ಬಿಗ್ ಬಾಸ್ ಮನೆಯಲ್ಲಿ ರೋಹಿತ್ ಮುಖಕ್ಕೆ ಮಸಿ
ಇಷ್ಟು ದಿನ ಬೆಳಗ್ಗೆ ಕನ್ನಡ ಹಾಡುಗಳ ಸುಪ್ರಭಾತದ ಮೂಲಕ ಮನೆಯ ಸದಸ್ಯರನ್ನು ಬಿಗ್ ಬಾಸ್ ಎಬ್ಬಿಸುತ್ತಿದ್ದರು. ಆದರೆ ಹದಿನೇಳನೇ ದಿನ ಹಿಂದಿ ಹಾಡಿನ ಮೂಲಕ ದಿನವನ್ನು ಆರಂಭಿಸಲಾಯಿತು. ಮನೆಯಲ್ಲಿ ಸದಾ ಮಗುಮ್ಮಾಗಿರುತ್ತಿದ್ದ ಮಯೂರ್ ಪಟೇಲ್ ಅವರು ಸ್ವಲ್ಪ ಮಟ್ಟಿಗೆ ಬಾಯಿಬಿಟ್ಟು ಮಾತನಾಡುತ್ತಿದ್ದಾರೆ.
ಮನೆಯಲ್ಲಿ ರೋಹಿತ್ ಅವರ ಮುಂದಾಳತ್ವದಲಿ ನಡೆಯುತ್ತಿರುವ 'ಕಮಾಂಡೋ ತರಬೇತಿ ಶಿಬಿರ' ಟಾಸ್ಕ್ ನಲ್ಲಿ ಎರಡು ತಂಡಗಳಾಗಿವೆ. ನೀತೂ ತಂಡ ಬಂಡಾಯ ಪಡೆಯಾಗಿದ್ದು ಅವರಲ್ಲಿ ಮಯೂರ್ ಪಟೇಲ್, ಅಕುಲ್ ಬಾಲಾಜಿ, ದೀಪಿಕಾ ಇದ್ದಾರೆ.
ತಾನೂ ಸೇರಿದಂತೆ ದೀಪಿಕಾ, ಅಕುಲ್ ಬಂಡಾಯ ಪಡೆಯಲ್ಲಿ ಇರುವುದಾಗಿ ರೋಹಿತ್ ಬಳಿ ಮಯೂರ್ ಹೇಳಿಕೊಂಡರು. ಬಂಡಾಯ ಕಮಾಂಡೋ ಪಡೆ ಹಾಗೂ ರೋಹಿತ್ ಕಮಾಂಡೋ ಪಡೆ ಬೇರೆಬೇರೆಯಾಗಿ ಕವಾಯಿತು ನಡೆಸಿತು.

ರೋಹಿತ್ ಗೆ ಕಪ್ಪು ಪುಡಿ ಎರಚುವ ಟಾಸ್ಕ್
ಈ ವಾರ ಟಾಸ್ಕ್ ನ ಮುಂದಿನ ಭಾಗದ ಬಗ್ಗೆ ಬಿಗ್ ಬಾಸ್ ವಿವರ ನೀಡಿದರು. ರೋಹಿತ್ ಮುಖಕ್ಕೆ ಬಂಡಾಯ ಪಡೆಯ ಸದಸ್ಯರು ಕಪ್ಪು ಪುಡಿ ಎರಚಬೇಕು. ಆದರೆ ರೋಹಿತ್ ತಮ್ಮ ಮುಖಕ್ಕೆ ಕಪ್ಪು ಅಂಟಿಕೊಳ್ಳದಂತೆ ನೋಡಿಕೊಳ್ಳಬೇಕು. ಈ ಟಾಸ್ಕ್ ನಲ್ಲಿ ಯಾವುದೇ ಬಲಪ್ರಯೋಗ ಮಾಡುವಂತಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಲಾಯಿತು.

ಶ್ವೇತಾ ಚೆಂಗಪ್ಪ ಕೂಗಾಟ, ರಂಪಾಟ
ರೋಹಿತ್ ಅವರನ್ನು ಕಮಾಂಡೋ ಪಡೆಗಳು ಸುತ್ತುವರಿದು ಕಪ್ಪು ಮಸಿ ಬೀಳದಂತೆ ಕಾಪಾಡಿದರು. ಈ ನಡುವೆ ನನ್ನ ಮೇಲೆ ಬಲ ಪ್ರಯೋಗ ಮಾಡಿದರು ಎಂದು ಶ್ವೇತಾ ಚೆಂಗಪ್ಪ ಸಿಕ್ಕಾಪಟ್ಟೆ ಕೂಗಾಡಿದರು ರಂಪ ರಾಮಾಯಣ ಮಾಡಿದರು. ಜೋರು ಧ್ವನಿಯಲ್ಲಿ ಮಾತನಾಡಿ ಸುಸ್ತಾದರು. ನನ್ನ ಕೈಗೆ ಪೆಟ್ಟಾಗಿದೆ ಎಂದು ಕಣ್ಣೀರಿಟ್ಟರು.

ಲೋನಾವಾಲಾದಲ್ಲಿ ಧೋ ಎಂದು ಮಳೆ
ಕಡೆಗೂ ರೋಹಿತ್ ಮುಖಕ್ಕೆ ಮಸಿ ಬಳಿಯುವಲ್ಲಿ ಬಂಡಾಯ ಪಡೆ ಯಶಸ್ವಿಯಾಯಿತು. ಪುಣೆಯ ಲೋನಾವಾಲಾದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿರುವುದು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಗೊತ್ತಾಗುತ್ತಿದೆ. ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ ಇನ್ನೊಂದು ಕಡೆ ಇವರ ಆಟ ಮುಂದುವರಿಯುತ್ತಿದೆ.

ರೋಹಿತ್ ವಿರುದ್ಧ ಕತ್ತಿ ಮಸೆಯುತ್ತಿರುವವರು
ಟಾಸ್ಕ್ ನಿಭಾಯಿಸಬೇಕಾದರೆ ರೋಹಿತ್ ಮತ್ತು ಅಕುಲ್ ನಡುವೆ ಕೂಗಾಟ, ಅರಚಾಟ ನಡೆದೇ ಇತ್ತು. ಅಕುಲ್ ಎಲ್ಲದಕ್ಕೂ ಅರಚಾಡುವುದು ಸಾಮಾನ್ಯವಾಗಿದೆ. ಮನೆಯಲ್ಲಿ ರೋಹಿತ್ ಹೈಲೈಟ್ ಆಗುತ್ತಿರುವುದನ್ನು ಕೆಲವು ಸದಸ್ಯರು ಸಹಿಸದಂತಾಗಿದೆ. ಮುಖ್ಯವಾಗಿ ಅಕುಲ್, ಆದಿ ಹಾಗೂ ಸಂತೋಷ್ ಅವರು ರೋಹಿತ್ ವಿರುದ್ಧ ಇನ್ನೂ ಕತ್ತಿ ಮಸೆಯುತ್ತಲೇ ಇದ್ದಾರೆ.

ಲಗ್ಜುರಿ ಬಜೆಟ್ ಟಾಸ್ಕ್ ಗೆದ್ದ ನೀತೂ ಪಡೆ
ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ ಮುಗಿಯಿತು. ನೀತೂ ಮುಂದಾಳತ್ವದ ಬಂಡಾಯ ಪಡೆಗೆ ಗೆಲುವು ಎಂದು ಬಿಗ್ ಬಾಸ್ ಘೋಷಿಸಿದರು. ಕಮಾಂಡೋ ಇನ್ ಛೀಫ್ ಆಗಿ ರೋಹಿತ್ ವಿಫಲರಾದರು. ಆದರೂ ಅವರು ಕ್ರೀಡಾ ಮನೋಭಾವ ತೋರಿದರು.

ಸಂತೋಷ್ ಅವರನ್ನು ಊಸರವಳ್ಳಿ ಎಂದ ದೀಪಿಕಾ
ಯಾಕಪ್ಪ ಈ ಮೆಂಟಲ್ ಕೇಸ್ ಗಳ ನಡುವೆ ಬಂದೆನೋ ಎಂದು ಶಕೀಲಾ ಅವರು ಅಕುಲ್ ಜೊತೆ ಮಾತನಾಡುತ್ತಾ ಹೇಳಿದರು. ಇನ್ನೊಂದು ಕಡೆ ಸಂತೋಷ್ ಅವರನ್ನು ಕುರಿತು ದೀಪಿಕಾ ನೀವು ಊಸರವಳ್ಳಿ ತರಹ ಎಂದರು. ನೀವು ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಿದ್ದೀರಾ ಎಂದರು ಇದಕ್ಕೆ ಸಂತೋಷ್ ಸಹ ಸುಮ್ಮನೆ ನಗುತ್ತಾ ಅವರ ಮಾತುಗಳನ್ನು ಕೇಳಿಸಿಕೊಂಡರು.

ಕಣ್ಣೀರಿಟ್ಟ ಶ್ವೇತಾ ಚೆಂಗಪ್ಪ
ಮನೆಯವರ ತರಹ ಯಾರೂ ಇಲ್ಲಿ ಕೇರ್ ಮಾಡುತ್ತಿಲ್ಲ ಎಂದು ಶ್ವೇತಾ ತಮ್ಮಷ್ಟಕ್ಕೆ ತಾವು ಗೊಣಗುತ್ತಾ ಕಣ್ಣು ಸುರಿಸಿದರು. ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದು, ಶ್ವೇತಾ ನೀವು ಹೇಗಿದ್ದಾರಾ ಎಂದಾಗ ಅವರ ಕಣ್ಣಾಲಿಗಳು ತುಂಬಿ ಬಂದವು. ಚೆನ್ನಾಗಿರುವುದಾಗಿ ತಲೆಯಾಡಿಸಿದರು. ನಮ್ಮ ಎದುರಾಳಿಗಳು ಟಾಸ್ಕ್ ಸರಿಯಾಗಿ ನಿಭಾಯಿಸಲಿಲ್ಲ ಎಂದು ಅದನ್ನೇ ದೊಡ್ಡದಾಗಿ ಹೇಳಿಕೊಂಡರು. ತಮ್ಮ ಮನಸ್ಸಿಗೆ ತುಂಬಾ ನೋವಾಯಿತು ಎಂದು ಹೇಳಿಕೊಂಡರು.

ಕೆಲವರ ಮನಸ್ಸಿಗೆ ಅಂಟಿಕೊಂಡಿದೆ ಮಸಿ
ಕೆಲವರ ಮುಖಕ್ಕೆ ಕಪ್ಪು ಮಸಿ ಬಿದ್ದರೆ ಇನ್ನು ಕೆಲವರ ಮನಸ್ಸಿಗೆ ಅದು ಅಂಟಿಕೊಂಡಿದೆ. ಮುಖ ತೊಳೆದುಕೊಳ್ಳ ಬಹುದು ಆದರೆ ಮನಸ್ಸು? ಅದಕ್ಕೆ ಅಂಟಿದ ಬಣ್ಣ ತೆಗೆಯಲು ಇನ್ನೆಷ್ಟು ದಿನ ಬೇಕಾಗುತ್ತದೋ ಏನೋ ಎಂದು 'ಬಿಗ್ ಬಾಸ್' ಹೇಳಿ ಹದಿನೇಳನೇ ದಿನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.


Click it and Unblock the Notifications











