ಅರುಣ್ ಸಾಗರ್ 'ಬಿಗ್ ಬಾಸ್' : ಓದುಗರ ಆಯ್ಕೆ
ಈಟಿವಿ ಕನ್ನಡ ವಾಹಿನಿಯ ಜನಪ್ರಿಯ ಶೋ ಬಿಗ್ ಬಾಸ್ ವಿನ್ನರ್ ಯಾರು ಎಂಬುದನ್ನು ಕರ್ನಾಟಕದ ಜನತೆ ಈಗಾಗಲೆ ತೀರ್ಮಾನಿಸಿಯಾಗಿದೆ. ಭಾನುವಾರ (ಜೂನ್ 30) ರಾತ್ರಿ 8ಗಂಟೆಗೆ ಗ್ರ್ಯಾಂಡ್ ಫಿನಾಲೆಯಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ. ಇದಕ್ಕೂ ಮುನ್ನ ನಮ್ಮ ಓದುಗರು ಕೊಟ್ಟ ತೀರ್ಪು ಏನು ಗೊತ್ತೇ? [ವಿಜಯ್ ರಾಘವೇಂದ್ರ ಬಿಗ್ ಬಾಸ್]
ಕಿರುತೆರೆ ವಾಹಿನಿಗಳ ನಡುವೆ ಅತೀವ ಪೈಪೋಟಿ ಶುರುವಾದ ದಿನದಿಂದ ಟಿಆರ್ ಪಿಯನ್ನು ಮೇಲೆತ್ತುವಂತಹ ಕಾರ್ಯಕ್ರಮಗಳಿಗಾಗಿ ನಿರಂತರ ಹುಡುಕಾಟ ನಡೆಯುತ್ತಲೇ ಇದೆ. ರಮಾನಂದ್ ಸಾಗರ್ ಅವರ 'ರಾಮಾಯಣ' ಧಾರಾವಾಹಿ ಪಾತಳ ಕಚ್ಚಿದ್ದ ದೂರದರ್ಶನ ವಾಹಿನಿಯ ಟಿಆರ್ ಪಿಯನ್ನು ಮೇಲಕ್ಕೆತ್ತಿತ್ತು.
ಒಟ್ಟು 78 ಕಂತುಗಳಲ್ಲಿ ಪ್ರತಿ ಭಾನುವಾರ ಬೆಳಗ್ಗೆ 9.30ಕ್ಕೆಲ್ಲಾ ಪ್ರಸಾರವಾಗುತ್ತಿದ್ದ 'ರಾಮಾಯಣ' ಧಾರಾವಾಹಿ ಆಬಾಲವೃದ್ಧರಾಗಿ ಎಲ್ಲರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 1987-88ರಲ್ಲೇ 100 ದಶಲಕ್ಷ ವೀಕ್ಷಕರನ್ನು ಸೆಳೆಯುವ ಮೂಲಕ ಜನಪ್ರಿಯ ಧಾರಾವಾಹಿಯಾಗಿ ಹೊರಹೊಮ್ಮಿದ್ದು ಇದರ ಹೆಚ್ಚುಗಾರಿಕೆ.
ಆರಂಭದಲ್ಲಿ ನಿಧಾನಕ್ಕೆ ಸಾಗಿದ ರಾಮಾಯಣ ಧಾರಾವಾಹಿಯ ಜನಪ್ರಿಯತೆ ಬರುಬರುತ್ತಾ ಉತ್ತುಂಗಕ್ಕೇರಿತು. ಭಾರತೀಯ ಕಿರುತೆರೆ ಅಧ್ಯಾಯದಲ್ಲೇ ಹೊಸ ದಾಖಲೆ ಬರೆದ ಖ್ಯಾತಿ ಈ ಧಾರಾವಾಹಿಯದು. ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಪೌರಾಣಿಕ ಧಾರಾವಾಹಿ ಎಂಬ ಖ್ಯಾತಿಗೂ ಪಾತ್ರವಾಯಿತು.

ಪೈಪೋಟಿ ನಡುವೆ ಬಂದ ರಿಯಾಲಿಟಿ ಶೋ
ಈಗ ಇದೇ ರೀತಿಯ ಸನ್ನಿವೇಶ ಹಾಗೂ ಸಂದರ್ಭ ಕನ್ನಡ ಕಿರುತೆರೆ ಜಗತ್ತಿನಲ್ಲೂ ಇಣುಕಿದೆ. ನಂಬರ್ ಒನ್ ಚಾನಲ್ ಆಗಲು ಎಲ್ಲ ವಾಹಿನಗಳ ನಡುವೆಯೂ ತೀವ್ರ ಪೈಪೋಟಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಬಂದಂತಹ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ'.

ಜನಪ್ರಿಯತೆ ಈಟಿವಿ ಕನ್ನಡಕ್ಕಷ್ಟೇ ಸೀಮಿತವಲ್ಲ
ಈ ಶೋನ ಜನಪ್ರಿಯತೆ ಕೇವಲ ಈಟಿವಿ ಕನ್ನಡಕ್ಕಷ್ಟೇ ಸೀಮಿತವಾಗಲಿಲ್ಲ. ಇದರ ಲಾಭವನ್ನು ಎಲ್ಲ ಟಿವಿ ವಾಹಿಗಳು ಪಡೆಯುವ ಪ್ರಯತ್ನ ಮಾಡಿದವು. ಅದರಲ್ಲೂ ಸುದ್ದಿ ವಾಹಿಗಳೂ ಈ ಬಿಗ್ ಬಾಸ್ ಸನ್ನಿಯಿಂದ ಹೊರಬರಲು ಸಾಧ್ಯವಾಗಲಿಲ್ಲ.

ಅಂತರ್ಜಾಲದಲ್ಲೂ ಜನಪ್ರಿಯವಾದ ಶೋ
ಇನ್ನೊಂದು ಮುಖ್ಯವಾದ ಅಂಶ ಎಂದರೆ ಮುದ್ರಣ ಮಾಧ್ಯಮದಿಂದ ಹಿಡಿದು ಅಂತರ್ಜಾಲ ಮಾಧ್ಯಮದವರೆಗೆ ಇದರ ಜನಪ್ರಿಯತೆಯ ಲಾಭ ಪ್ರಾಪ್ತಿಯಾಗಿದೆ. ಕನ್ನಡ ಕಿರುತೆರೆಯಲ್ಲಿ ಈ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಂತಹ ಕಾರ್ಯಕ್ರಮ ಇನ್ನೊಂದಿಲ್ಲ ಎಂದರೆ ಅತಿಶಯೋಕ್ತಿಯಲ್ಲ.

ಟಿಆರ್ ಪಿಯನ್ನು ಮೇಲಕ್ಕೆತ್ತಿದ ಕಾರ್ಯಕ್ರಮ
ಟಿಆರ್ ಪಿಯನ್ನು ಮೇಲೆತ್ತಲು ತಿಣುಕಾಡುತ್ತಿದ್ದ ವಾಹಿನಿಗಳಿಗೆ ಬಿಗ್ ಬಾಸ್ ವರದಾನವಾಯಿತು. ಹಾಗಂತ ಬಿಗ್ ಬಾಸ್ ಕಾರ್ಯಕ್ರಮ ಹೊಸದೇನು ಅಲ್ಲ. ಇದೊಂದು ರೀಮೇಕ್ ರಿಯಾಲಿಟಿ ಶೋ ಅನ್ನಬಹುದು. ಈ ಶೋನಲ್ಲಿ ಒಂದಷ್ಟು ಕನ್ನಡತನ ಇನ್ನೊಂದಿಷ್ಟು ಕನ್ನಡಿಗರಿದ್ದಾರೆ ಎಂಬ ಕಾರಣಕ್ಕೆ ವೀಕ್ಷಕರು ಒಪ್ಪಿಕೊಂಡರು.

ಸುದೀಪ್ ನಿರೂಪಣೆ ಇನ್ನೊಂದು ಆಕರ್ಷಣೆ
ಬಿಗ್ ಬಾಸ್ ಕಾರ್ಯಕ್ರಮವೇನೋ ಹಿಂದಿಯ 'ಬಿಗ್ ಬಾಸ್' ಅನುಕರಣೆಯಂತೆ ಕಂಡರೂ ಸುದೀಪ್ ಅವರ ನಿರೂಪಣೆ ಮಾತ್ರ ಸ್ವಂತಿಕೆಯಿಂದ ಕೂಡಿದ್ದು ಇನ್ನೊಂದು ಆಕರ್ಷಣೆ. ವಾರದಿಂದ ವಾರಕ್ಕೆ ವಿಕ್ಷಕನ್ನು ಹಿಡಿದಿಟ್ಟಿದ್ದು ಅವರ ನಿರೂಪಣೆಯ ವೈಶಿಷ್ಟ್ಯ. ಇನ್ನು ಬಿಗ್ ಬಾಸ್ ವಿನ್ನರ್ ಯಾರು ಎಂಬ ವಿಚಾರಕ್ಕೆ ಬರೋಣ.

ಬಿಗ್ ಬಾಸ್ ವಿನ್ನರ್ ಯಾರು ಪ್ರಶ್ನೆಗೆ ಸಿಕ್ಕಿತು ಉತ್ತರ
'ಬಿಗ್ ಬಾಸ್' ವಿನ್ನರ್ ಯಾರು ಎಂಬುದನ್ನು ಊಹಿಸಿ? ಎಂಬ ಪ್ರಶ್ನೆಯನ್ನು ನಮ್ಮ ಓದುಗ ದೊರೆಗಳ ಮುಂದಿಟ್ಟೆವು. ಈ ಪ್ರಶ್ನೆಗೆ ನಮ್ಮ ಓದುಗರು ಕೊಟ್ಟ ತೀರ್ಪು ನಿಜಕ್ಕೂ ಅಚ್ಚರಿ ಮೂಡಿಸಿದೆ. ಶುಕ್ರವಾರ (ಜೂನ್ 28) ಆರಂಭವಾದ ನಮ್ಮ ಆನ್ ಲೈನ್ ಓಟಿಂಗ್ ಇನ್ನೂ ತೆರೆದೆ ಇದೆ.

ಬಿರುಸಿನಿಂದ ಸಾಗಿದ ಮತದಾನ
ಇದುವರೆಗೂ (ಜೂನ್ 29, ಶನಿವಾರ ಸಂಜೆ 5.30ರ ಸಮಯದ ಪ್ರಕಾರ) ಈ ಆನ್ ಲೈನ್ ಮತದಾನದಲ್ಲಿ ಒಟ್ಟು 4393 ಮಂದಿ ಪಾಲ್ಗೊಂಡಿದ್ದಾರೆ. 'ಬಿಗ್ ಬಾಸ್' ಕಣದಲ್ಲಿರುವ ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನರೇಂದ್ರ ಬಾಬು ಶರ್ಮಾ ಹಾಗೂ ನಿಖಿತಾ ತುಕ್ರಲ್ ಅವರಿಗೆ ಬಿದ್ದ ಓಟುಗಳು ಇಂತಿವೆ.

ಅರುಣ್ ಸಾಗರ್ ಅವರಿಗೆ ನಮ್ಮ ಓದುಗರ ತೀರ್ಪು
ಅರುಣ್ ಸಾಗರ್ ಅವರು 1,889 ಮತಗಳಿಂದ ಎಲ್ಲರಿಗಿಂತಲೂ ಮುಂದಿದ್ದಾರೆ. ಎರಡನೇ ಸ್ಥಾನದಲ್ಲಿ ವಿಜಯ್ ರಾಘವೇಂದ್ರ 1,394 ಮತಗಳಿಂದ ಮುಂದಿದ್ದಾರೆ. ಇನ್ನು ನರೇಂದ್ರ ಬಾಬು ಶರ್ಮಾ (717) ಹಾಗೂ ನಿಖಿತಾ ತುಕ್ರಲ್ (393) ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ವಿಜಯ್ ರಾಘವೇಂದ್ರ
ಈ ನಾಲ್ಕು ಮಂದಿಯಲ್ಲಿ ಅರುಣ್ ಸಾಗರ್ ಅವರಿಗೆ ಅತಿಹೆಚ್ಚು ಮತಗಳು ಬಿದ್ದಿವೆ. ನಿಜವಾದ ಪೈಪೋಟಿ ಇರುವುದು ವಿಜಯ್ ರಾಘವೇಂದ್ರ ಹಾಗೂ ಅರುಣ್ ಸಾಗರ್ ನಡುವೆ. ನಮ್ಮ ಮತದಾನದ ಪ್ರಕಾರ ಅರುಣ್ ಸಾಗರ್ ಅವರು ಅತಿಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಇನ್ನೂ ಓಟಿಂಗ್ ಲೈನ್ಸ್ ಓಪನ್ ಆಗಿಯೇ ಇರುತ್ತದೆ. ನೀವೂ ಭಾಗವಹಿಸಿ.


Click it and Unblock the Notifications











