ಬಿಗ್ ಬಾಸ್ 13ನೇ ಸ್ಪರ್ಧಿಯಾಗಿ ಕಾಳಿಮಠ ಸ್ವಾಮಿ
ಈಟಿವಿ ಕನ್ನಡ ವಾಹಿನಿಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 13ನೇ ಸ್ಪರ್ಧಿ ಯಾರು ಎಂಬ ಸುಳಿವು ಸಿಕ್ಕಿದೆ. ಹದಿಮೂರನೇ ಸ್ಪರ್ಧಿ ಯಾರು ಎಂಬುದನ್ನು ಇದೇ ವಾರದಲ್ಲಿ ತಿಳಿಸುವುದಾಗಿ ಸುದೀಪ್ 'ಕಿಚ್ಚನೊಂದಿಗೆ ವಾರದ ಕಥೆ' ಎಪಿಸೋಡಲ್ಲಿ ಹೇಳಿದ್ದರು.
ನಂಬಲರ್ಹ ಮೂಲಗಳ ಪ್ರಕಾರ ಬಿಗ್ ಬಾಸ್ 13ನೇ ಸ್ಪರ್ಧಿಯಾಗಿ ಕಾಳಿಮಠದ ಋಷಿಕುಮಾರ ಸ್ವಾಮಿ ಆಗಮನವಾಗುತ್ತಿದೆ. ಕೋಟಿ ಡೀಲ್ ಕುದುರಿಸಿ ಖಾಸಗಿ ವಾಹಿನಿಯೊಂದರ ಕುಟುಕು ಕಾರ್ಯಾಚರಣೆಯಲ್ಲಿ ಕಾಳಿಮಠಾಧೀಶರು ಸಿಕ್ಕಿಬಿದ್ದರು. ಅಂದಿನಿಂದ ಅವರು ಡೀಲ್ ಸ್ವಾಮಿ ಎಂದೇ ಹೆಸರಾದರು.
ಬಿಗ್ ಬಾಸ್ ಶೋಗೆ 13 ಸ್ಪರ್ಧಿಗೆ ನಾನಾ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಋಷಿಕುಮಾರ ಸ್ವಾಮೀಜಿಗೆ ಮಾಲೆ ಬಿದ್ದಿದೆ. ಒಟ್ಟಾರೆಯಾಗಿ ಋಷಿಕುಮಾರ ಸ್ವಾಮೀಜಿ ಅವರ ಆಗಮದಿಂದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗೇರಿದೆ.

ಬ್ರಹ್ಮಾಂಡ Vs ಕಾಳಿಮಠ ನಡುವೆ ಸ್ಪರ್ಧೆ?
ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಹಾಗೂ ಋಷಿಕುಮಾರ ಸ್ವಾಮೀಜಿ ನಡುವೆ ನೇರಾನೇರ ಸ್ಪರ್ಧೆ ಏರ್ಪಡಲಿದೆ. ಇಬ್ಬರು ಸ್ವಾಮೀಜಿಗಳು ಒಂದೇ ಮನೆಯಲ್ಲಿರಲು ಸಾಧ್ಯವೆ? ಕಾಳಿಮಠ ಸ್ವಾಮೀಜಿ ಆಗಮನವಾಗುತ್ತಿದ್ದಂತೆ ಬ್ರಹ್ಮಾಂಡ ಅಲುಗಾಡುವುದು ಖಚಿತವಾಗಿದೆ.

ಇದೇ ವಾರ ಋಷಿಕುಮಾರ ಸ್ವಾಮೀಜಿ ಎಂಟ್ರಿ
ಈ ಬಾರಿ ಮನೆಯಿಂದ ಹೊರಹೋಗಲು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ಸಂಜನಾ, ನಿಖಿತಾ, ಅರುಣ್ ಸಾಗರ್ ಮತ್ತು ನರೇಂದ್ರ ಬಾಬು ಶರ್ಮಾ. ಇವರಲ್ಲಿ ಈ ವಾರ ಯಾರು ಔಟ್ ಆಗುತ್ತಾರೆ ಎಂಬುದು ಗೊತ್ತಾಗಬೇಕಾದರೆ ಶುಕ್ರವಾರದತನಕ (ಏ.5) ಕಾಯಬೇಕು. ಒಬ್ಬರು ಹೊರಗೆ ಹೋಗುತ್ತಿದ್ದಂತೆ ಋಷಿಕುಮಾರ ಸ್ವಾಮೀಜಿ ಮನೆಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನುತ್ತವೆ ಮೂಲಗಳು.

ಸ್ವಾಮಿ ನಿತ್ಯಾನಂದ ಹೆಸರು ಕೇಳಿಬಂದಿತ್ತು
ಹದಿಮೂರನೇ ಸ್ಪರ್ಧಿಗೆ ಸ್ವಾಮಿ ನಿತ್ಯಾನಂದ, ಹಾಸ್ಯನಟ ಸಾಧು ಕೋಕಿಲ ಹೆಸರುಗಳು ಕೇಳಿಬಂದಿದ್ದವು. ಅಂತಿಮವಾಗಿ ಋಷಿಕುಮಾರ ಸ್ವಾಮೀಜಿ ಮನೆಗೆ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.

ಋಷಿಕುಮಾರ ಸ್ವಾಮೀಜಿ ಬಯೋ ಡಾಟಾ
ಋಷಿಕುಮಾರ ಸ್ವಾಮೀಜಿಯ ಬಯೋ ಡಾಟಾ. ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗಿದ್ದ ಸ್ಟಿಂಗ್ ಆಪರೇಷನ್ನಲ್ಲಿ, ನಿತ್ಯಾನಂದನ ವಿರುದ್ಧ ತಾವು ಮತ್ತು ಕನ್ನಡಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟವನ್ನು ಬಿಡಲು 10 ಕೋಟಿ ರು. ಮತ್ತು 28 ಲಕ್ಷ ರು. ಬೆಲೆಬಾಳುವ ಒಂದು ಫಾರ್ಚೂನರ್ ಕಾರನ್ನು ಅವರು ಕೇಳಿದ್ದು ಬಯಲಾಗಿತ್ತು.

ಡೀಲ್ ಸ್ವಾಮಿ ಎಂದೇ ಖ್ಯಾತರಾದವರು
ಈ ಘಟನೆ ನಡೆದ ನಂತರ ಋಷಿಕುಮಾರ ಸ್ವಾಮಿ ರಹಸ್ಯ ಸ್ಥಳಕ್ಕೆ ಪರಾರಿಯಾಗಿದ್ದರು. ಈ ಸಂಗತಿ ತಿಳಿಯುತ್ತಿದ್ದಂತೆ ಕೆಲ ಸಂಘಟನೆಗಳು ಅವರ ಆಶ್ರಮಕ್ಕೆ ಮತ್ತು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಗೃಹ ಸಚಿವ ಆರ್ ಅಶೋಕ್ ಅವರು ಕೂಡ, ಋಷಿಕುಮಾರ ಅವರ ಮೇಲಿರುವ ಆರೋಪ ಸಾಬೀತಾದರೆ ಕ್ರಮ ತೆಗೆದುಕೊಳ್ಳುವುದಾಗಿ ವಾಗ್ದಾನ ನೀಡಿದ್ದರು.


Click it and Unblock the Notifications











