ಬಿಗ್ ಬಾಸ್ ಮನೆಯ ಕಟಕಟೆಯಲ್ಲಿ ವಿಚಾರಣೆ
ಬಿಗ್ ಬಾಸ್ ಮನೆಯ ಸದಸ್ಯರಲ್ಲೇ ಸಾಕಷ್ಟು ಗೊಂದಲ, ಅನುಮಾನ, ಭಿನ್ನಾಭಿಪ್ರಾಯಗಳಿರುವುದು ಮೂರನೇ ವಾರದ ಹೊತ್ತಿಗೆ ಹೊರಬಿದ್ದಿದೆ. ಬಿಗ್ ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ರಚಿಸಿದ್ದ ನ್ಯಾಯಾಲಯದ ಕಟಕಟೆ ಮಾದರಿಯಲ್ಲಿ ಆರೋಪ, ಪ್ರತ್ಯಾರೋಪಗಳ ವಿಚಾರಣೆ ನಡೆಯಿತು.
ಹತ್ತೊಂಬತ್ತನೇ ದಿನ "ಊರಿಗೊಬ್ಳೆ ಪದ್ಮಾವತಿ..." ಹಾಡಿನ ಮೂಲಕ ಪ್ರಾರಂಭವಾಯಿತು. ತಾನು ಕ್ಯಾಪ್ಟನ್ ಆದ ಮೇಲೆ ತನ್ನ ಬಗ್ಗೆ ಸೃಜನ್ ನೀಡಿದ ಕಾಮಿಡಿ ಶೋ ಬಗ್ಗೆ ತೀವ್ರ ಅಸಮಾಧಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು ಅಕುಲ್ ಬಾಲಾಜಿ. ಆದರೆ ಶಕೀಲಾ ಮಾತ್ರ ನಿಮ್ಮ ಬಗ್ಗೆ ಮಾಡಿದ ಕಾಮಿಡಿ ನನಗೆ ಇಷ್ಟವಾಯಿತು ಎಂದು ಅಕುಲ್ ಅವರನ್ನು ಇನ್ನಷ್ಟು ಕೀಟಲೆ ಮಾಡಿದರು.

ಬಿಗ್ ಬಾಸ್ ಈ ಬಾರಿ ಎಲ್ಲರನ್ನೂ ಕನ್ಫೆಷನ್ ರೂಮಿಗೆ ಕರೆದು ಮನೆಯ ಸದಸ್ಯರ ಬಗ್ಗೆ ಏನಾದರೂ ಆರೋಪ, ದೂರುಗಳಿದ್ದರೆ ತಿಳಿಸಿ ಎಂದರು. ಆದಿ ಲೋಕೇಶ್ ಅವರು ತಮಗೆ ಯಾರ ಬಗ್ಗೆನೂ ಅಸಮಾಧಾನ, ಆರೋಪ ಇಲ್ಲ ಎಂದು ಹೇಳಿದರು.
ಇದೇ ರೀತಿ ಎಲ್ಲರಿಗೂ ಅವಕಾಶ ಕೊಡಲಾಯಿತು. ಅದರಂತೆ ಎಲ್ಲರೂ ಪತ್ರದಲ್ಲಿ ತಮ್ಮ ಅಸಮಾಧಾನ, ದೂರು ದುಮ್ಮಾನಗಳನ್ನು ಬರೆದಿಟ್ಟರು. ಬಿಗ್ ಬಾಸ್ ಮುಂದೆ ನನಗೆ ಯಾರೊಂದಿಗೂ ಅಸಮಾಧಾನ, ದೂರು ಇಲ್ಲ ಎಂದ ಆದಿ ಬಳಿಕ ನೀತೂ ಬಳಿ ಚರ್ಚಿಸುತ್ತಾ ಮಯೂರ್ ಬಗ್ಗೆ ಅಸಮಾಧಾನ ತೋಡಿಕೊಂಡರು. ಇವರಿಬ್ಬರನ್ನು ಸಂಧಾನದ ಮೂಲಕ ಒಂದು ಮಾಡಲು ಶ್ರಮಿಸುತ್ತಲೇ ಇದ್ದರು.
ಇನ್ನೊಂದು ಕಡೆ ಅನುಪಮಾ ಭಟ್ ಅವರನ್ನು ಸೃಜನ್ ಅವರು ತುಂಬಾ ಗೋಳು ಹೊಯ್ದುಕೊಂಡರು. ಆವರ ಫೇಸ್ ರೀಡಿಂಗ್, ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತೇನೆ ಎಂದು ಅವರ ಬಗ್ಗೆ ಸಿಕ್ಕಾಪಟ್ಟೆ ಕಾಮಿಡಿ ಮಾಡಿದರು. ಆದರೂ ಅನುಪಮಾ ಮಾತ್ರ ಯಾವುದಕ್ಕೂ ಬೇಸರಿಸಿಕೊಳ್ಳಲಿಲ್ಲ.


Click it and Unblock the Notifications











