'ಬೆಣ್ಣೆ ದೋಸೆ' ಸೆಟ್ ನಲ್ಲಿ ರಮ್ಯಾ ಹುಟ್ಟುಹಬ್ಬ ಸಂಭ್ರಮ
ಅರುಣ್ ಸಾಗರ್ ನಿರೂಪಣೆ ಇರುವ 'ಬೆಂಗ್ಳೂರ್ ಬೆಣ್ಣೆ ದೋಸೆ' ಕಾರ್ಯಕ್ರಮ ಹೊಸ ರೂಪ ತಾಳಿದೆ. ಈ ಹೊಸ ರೂಪದ ಮೊದಲ ಸಂಚಿಕೆಗೆ ಮೋಹಕ ತಾರೆ ರಮ್ಯಾ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ.
ನವೆಂಬರ್ 29 ರಂದು ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ, ರಾಜಕಾರಣಿ, ಮಾಜಿ ಸಂಸದೆ ರಮ್ಯಾ ರವರ ಹುಟ್ಟುಹಬ್ಬ. ಆ ಸಂಭ್ರಮವನ್ನ 'ಬೆಂಗ್ಳೂರ್ ಬೆಣ್ಣೆ ದೋಸೆ' ಸೆಟ್ ನಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ರಮ್ಯಾ ರವರ ಹುಟ್ಟುಹಬ್ಬಕ್ಕೆ ಚಿತ್ರರಂಗದ ಅನೇಕ ದಿಗ್ಗಜರು ಶುಭಾಶಯ ಹೇಳಿದರು. ರಿಯಲ್ ಸ್ಟಾರ್ ಉಪೇಂದ್ರ ಕಾಜು ಬರ್ಫಿಯನ್ನು ಉಡುಗೊರೆಯಾಗಿ ನೀಡಿ ವಿಶ್ ಮಾಡಿದರೆ, ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದೂರವಾಣಿ ಕರೆ ಮೂಲಕ ಶುಭ ಕೋರಿದರು.['ನೀರ್ ದೋಸೆ' ವಿಜಯ್ ಪ್ರಸಾದ್ ಜೊತೆ ರಮ್ಯಾ 'ಬೆಣ್ಣೆ ದೋಸೆ'.!]
ನಿರ್ದೇಶಕ ನಾಗಶೇಖರ್ ಕಾಲ್ಗೆಜ್ಜೆ ನೀಡಿ ಸರ್ಪ್ರೈಸ್ ನೀಡಿದರು. ಇನ್ನೂ ರಮ್ಯಾ ಅವರ ಕಟ್ಟಾ ಅಭಿಮಾನಿಯಾಗಿರುವ ಲೂಸ್ ಮಾದ ಯೋಗಿ ನೇರವಾಗಿ ಸೆಟ್ ಗೆ ಆಗಮಿಸಿ ರಮ್ಯಾ ಬರ್ತಡೆ ಸೆಲೆಬ್ರೇಷನ್ ನಲ್ಲಿ ಪಾಲ್ಗೊಂಡರು. ತಮ್ಮ ಇಷ್ಟದ ಸ್ಟ್ರಾಬೆರಿ ಕೇಕ್ ಕಟ್ ಮಾಡಿ ರಮ್ಯಾ ಸಂಭ್ರಮಿಸಿದರು.

ರಮ್ಯಾ ರವರ ಬರ್ತಡೆ ಸ್ಪೆಷಲ್ ಇರುವ ಈ ಸಂಚಿಕೆಯಲ್ಲಿ 'ತಾವು ನಡೆದು ಬಂದ ದಾರಿ'ಯ ಬಗ್ಗೆ ಮಾತನಾಡಿದ್ದಾರೆ. ಕಾಲೇಜ್ ದಿನಗಳಲ್ಲಿ ಟಾಮ್ ಬಾಯ್ ಆಗಿದ್ದ ರಮ್ಯಾಗೆ ವಿಮಾನಯಾನ ಅಂದ್ರೆ ಯಾಕೆ ಭಯ ಅನ್ನುವ ಬಗ್ಗೆ ಮನಬಿಚ್ಚಿ ಹೇಳಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಗಿಟಾರ್ ಮತ್ತು ಫ್ಲೂಟ್ ನುಡಿಸುವ ಮೂಲಕ ತಮ್ಮಲ್ಲಿರುವ ಬಹುಮುಖ ಪ್ರತಿಭೆಯನ್ನ ರಮ್ಯಾ ತೋರಿಸಿದ್ದಾರೆ. ಮಂಡ್ಯದ ರೈತರ ಕಷ್ಟ-ನಷ್ಟಗಳ ಬಗ್ಗೆ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ಕೂಡ ರಮ್ಯಾ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಈ ಎಲ್ಲಾ ವಿಶೇಷತೆಗಳಿರುವ 'ಬೆಂಗ್ಳೂರ್ ಬೆಣ್ಣೆ ದೋಸೆ'ಯ ರಮ್ಯಾ ಸ್ಪೆಷಲ್ ಸಂಚಿಕೆ ಇದೇ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.


Click it and Unblock the Notifications











