಳು ಎಂದು ಯೋಗೀಶ್ ಅರಸೀಕೆರೆ ಎಂಬುವವರು ಟ್ವೀಟ್ ಮಾಡಿದ್ದಾರೆ.
ಗುಡಿಸಲು ಮುಕ್ತ ಕನಸು ನನಸಾಗುತ್ತದೆ
ನವರಸ ನಾಯಕ ಜಗ್ಗೇಶ್ ರವರು ಮಧುಗಿರಿ ಅಂಧ ಗಾಯಕಿಯರಿಗೆ ಮನೆ ನಿರ್ಮಿಸಿ ಕೊಟ್ಟಿದ್ದಾರೆ ! ಪ್ರತಿಯೊಬ್ಬರಿಗೂ ಈ ಕಳಕಳಿ ಇದ್ದರೆ ಗುಡಿಸಲುಮುಕ್ತ ಕನಸು ನನಸಾಗುವುದು. ನವರಸ ನಾಯಕ ಜಗ್ಗೇಶ್ ಅಭಿಮಾನಿ ಬಳಗ ಕೋರಟೆಗೆರೆ ಇವರಿಗೂ ಅಭಿನಂದನೆಗಳು ಎಂದು ವೀರೇಶ್ ಎಸ್ಜಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











