'ಜೊತೆ ಜೊತೆಯಲಿ' ಇರೋಣ ಸ್ವಲ್ಪ ತಾಳ್ಮೆಯಿಂದಿರಿ ಎಂದ ನಟ ಅನಿರುದ್ಧ್; ಸೃಜನ್ ಹಾದಿ ಹಿಡಿಯಿರಿ ಎಂದ ಫ್ಯಾನ್ಸ್
ಜೊತೆ ಜೊತೆಯಲಿ ಧಾರಾವಾಹಿ ಮೂಲಕ ನಟನೆಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನಟ ಅನಿರುದ್ಧ್ ಈ ಧಾರಾವಾಹಿಯ ಪಾತ್ರವಾದ ಆರ್ಯವರ್ಧನ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಈ ಧಾರಾವಾಹಿ ಅನಿರುದ್ಧ್ ಅವರ ಕಮ್ ಬ್ಯಾಕ್ ಎಂದೇ ಹೇಳಬಹುದು ಹಾಗೂ ಈ ಧಾರಾವಾಹಿ ಮೂಲಕ ಅನಿರುದ್ಧ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಹುಟ್ಟಿಕೊಂಡಿತ್ತು. ಆದರೆ ಇದೀಗ ಅನಿರುದ್ಧ್ ಅವರು ತಮಗೆ ಕೀರ್ತಿ ತಂದುಕೊಟ್ಟ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರಬಿದ್ದಿದ್ದಾರೆ. ಧಾರಾವಾಹಿಯ ನಿರ್ದೇಶಕ ಮತ್ತು ನಟ ಅನಿರುದ್ಧ್ ನಡುವೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಧಾರಾವಾಹಿ ತಂಡ ಅನಿರುದ್ಧ್ ಅವರನ್ನು ಹೊರಹಾಕಿದೆ. ಈ ವಿಚಾರವಾಗಿ ಕಳೆದ ಕೆಲ ವಾರಗಳಿಂದ ಸಾಕಷ್ಟು ವಿವಾದ ಕೂಡ ಸೃಷ್ಟಿಯಾಗಿತ್ತು.
ನಟ ಅನಿರುದ್ಧ್ ನಿರ್ದೇಶಕರು ಹೇಳಿದ ದೃಶ್ಯಗಳಲ್ಲಿ ಅಭಿನಯಿಸಲು ನಿರಾಕರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು ಹಾಗೂ ಈ ಕಾರಣಕ್ಕಾಗಿಯೇ ಮನಸ್ತಾಪ ಉಂಟಾಗಿ ಅನಿರುದ್ಧ್ ಅವರನ್ನು ಧಾರಾವಾಹಿಯಿಂದ ಹೊರಗಿಟ್ಟು 2 ವರ್ಷಗಳ ಕಾಲ ಯಾವುದೇ ಧಾರಾವಾಹಿಯಲ್ಲಿಯೂ ನಟಿಸುವ ಅವಕಾಶ ನೀಡಬಾರದು ಎಂಬ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಹೀಗೆ ಭಾರಿ ವಿವಾದ ಎದ್ದ ನಂತರ ಧಾರಾವಾಹಿಯಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಅಪಘಾತವಾದಂತೆ ತೋರಿಸಲಾಗಿದ್ದು, ಕಡ್ಡಾಯವಾಗಿ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲೇಬೇಕು ಎಂದು ಪ್ರಸಾರ ಮಾಡಲಾಗಿದೆ. ಈ ಮೂಲಕ ಅನಿರುದ್ಧ್ ನಿರ್ವಹಿಸುತ್ತಿದ್ದ ಆರ್ಯವರ್ಧನ್ ಪಾತ್ರಕ್ಕೆ ಬೇರೊಬ್ಬ ನಟ ಬರುವುದು ಖಚಿತವಾಗಿದ್ದು, ಈ ವೇಳೆ ಅನಿರುದ್ಧ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
" ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ, ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಋುಣಿ. ತಮ್ಮ ಪ್ರಯತ್ನಗಳಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತ ದಯವಿಟ್ಟು ನಿರಾಶೆಗೊಳ್ಳಬೇಡಿ. ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ. ಯಾವಾಗಲೂ ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ" ಎಂದು ಬರೆದುಕೊಂಡಿದ್ದಾರೆ.

ನೀವಿಲ್ಲದ ಜೊತೆಜೊತೆಯಲಿ ಶೂನ್ಯ ಎಂದ ಫ್ಯಾನ್ಸ್
ಅನಿರುದ್ಧ್ ಅವರ ಈ ಪೋಸ್ಟ್ಗೆ ಅವರ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡಿದ್ದು, ನೀವಿಲ್ಲದ ಜೊತೆ ಜೊತೆಯಲಿ ಶೂನ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆ ಪಾತ್ರಕ್ಕೆ ನಿಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಸಹ ಸೆಟ್ ಆಗುವುದಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸೃಜನ್ ಲೋಕೇಶ್ ಹಾದಿ ಹಿಡಿಯಿರಿ
ಮತ್ತೋರ್ವ ಅಭಿಮಾನಿ ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದು ನೀವು ಸಹ ಸೃಜನ್ ಲೋಕೇಶ್ ರೀತಿ ನಿಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಹಾಗೂ ಇದಕ್ಕೆ ನಮ್ಮ ಬೆಂಬಲ ಮತ್ತು ಹಾರೈಕೆ ಯಾವಾಗಲೂ ಇರುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೂ ಇನ್ನೂ ಕೆಲ ಅಭಿಮಾನಿಗಳು ಇದು ಆರ್ಯವರ್ಧನ್ ಅವರಿಗೆ ಉತ್ತಮ ಸಲಹೆ ಎಂದು ಕಾಮೆಂಟ್ ಬೆಂಬಲಿಸಿದ್ದಾರೆ.

ಇಬ್ಬರಲ್ಲಿ ತಪ್ಪು ಯಾರದ್ದು ಅರ್ಥವಾಗುತ್ತಿಲ್ಲ!
ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿದ್ದು ಇಬ್ಬರಲ್ಲಿ ತಪ್ಪು ಯಾರದ್ದು ಎಂಬುದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಧಾರಾವಾಹಿ ತಂಡದವರು ಇಷ್ಟೆಲ್ಲಾ ಆದಮೇಲೂ ಅನಿರುದ್ಧ್ ಅವರು ನಮಗೆ ಒಂದು ಫೋನ್ ಮಾಡಲಿಲ್ಲ ಅಂತಾರೆ ನೀವು ನೋಡಿದ್ರೆ ಅವರು ಕರೆಯಲಿಲ್ಲ ಅಂತೀರಾ, ಇಬ್ಬರಲ್ಲಿ ಯಾರಾದರೂ ಒಬ್ಬರಾದರೂ ಸೋಲಲಿಲ್ಲ ಎಂದು ಬರೆದಿದ್ದಾರೆ.


Click it and Unblock the Notifications











