ಚೈತ್ರ ಕೋಟ್ಟೂರು ವಿವಾದ: ಸುದೀಪ್ ಗೆ ದಲಿತ ಪರ ಸಂಘಟನೆಗಳ ಎಚ್ಚರಿಕೆ
ಬಿಡದಿ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿ ಚೈತ್ರ ಕೋಟ್ಟೂರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿ ಎದುರು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ನೇತೃತ್ವದಲ್ಲಿ ದಲಿತ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬಿಗ್ ಬಾಸ್ ಮನೆಯ ಎದುರು ಸ್ಪರ್ಧಿ ಚೈತ್ರ ಕೋಟ್ಟೂರು ವಿರುದ್ಧ ದಿಕ್ಕಾರ ಕೂಗಿ ಅವರ ಭಾವಚಿತ್ರವಿರುವ ಪ್ಲೆಕ್ಸ್ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಚೈತ್ರ ಕೋಟ್ಟೂರು ನೀಡಿರುವ ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆಯಿಂದ ದಲಿತ ಸಮುದಾಯದ ಪ್ರತಿಯೊಬ್ಬರಿಗೂ ಧಕ್ಕೆ ತಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ದಲಿತ ಜನಾಂಗದ ವಿಚಾರಕ್ಕೆ ಯಾರೇ ಬಂದರು ಸಹಿಸುವುದಿಲ್ಲ. ಚೈತ್ರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದರು.

ಬಿಗ್ ಬಾಸ್ ಶೋನ ಟಾಸ್ಕ್ ನಲ್ಲಿ ಚೈತ್ರ ಕೊಟ್ಟೂರು ತಮ್ಮ ಸಹ ಸ್ಪರ್ಧಿ ಹರೀಶ್ರಾಜ್ ಜೊತೆ ಮಾತನಾಡುವ ಸಮಯದಲ್ಲಿ ನನ್ನ ಜೊತೆ ನೀವು ಓಡಾಡುತ್ತಿಲ್ಲ, ನನ್ನ ಮುಟ್ಟಲು ಸಹ ಹಿಂಜರಿಯುತ್ತೀರಿ, ನಾನೇನು ಅಸ್ಪೃಶ್ಯಳೆ ಎಂದಿರುವುದು ಪ್ರಸಾರವಾಗಿದೆ. ಈ ರೀತಿ ದಲಿತರನ್ನು ಪ್ರಸ್ತಾಪಿಸಿ ಮಾತನಾಡಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದ್ದು, ಕಾರ್ಯಕ್ರಮದ ನಿರೂಪಕರಾಗಿರುವ ಚಿತ್ರ ನಟ ಸುದೀಪ್ ಅವರು ಚೈತ್ರ ಕೋಟ್ಟೂರು ಅವರ ಹೇಳಿಕೆಯನ್ನು ಖಂಡಿಸಬೇಕು. ಇಲ್ಲದೇ ಹೋದಲ್ಲಿ ಸುದೀಪ್ ವಿರುದ್ಧವಾಗಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


Click it and Unblock the Notifications











