ಸಕಲಕಲಾ ಪಾರಂಗತ ಕಾಳಿ ಶ್ರೀ ಋಷಿಕುಮಾರ
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' 23ನೇ ದಿನದ ಹೈಲೈಟ್ಸ್ ಇಲ್ಲಿವೆ. ಈ ಬಾರಿ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಅರ್ಥಪೂರ್ಣ ಟಾಸ್ಕ್ ನೀಡಿದರು. ಅದೇನೆಂದರೆ 'ಬಬ್ರುವಾಹನ' ನಾಟಕವನ್ನು ವಿಭಿನ್ನವಾಗಿ ಮಾಡಿ ತೋರಿಸಬೇಕಾಗಿತ್ತು. ಈ ಎಪಿಸೋಡ್ ಮಾತ್ರ ಅದ್ಭುತವಾಗಿ ಮೂಡಿಬಂತು.
ಇದಕ್ಕೆ ಸಾರಥ್ಯ ವಹಿಸಿದ್ದು ಅರುಣ್ ಸಾಗರ್. ಇದಕ್ಕೂ ಮುನ್ನ ಅವರು ಸಿನಿಮಾ ಡೈರೆಕ್ಟರ್ ಆಗಿ 'ಬಿಗ್ ಬಾಸ್'ನಲ್ಲಿ ಅಭಿನಯಿಸಿದರು. ಅವರದು ಆಡಿಷನ್ ಗೆ ಬಂದವರನ್ನು ಆಯ್ಕೆ ಮಾಡುವುದು. ಸ್ಪರ್ಧಿಗಳೆಲ್ಲಾ ವಿಭಿನ್ನವಾಗಿ ಅಭಿನಯಿಸಿ ರಂಜಿಸಿದ್ದು ವಿಶೇಷವಾಗಿತ್ತು.
ಮೆಲ್ಲುಸಿರೆ ಸವಿಗಾನ ಎಂದು ಋಷಿಕುಮಾರ ಹಾಡಿ ಕುಣಿದು ರಂಜಿಸಿದರು. ಬಳಿಕ ಅನುಶ್ರೀ ಅವರು ಹಾಡಿದ ಸಿಕ್ಕಾಪಟ್ಟೆ ಇಷ್ಟಪಟ್ಟೆ...ಸೂಪರೋ ರಂಗ ಎಂಬ ಹಾಡಿಗೆ ಋಷಿಕುಮಾರ ಸಖತ್ತಾಗಿಯೇ ಡಾನ್ಸ್ ಮಾಡಿದರು. ಋಷಿಕುಮಾರನನ್ನು ನೋಡುತ್ತಿದ್ದರೆ ಅವರು ಸಕಲಕಲಾ ಪಾರಂಗತ ಅನ್ನಿಸುತ್ತದೆ!

ಅರುಣ್ ಸಾಗರ್ ಗೆ ಛತ್ರಿ ಹಿಡಿದ ಅನುಶ್ರೀ
ಇನ್ನು ಅನುಶ್ರೀ ಅವರದು ಡೈರೆಕ್ಟರ್ ಅರುಣ್ ಸಾಗರ್ ಅವರಿಗೆ ಛತ್ರಿ ಹಿಡಿಯುವ ಕೆಲಸ. ಅಪರ್ಣಾ ಅವರಂತೂ ಹಾಲಿವುಡ್ ನಟಿ ನಾನು ಎಂದು ಹೇಳಿಕೊಂಡು ಜೋಕೆ ನಾನು ಬಳ್ಳಿಯ ಮಿಂಚು ಎಂದು ಹಾಡುತ್ತಾ ಕುಣಿಯುತ್ತಾ ಮಸ್ತ್ ಅಭಿನಯ ನೀಡಿದರು.

ನಟ ತಿಲಕ್ ವಿಭಿನ್ನ ಅಭಿನಯ
ಇನ್ನು ನಟ ತಿಲಕ್ ಅವರದಂತೂ ವಿಭಿನ್ನ ಅಭಿನಯ. ಆಡಿಷನ್ ಗಾಗಿ ಬಂದ ನಟನಾಗಿ ಅವರು ತಮಾಷೆಯಾಗಿ ಅಭಿನಯಿಸಿ ತೋರಿಸಿದರು. ಹಾಡು ಹೇಳು ಎಂದ ತಕ್ಷಣ, "ನಿನ್ನ ಕಂಡ ಕಂಡ ಕ್ಷಣದಿಂದ ನಾನು ನನ್ನಲಿಲ್ಲ... ಎಂದು ಹಾಡಿದರು.

ಘಟೋತ್ಕಚನ ಪಾತ್ರದಲ್ಲಿ ಬ್ರಹ್ಮಾಂಡ
ಇನ್ನು ವಿಜಯ್ ರಾಘವೇಂದ್ರ ಅವರು ಅಪಾರ ಕೀರ್ತಿ ಮೆರೆವ ಭವ್ಯ ನಾಡಿದು ಹಾಡಿದರು. ಸೊಂಟ ಸೂಪರು ಆದ್ರೆ ಬಾರಿ ಡೇಂಜರು ಎಂದು ಅನುಶ್ರೀ ಹಾಡಿ ಕುಣಿದರು. ಬ್ರಹ್ಮಾಂಡ ಗುರೂಜಿ ಅಂತೂ, "ನಾನಾಡುವ ನುಡಿಯೇ ಕನ್ನಡ ನುಡಿ, ನಾನಿರುವ ತಾಣವೆ ಕನ್ನಡ ಗುಡಿ..."ಎಂದು ಹಾಡುವ ಜೊತೆಗೆ ಘಟೋತ್ಕಚನ ಪಾತ್ರವನ್ನೂ ಮಾಡಿ ತಾವೂ ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದರು.

ಅರ್ಜುನನಾಗಿ ಕಾಳಿ ಸ್ವಾಮಿ
ಇನ್ನು ಈ ಬಾರಿಯ ಟಾಸ್ಕ್ 'ಬಬ್ರುವಾಹನ'. ಈ ಪ್ರಸಂಗಕ್ಕೆ 'ಬಬ್ಬು' ಎಂದು ಹೆಸರಿಟ್ಟು ಹಾಸ್ಯದ ಹೊನಲು ಹರಿಸಿದರು. ಇಲ್ಲಿ ಅರ್ಜುನನಾಗಿ ಕಾಳಿ ಸ್ವಾಮಿ, ಉಲೂಚಿಯಾಗಿ ಚಂದ್ರಿಕಾ, ಚಿತ್ರಾಂಗದೆಯಾಗಿ ಅಪರ್ಣಾ, ಬಬ್ರವಾಹನನಾಗಿ ವಿಜಯ್ ರಾಘವೇಂದ್ರ, ಕೃಷ್ಣನಾಗಿ ಅರುಣ್ ಸಾಗರ್ ವಿಭಿನ್ನ ಪ್ರಯೋಗ ಮಾಡಿದರು.

ಅಜ್ಜು, ಬಬ್ಬು ನಡುವೆ ಮಸ್ತ್ ಫೈಟ್
ಅರ್ಜುನ ಅಜ್ಜು, ಬಬ್ರುವಾಹನ ಬಬ್ಬು. ಇಲ್ಲಿ ಕುದುರೆಯನ್ನು ಕಟ್ಟಿಹಾಕುವುದಕ್ಕೆ ಬದಲಾಗಿ ಸೈಕಲ್ ಗೆ ಸ್ಟಾಂಡ್ ಹಾಕಿ ನಿಲ್ಲಿಸಬೇಕು. ಚಿತ್ರಾಂಗದೆ ಜೊತೆ ಅಜ್ಜು ಡ್ಯುಯೆಟ್ ಹಾಡಿದ್ದನ್ನು ಮರೆಸಲು ಅಮೆರಿಕದಿಂದ ತರಿಸಿದ ನೆನಪು ಅಳಿಸಿಹೋಗುವ ಇಂಜಕ್ಷನ್ ಕೊಡುತ್ತಾನೆ ಕೃಷ್ಣ.

ಚೂಡಿದಾರ್ ನಲ್ಲಿ ಚಿತ್ರಾಂಗದೆ, ಉಲೂಚಿ
ಪೌರಾಣಿಕ ಪಾತ್ರಗಳು ಇಲ್ಲಿ ಸಾಮಾಜಿಕವಾಗಿ ಬದಲಾಗಿದ್ದವು. ಅರ್ಜುನ ಮತ್ತು ಬಬ್ರವಾಹನ ಶರ್ಟು, ಪ್ಯಾಂಟು ತೊಟ್ಟರೆ, ಉಲೂಚಿ ಹಾಗೂ ಚಿತ್ರಾಂಗದೆಯರು ಚೂಡಿದಾರ್ ನಲ್ಲೇ ಅಭಿನಯಿಸಿದ್ದು ವಿಶೇಷವಾಗಿತ್ತು.

ವೀಕ್ಷಕರಿಗೆ ಭರಪೂರ ಮನರಂಜನೆ ಕೊಟ್ಟ ಶೋ
ಈ ಬಾರಿಯ ಟಾಸ್ಕ್ ನಿಂದ ಸ್ಪರ್ಧಿಗಳಲ್ಲಿನ ಪ್ರತಿಭೆ ಹೊರಹೊಮ್ಮಲು ಸಹಕಾರಿಯಾಯಿತು. ಆದರೆ ಚಾನ್ಸ್ ಸಿಗದವರಿಗೆ ಮಾತ್ರ ಕೈಕಾಲು ಕಟ್ಟಿದಂತಾಗಿತ್ತು. ಒಟ್ಟಾರೆಯಾಗಿ 23ನೇ ದಿನದ ಬಿಗ್ ಬಾಸ್ ಮನೆಯಲ್ಲಿ ಸಂಭ್ರಮದ ವಾತಾವರಣ. ಸ್ಪರ್ಧಿಗಳ ನಡುವೆ ಯಾವುದೇ ವಾದ ವಿವಾದಗಳು ತಲೆದೋರಲಿಲ್ಲ.


Click it and Unblock the Notifications











