ಬಾಲಕಿ ಸಮನ್ವಿ ಸಾವು: ದೇವರೇ ಇಲ್ಲ ಎಂದ ಸೃಜನ್ ಲೋಕೇಶ್
ಮುದ್ದು ಬಾಲಕಿ ಸಮನ್ವಿಯ ಅಚಾನಕ್ ಸಾವು ಹಲವರನ್ನು ಭಾವುಕಗೊಳಿಸಿದೆ. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಮುದ್ದು ಮುದ್ದಾಗಿ ಮಾತನಾಡುತ್ತಾ, ತನ್ನ ಅಮ್ಮನೊಂದಿಗೆ, ಹಾಡುತ್ತಾ, ಕುಣಿಯುತ್ತಾ ಇದ್ದ ಬಾಲಕಿ ಸಮನ್ವಿ ನಿನ್ನೆ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
ಸಮನ್ವಿಯ ಅಕಾಲಿಕ ಅಗಲಿಕೆಗೆ ಹಲವರು ಕಂಬನಿ ಮಿಡಿದಿದ್ದಾರೆ. ಸಮನ್ವಿ ಹಾಡಿ ಕುಣಿಯುತ್ತಿದ್ದ 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನ ಜಡ್ಜ್ಗಳಾದ ತಾರಾ, ಸೃಜನ್ ಲೋಕೇಶ್, ಅನು ಪ್ರಭಾಕರ್ ಅಂತೂ ಸಮನ್ವಿಯ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಸಮನ್ವಿಯ ಅಗಲಿಕೆಯಿಂದ ತೀವ್ರವಾಗಿ ವ್ಯಾಕುಲಗೊಂಡಿರುವ 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನ ಜಡ್ಜ್ ಸೃಜನ್ ಲೋಕೇಶ್, ಸಮನ್ವಿಯ ಸಾವು ದೇವರ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ ಎಂದಿದ್ದಾರೆ.
ನನಗೆ ಹೆಣ್ಣು ಮಗುವಿಲ್ಲ ಎಂಬ ಕೊರಗು ಇದೆ, ಇಂತಹ ಮುದ್ದು ಮುದ್ದಾದ ಪುಟ್ಟ ಹೆಣ್ಣು ಮಕ್ಕಳನ್ನು ನೋಡಿದಾಗ ನಿಜಕ್ಕೂ ಖುಷಿಯಾಗುತ್ತಿತ್ತು, ನನಗೂ ಇಂಥಹಾ ಒಂದು ಹೆಣ್ಣು ಮಗು ಇರಬೇಕಿತ್ತು ಎನಿಸಿತ್ತು. ಜಗತ್ತನ್ನು ಇನ್ನೂ ನೋಡದ ಈ ಮಗು ಇಂದು ಇಲ್ಲ ಎಂದು ಹೇಳಲು ನಿಜಕ್ಕೂ ನೋವಾಗುತ್ತಿದೆ ಎಂದು ಸೃಜನ್ ಲೋಕೇಶ್ ಮಾಧ್ಯಮಗಳ ಬಳಿ ದುಃಖ ತೋಡಿಕೊಂಡಿದ್ದಾರೆ.

ದೇವರು ನಿಜವಾಗಿಯೂ ದೇವರ: ಸೃಜನ್ ಪ್ರಶ್ನೆ
''ದೇವರು ನಿಜವಾಗಿಯೂ ದೇವರ? ಅಥವ ದೇವರು ಇದ್ದಾನ? ಇಲ್ಲ ದೇವರನ್ನ ನಂಬಲೇಬೇಕಾ ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿದೆ. ಇವತ್ತು ನಿಜವಾಗಲೂ ಈ ಘಟನೆಯ ನಂತರ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯು, ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಸೃಜನ್ ಲೋಕೇಶ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.

ಪುನೀತ್ ನಿಧನರಾದಾಗಲೂ ದೇವರಿಗೆ ಶಾಪ ಹಾಕಿದ್ದ ಸೃಜನ್
ಪುನೀತ್ ರಾಜ್ಕುಮಾರ್ ನಿಧನರಾದಾಗಲೂ ಮಾಧ್ಯಮಗಳ ಬಳಿ ಮಾತನಾಡಿದ್ದ ನಟ ಸೃಜನ್ ಲೋಕೇಶ್, ''ದೇವರು ಮಾಡಿದ ಮಹಾಮೋಸ, ಅನ್ಯಾಯ ಇದು. ದೇವರಿಗೆ ಮನಸ್ಸೆಂಬುದು ಇಲ್ಲ ಎಂಬುದು ಇದರಿಂದ ನನಗೆ ಗೊತ್ತಾಗುತ್ತಿದೆ. ಎಂಥೆಂಥಹವರೋ ಇನ್ನೂ ಜೀವಂತ ಇದ್ದಾರೆ. ಆದರೆ ಸಾವಿರಾರು ಮಂದಿಗೆ ಸಹಾಯ ಮಾಡಿರುವ, ಆರೋಗ್ಯವಂತ ಜೀವನ ನಡೆಸಿಕೊಂಡು ಹೋಗುತ್ತಿದ್ದ ವ್ಯಕ್ತಿ ಹೀಗೆ ನಿಧನರಾಗುತ್ತಾರೆ ಎಂದರೆ ಇದು ಆ ದೇವರು ಮಾಡಿರುವ ಅನ್ಯಾಯ'' ಎಂದು ಸೃಜನ್ ಲೋಕೇಶ್ ಅಂದೂ ಸಹ ದೇವರನ್ನು ಶಪಿಸಿದ್ದರು.

ಬಿಕ್ಕಿ-ಬಿಕ್ಕಿ ಅತ್ತ ನಟಿ ತಾರಾ
ಸಮನ್ವಿ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿರುವ 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನ ಮತ್ತೊಬ್ಬ ಜಡ್ಜ್ ತಾರಾ, ''ಸಮನ್ವಿ ಅಂತೂ ಬಹಳ ಪ್ರತಿಭಾವಂತ ಮಗು. ಆಕೆ ನಡೆಯುವುದು, ನಿಲ್ಲುವುದು, ಮಾತನಾಡುವುದು ಎಲ್ಲವೂ ಒಂದು ರೀತಿ ವಿಭಿನ್ನ'' ಎಂದ ತಾರಾ, ''ಅದೇನೋ ಗೊತ್ತಿಲ್ಲ ಎಲ್ಲ ಮಕ್ಕಳು ನನ್ನೊಂದಿಗೆ ಬಹಳ ಆತ್ಮೀಯವಾಗಿರುತ್ತಿದ್ದರು. ಸೃಜನ್ ಲೋಕೇಶ್ ಸದಾ ರೇಗಿಸುತ್ತಿರುತ್ತಾನೆ. ಎಲ್ಲ ಮಕ್ಕಳು ನಿಮ್ಮ ಮನೆಗೆ ಬಂದು ಬಿಡುತ್ತಾವೆ, ನೀನೆ ಅವರಿಗೆ ತಾಯಿ ಆಗಿಬಿಟ್ಟಿದ್ದೀಯ ಎನ್ನುತ್ತಿರುತ್ತಾನೆ ಸಮನ್ವಿ ಇನ್ನಿಲ್ಲ ಎಂಬುದು ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಏಳು-ಎಂಟು ವಾರ ಆ ಬಾಲಕಿ ನಮ್ಮ ಜೊತೆ ಇದ್ದಳು. 'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ 12 ತಾಯಂದಿರು, 12 ಮಕ್ಕಳು ಇದ್ದರು. ನನಗೆ ಎಲ್ಲ ಮಕ್ಕಳೊಂದಿಗೂ ಆಪ್ತತೆ ಪ್ರಾರಂಭವಾಗಿಬಿಟ್ಟಿತ್ತು. ಆ ಶೋನ ಎಲ್ಲರೂ ನನಗೆ ಕುಟುಂಬ ಸದಸ್ಯರಿದ್ದಂತೆ. ಈಗ ಸಮನ್ವಿ ಹೋಗಿರುವುದು ನಮ್ಮ ಕುಟುಂಬ ಸದಸ್ಯೆ ಹೋದಂತೆ ಆಗಿದೆ'' ಎಂದಿದ್ದಾರೆ ತಾರಾ.

ಘಟನೆ ನಡೆದಿದ್ದು ಹೇಗೆ?
ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿ ಬಳಿ ಸ್ಕೂಟರ್ನಲ್ಲಿ ಅಮೃತಾ ಮತ್ತು ಸಮನ್ವಿ ಒಟ್ಟಿಗೆ ಬರುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಟಿಪ್ಪರ್ ಲಾರಿ ಬೈಕ್ಗೆ ಗುದ್ದಿದ ಪರಿಣಾಮ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಮೃತಾ ನಾಯ್ಡುಗೂ ಗಾಯಗಳಾಗಿವೆ. ಟಿಪ್ಪರ್ ಲಾರಿ ಡ್ರೈವರ್ ಅನ್ನು ಕೋಣನಕುಂಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.


Click it and Unblock the Notifications











