ಏನಿದು ಅಚ್ಚರಿ ! ಬಿಗ್ ಬಾಸ್ ಪ್ರಬಲ ಸ್ಪರ್ಧಿ ಔಟ್
ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋನಲ್ಲಿ ಮತ್ತೊಮ್ಮೆ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ಮೇಲೆ ಹಲ್ಲೆ ಮಾಡಿದ ಆರೋಪದ ಹೊತ್ತು ಬಂಧನಕ್ಕೊಳಗಾಗಿದ್ದ ನಟ ಅರ್ಮಾನ್ ಕೊಹ್ಲಿ ಮತ್ತೆ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಡುತ್ತಿದ್ದಂತೆ ಕುಶಾಲ್ ಥಂಡನ್ ಹೊರಬಿದ್ದಿದ್ದ. ಎಲಿಮಿನೇಷನ್ ಭೀತಿ ಎದುರಿಸಿದ್ದ ಗೌಹರ್, ಏಜಾಜ್ ಬದಲಿಗೆ ಮತ್ತೊಬ್ಬ ಪ್ರಮುಖ ಸ್ಪರ್ಧಿ ಮನೆಯಿಂದ ಹೊರನಡೆಯುವಂತಾಗಿದೆ.
ಶನಿವಾರ ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಎಪಿಸೋಡಿನಲ್ಲಿ ನಿರೂಪಕ ಸಲ್ಮಾನ್ ಖಾನ್ ಅವರು ವೀಕೇಂಡ್ ಕ ವಾಹ್ ನ ಕೊನೆಯಲ್ಲಿ ವಿವಾದಿತ ಸ್ಪರ್ಧಿ ಅರ್ಮಾನ್ ಕೊಹ್ಲಿ ಅವರನ್ನು ಮನೆಯಿಂದ ಹೊರ ಬರುವಂತೆ ಸೂಚಿಸುವ ಮೂಲಕ ಹಲವರಿಗೆ ಅಚ್ಚರಿ ಮೂಡಿಸಿದ್ದಾರೆ. ಆದರೆ, ಅರ್ಮಾನ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅರ್ಮಾನ್ ಅವರನ್ನು ಮನೆಯಿಂದ ಹೊರ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಇದಕ್ಕೂ ಮುನ್ನ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಕುಶಾಲ್ ಥಂಡನ್ ಮನೆಯಿಂದ ಹೊರ ಬಿದ್ದಿದ್ದ. ಕುಶಾಲ್ ಪರ ವಿರೋಧ ಪ್ರತಿಕ್ರಿಯೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದವು. ಅರ್ಮಾನ್ ಹಾಗೂ ಕುಶಾಲ್ ಇಬ್ಬರು ವಿವಾದಿತ ಸ್ಪರ್ಧಿಗಳನ್ನು ಮನೆಯಿಂದ ಒಂದೇ ವಾರದಲ್ಲಿ ಹೊರ ಹಾಕುವ ಮೂಲಕ ಬಿಗ್ ಬಾಸ್ ಸೇಫ್ ಗೇಮ್ ಆಡುತ್ತಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ನಡುವೆ ಪ್ರೇಯಸಿ ಗೌಹರ್ ಬಿಟ್ಟು ಮನೆಯಿಂದ ಹೊರ ಬಿದ್ದಿರುವ ನೋವಿನಲ್ಲಿರುವ ಕುಶಾಲ್ ಗೆ ಮತ್ತೊಂದು ಆತಂಕ ಎದುರಾಗಿದೆ. ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ರನ್ನು ಅರ್ಮಾನ್ ವಿರುದ್ಧ ತಿರುಗಿ ಬೀಳುವಂತೆ ಮಾಡಿರುವ ಕುಶಾಲ್ ಮೇಲೆ ನಿಷೇಧ ಹೇರಲು ಬಾಲಿವುಡ್ ಚಿತ್ರರಂಗದ ದೊಡ್ಡ ತಲೆಗಳು ಚಿಂತನೆ ನಡೆಸಿರುವ ಸುದ್ದಿ ಹೊರ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಅರ್ಮಾನ್ ರೀ ಎಂಟ್ರಿಗೆ ವಿರೋಧ
ಕಲರ್ಸ್ ವಾಹಿನಿಯ 'ಬಿಗ್ ಬಾಸ್ 7' ರಿಯಾಲಿಟಿ ಶೋನಲ್ಲಿ ಬ್ರಿಟಿಷ್ ತಾರೆ ಹಾಗೂ ಗಾಯಕಿ ಸೋಫಿಯಾ ಹಯಾತ್ ಮೇಲೆ ಹಲ್ಲೆ ಮಾಡಿದ ಆರೋಪದ ಹೊತ್ತು ಬಂಧನಕ್ಕೊಳಗಾಗಿದ್ದ ನಟ ಅರ್ಮಾನ್ ಕೊಹ್ಲಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ನಂತರ ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಮುಂದಾದ ಅರ್ಮಾನ್ ಮೇಲೆ ಕೊಳೆತ ಮೊಟ್ಟೆ, ಟೊಮ್ಯಾಟೋ ಗಳನ್ನು ಎಸೆದು ಪ್ರತಿಭಟಿಸಲಾಗಿತ್ತು. ಮಹಿಳೆಯರ ವಿರುದ್ಧ ಅವಾಚ್ಯ ಶಬ್ದ ಬಳಸುವ, ಮಹಿಳೆಯರನ್ನು ಕೀಳಾಗಿ ಕಾಣುವ ಹಲ್ಲೆ ಮಾಡುವ ಅರ್ಮಾನ್ ಗೆ ಧಿಕ್ಕಾರ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು.

ಬಿಗ್ ಬಾಸ್ ತಂತ್ರವೇ?
ಗೌಹರ್ ಜತೆ ಪ್ರಣಯ ಸಂಬಂಧ ಬೆಳೆಸಿಕೊಂಡಿದ್ದ ಕುಶಾಲ್ ಗೆ ಕ್ಯಾಂಡಿಯನ್ನು ಎದುರುಗೊಳ್ಳುವುದು ಇಷ್ಟವಿರಲಿಲ್ಲ. ಹೀಗಾಗಿ ಮನೆಯಿಂದ ಹೊರಕ್ಕೆ ಹಾಕಲಾಯಿತು. ಈಗ ಅರ್ಮಾನ್ ಎಂಟ್ರಿ ನಂತರ ಇದೇ ತಂತ್ರ ಅನುಸರಿಸಿ ಕುಶಾಲ್ ನನ್ನು ಹೊರ ಹಾಕಲಾಗಿದೆ. ಈಗ ಬಿಗ್ ಬಾಸ್ ಹಾಗೂ ಕಲರ್ಸ್ ವಾಹಿನಿ ವಿರುದ್ಧ ಸೋಫಿಯಾ ತಿರುಗಿ ಬೀಳುವ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ಆದಷ್ಟು ವಿವಾದಿತ ಸ್ಪರ್ಧಿಗಳನ್ನು ಮನೆಯಿಂದ ಹೊರ ಹಾಕಲು ಕಲರ್ಸ್ ವಾಹಿನಿ ಬಿಗ್ ಬಾಸ್ ತಂಡ ನಿರ್ಧರಿಸಿದೆ ಎನ್ನಲಾಗಿದೆ.

ವಿವಾದಿತ ಟಾಸ್ಕ್
ಕುಶಾಲ್ ಮತ್ತೆ ಮನೆಗೆ ಬಂದರೆ ಏನು ಆಗುತ್ತೋ ನನಗೆ ಗೊತ್ತಿಲ್ಲ ಎಂದು ಅರ್ಮಾನ್ ಹೇಳಿದ್ದಾನೆ. ನನ್ನ ಬಳಿ ಕುಶಾಲ್ ಕ್ಷಮೆಯಾಚಿಸಿಲ್ಲ. ಮನೆಗೆ ಬಂದರೆ ನಾನಿರುವುದಿಲ್ಲ ಎಂದು ತನೀಶಾ ನೇರವಾಗಿ ಹೇಳಿದ್ದಳು. ಅದರೆ, ವಿವಾದ ಹಾಗೆ ಉಳಿಯಿತು. ಇದಾದ ನಂತರ ಬಾಕ್ಸ್ ಟಾಸ್ಕ್ ಸೇರಿದಂತೆ ಅನೇಕ ಟಾಸ್ಕ್ ಗಳು ವಿವಾದಗಳನ್ನೇ ಹುಟ್ಟುಹಾಕಿತು

ವಿಜೆ ಆಂಡಿ, ಸಂಗ್ರಾಮ್ ಗೆ ಸಹಕಾರಿ
ಅರ್ಮಾನ್ ಎಲ್ಲರೊಟ್ಟಿಗೆ ಕಿತ್ತಾಡಿಕೊಂಡು ಹೆಸರು ಕೆಡಿಸಿಕೊಂಡಿದ್ದಾನೆ. ಕುಶಾಲ್ ಹಾಗೂ ಗೌಹರ್ ಪ್ರೇಮ ಪ್ರಕರಣಕ್ಕೆ ಮುಕ್ತಾಯ ಹಾಡಲಾಗಿದೆ. ಏಜಾಜ್ ಭಗ್ನ ಪ್ರೇಮಿ ಪಾತ್ರ ನಾಟಕ ಎಲ್ಲವೂ ಪ್ರೇಕ್ಷಕರಿಗೆ ಅಷ್ಟಾಗಿ ಹಿಡಿಸುತ್ತಿಲ್ಲ. ಹೀಗಾಗಿ ವಿಜೆ ಆಂಡಿ ಹಾಗೂ ಸಂಗ್ರಾಮ್ ನಡುವೆ ಫೈನಲ್ ಹಣಾಹಣಿಗೆ ಪೈಪೋಟಿ ನಡೆಯುವ ಎಲ್ಲಾ ಸಾಧ್ಯತೆಯಿದೆ. ಈ ನಡುವೆ ತನೀಶಾ ಬಗ್ಗೆ ಪ್ರೇಕ್ಷಕರಲ್ಲಿ ಏನೋ ಅನುಕಂಪ, ಪ್ರೀತಿ ಮೊದಲಿನಿಂದಲೂ ಇದ್ದೇ ಇದೆ. ಈ ವಾರದ ಎಪಿಸೋಡುಗಳು ಬಿಗ್ ಬಾಸ್ ವಿಜೇತರನ್ನು ನಿರ್ಧರಿಸಲಿದೆ ಎನ್ನಲಾಗಿದೆ.

ಸಲ್ಮಾನ್ ಕೂಡಾ ಗರಂ
ಅರ್ಮಾನ್ ಹಾಗೂ ಸೋಫಿಯಾ ಪ್ರಕರಣದ ಮೂಕ ಪ್ರೇಕ್ಷಕರಾಗಿದ್ದ ಕುಶಾಲ್ ಹಾಗೂ ಗೌಹರ್ ಮೇಲೆ ಸಲ್ಮಾನ್ ಖಾನ್ ಕೂಡಾ ಗರಂ ಆಗಿದ್ದಾನೆ ಎಂದು ತಿಳಿದು ಬಂದಿದೆ. ಉತ್ತಮ PR ಸಂಸ್ಥೆಗಳ ಸಹಾಯ ಪಡೆದು ಸಲ್ಮಾನ್ ಅವರನ್ನು ನಿಂದಿಸುತ್ತಾ ಹಾಗೂ ಸಲ್ಮಾನ್ ನನಗೆ ಸ್ಸಾರಿ ಕೇಳಿದರೂ ಎನ್ನುವ ಮೂಲಕ ಕುಶಾಲ್ ತನಗೆ ಬೇಕಾದ ಪ್ರಚಾರವನ್ನು ಗಿಟ್ಟಿಸಿಕೊಂಡಿದ್ದ. ಅದನ್ನೆಲ್ಲ ಮನೆಗೆ ರೀ ಎಂಟ್ರಿ ಕೊಟ್ಟ ಮೇಲೆ ಗೌಹರ್ ಬಳಿ ಹೇಳಿಕೊಂಡಿದ್ದ

ಬಚಾವಾದ ಏಜಾಜ್
ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಗೌಹರ್ ಖಾನ್, ಕುಶಾಲ್ ಥಂಡನ್ ಹಾಗೂ ಏಜಾಜ್ ಖಾನ್ ಮನೆಯಿಂದ ಹೊರಬೀಳುವ ಭೀತಿ ಎದುರಿಸಿದ್ದರು. ಈ ಪೈಕಿ ಏಜಾಜ್ ಗೆ ಹೆಚ್ಚಿನ ಮತಗಳು ಸಿಕ್ಕಿ ಬಚಾವಾಗಿದ್ದಾನೆ. 'ಜಿಂದಾಗಿ ನಾ ಮಿಲೇಗಿ ದುಬಾರಾ'ಟಾಸ್ಕ್ ಗೆದ್ದ ಗೌಹರ್ ಕೂಡಾ ಸೇಫ್ ಆಗಿದ್ದಾಳೆ. ಆದರೆ, ಈ ಬಾರಿ ಏಜಾಜ್ ಮನೆಯಿಂದ ಹೊರ ಹಾಕಲು ಎಲ್ಲಾ ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.


Click it and Unblock the Notifications











