ಬಿಗ್ ಬಾಸ್ ಶೋನಲ್ಲಿ ಗೋಲ್ ಮಾಲ್ ನಡೀತಿದೆಯಾ?
ಬಿಗ್ ಬಾಸ್ ಮನೆಯಿಂದ ಶಕೀಲಾ ಅವರು ಹೊರಬಿದ್ದ ಬಳಿಕ ಈಗ ಮನೆಯಲ್ಲಿ ಉಳಿದಿರುವುದು ಹನ್ನೊಂದೇ ಮಂದಿ. ಭಾಷಾ ಸಮಸ್ಯೆಯೋ ಏನೋ ಶಕೀಲಾ ಇದ್ದಷ್ಟು ದಿನವೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಬಿಗ್ ಬಾಸ್ ಮನೆಗೆ ಶಕೀಲಾ ಅಡಿಯಿಟ್ಟಾಗ ಇನ್ನೇನಾಗುತ್ತದೋ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ ಅವರು ಮನೆಗೆ ಬಂದಷ್ಟೇ ಕೂಲಾಗಿ ನಿರ್ಗಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಅವರು ಮನೆಯಲ್ಲಿ ಇದ್ದಷ್ಟು ದಿನವೂ ಒಂದೇ ಒಂದೇ ಗಾಸಿಪ್, ತನ್ನ ಜೀವನದ ಕರಾಳ ಮುಖವನ್ನು ತೋರಿಸಲೇ ಇಲ್ಲ. ಇನ್ನೂ ಸ್ವಲ್ಪ ದಿನ ಇದ್ದಿದ್ದರೆ ಏನಾದರೂ ಬಾಯ್ಬಿಡುತ್ತಿದ್ದರೋ ಏನೋ ಗೊತ್ತಿಲ್ಲ.
ಬಿಗ್ ಬಾಸ್ 21 ಹಾಗೂ 22ನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ. ಮನೆಯಲ್ಲಿ ಸಂತೋಷ್ ಗೆ ಶಿಕ್ಷೆ ಜಾರಿಯಲ್ಲಿದೆ. ಅವರ ಆಡುಭಾಷೆಯಲ್ಲಿ ಕನ್ನಡ ಹೆಚ್ಚಾಗಿ ಬಳಸದ ಕಾರಣ ಅವರಿಗೆ ಶಿಕ್ಷೆ ನೀಡಲಾಗಿದೆ. ಬಿಳಿ ಹಲಗೆ ಮೇಲೆ ಅವರು "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಎಂದು ಬರೆಯುವ ಶಿಕ್ಷೆ ವಿಧಿಸಲಾಗಿದೆ.

ಶ್ವೇತಾ ಚೆಂಗಪ್ಪ ಬಗ್ಗೆ ನೀತೂ ಹೇಳಿದ್ದೇನು?
ಅವಳ ಮದುವೆಗೂ ಮುಂಚೆಯಿಂದ ಶ್ವೇತಾ ಚೆಂಗಪ್ಪ ನನಗೆ ತುಂಬಾ ಕ್ಲೋಸ್. ಎರಡು ವರ್ಷಗಳ ಹಿಂದೆ ಅವರ ಮದುವೆಗೆ ನಾನು ಶೂಟಿಂಗ್ ಬಿಟ್ಟು ಹೋಗಿದ್ದೆ. ಆ ಮೇಲೆ ನಮ್ಮಿಬ್ಬರ ನಡುವೆ ಅಂತಹದ್ದೇನು ನಡೆಯಲಿಲ್ಲ. ಆದರೂ ನಾವಿಬ್ಬರೂ ಯಾವುದೇ ಕಾರಣ ಇಲ್ಲದೆ ದೂರವಾದೆವು ಎಂದು ಆದಿ ಜೊತೆಗೆ ನೀತೂ ಹೇಳಿದರು.

ಸೇಫ್ ಆಗಿದ್ದಕ್ಕೆ ಖುಷಿ ಪಟ್ಟ ಕೋಕಿಲ
ಇನ್ನೊಂದು ಕಡೆ ಅಕುಲ್ ಹಾಗೂ ಶ್ವೇತಾ ಅವರು ಶಕೀಲಾ ಅವರ ಬಗ್ಗೆ ಮಾತನಾಡಿದರು. ಈ ವಾರ ತಾನು ಸೇಫ್ ಆಗಿದ್ದಕ್ಕೆ ಲಯ ಕೋಕಿಲಾ ತುಂಬಾ ಖುಷಿ ಪಟ್ಟರು. ಈ ಬಗ್ಗೆ ಅನುಪಮಾ ಭಟ್ ಜೊತೆ ಸ್ವಲ್ಪ ಮಾತನಾಡಿ ಹಗುರವಾದರು ಲಯೇಂದ್ರ.

ನಾಮಿನೇಷನ್ ಬಗ್ಗೆ ಬಿಸಿಬಿಸಿ ಚರ್ಚೆ
ಈವಾರ ಯಾರು ನಾಮಿನೇಟ್ ಆಗುತ್ತೀವಿ ಎಂಬ ಬಗ್ಗೆ ನೀತೂ, ಆದಿ ಚರ್ಚಿಸಿದರು. ನಾಮಿನೇಷನ್ ಬಗ್ಗೆ ಮನೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಅದರಲ್ಲೂ ಮುಖ್ಯವಾಗಿ ನೀತೂ, ಆದಿ, ಸಂತೋಷ್, ರೋಹಿತ್ ಚರ್ಚಿಸಿದರು. ಈ ಬಗ್ಗೆ ಬಿಗ್ ಬಾಸ್ ಎಚ್ಚರಿಕೆಯನ್ನೂ ನೀಡಿದರು. ನಾಮಿನೇಷನ್ ಬಗ್ಗೆ ಸಂಚು ರೂಪಿಸುವುದು ಸರಿಯಲ್ಲ ಎಂದು ಹೇಳಿದರು.

ಇಂಗ್ಲಿಷ್ ಮಾತನಾಡಿದ್ದಕ್ಕೆ ಸಂತೋಷ್ ಗೆ ಶಿಕ್ಷೆ
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷವಾಕ್ಯವನ್ನು ನಿರಂತರವಾಗಿ ಬರೆಯುವ ಶಿಕ್ಷೆಯನ್ನು ಸಂತೋಷ್ ಗೆ ನೀಡಲಾಯಿತು. ಬಿಳಿ ಫಲಕದ ಮೇಲೆ ಅವರು ನಿರಂತರ ಬರೆಯಲು ಸೂಚಸಿದರು ಬಿಗ್ ಬಾಸ್. ಅವರ ಶಿಕ್ಷೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಕುಲ್ ಅವರಿಗೆ ಒಪ್ಪಿಸಲಾಯಿತು.

ನಾಮಿನೇಷನ್ ನಿಂದ ಹೊರಗುಳಿದ ಅಕುಲ್
ಊಟವನ್ನೂ ಮಾಡದೆ ಸಂತೋಷ್ ಬರೆಯುತ್ತಲೇ ಇದ್ದರು. ಅವರ ಶಿಕ್ಷೆಯ ಜಾಗಕ್ಕೆ ಊಟವನ್ನು ಶ್ವೇತಾ ಚೆಂಗಪ್ಪ ತಂದುಕೊಟ್ಟರು. ಈ ವಾರ ಮನೆಯ ಹೊಸ ಕ್ಯಾಪ್ಟನ್ ಅಕುಲ್ ಬಾಲಾಜಿ ಅವರು ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ.

ಎಲ್ಲರ ಊಹೆಯನ್ನೂ ತಲೆಕೆಳಗೆ ಮಾಡಿದ ಬಿಗ್ ಬಾಸ್
ಎಲ್ಲರೂ ಈ ಬಾರಿ ಯಾರನ್ನು ನಾಮಿನೇಟ್ ಮಾಡಬೇಕೆಂದು ಒಳಗೊಳಗೆ ಸಿದ್ಧವಾಗಿದ್ದರು. ಆದರೆ ಬಿಗ್ ಬಾಸ್ ಅವರ ಊಹೆಯನ್ನು ತಲೆಕೆಳಗೆ ಮಾಡಿದರು. ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿ ಪ್ರಶ್ನಿಸಿದರು, ಈ ಬಾರಿ ಯಾರು ಇಬ್ಬರನ್ನು ಸೇವ್ ಮಾಡುತ್ತೀರಾ ಎಂದು ಕೇಳಿದರು.

ಯಾರು ಯಾರ ಹೆಸರನ್ನು ಸೂಚಿದರು
ದೀಪಿಕಾ ಅವರು ನೀತೂ ಹಾಗೂ ಸಂತೋಷ್ ಅವರನ್ನು ಉಳಿಸುವುದಾಗಿ ಹೇಳಿದರು. ಮಯೂರ್ ಅವರು ಆದಿ ಹಾಗೂ ಲಯ ಅವರ ಹೆಸರನ್ನು ಸೂಚಿಸಿದರು. ಶ್ವೇತಾ ಚೆಂಗಪ್ಪ ಅವರು ಅನುಪಮಾ ಹಾಗೂ ಸೃಜನ್ ಹೆಸರು ಹೇಳಿದರು.

ಈ ವಾರ ನಾಮಿನೇಟ್ ಆದ ಸದಸ್ಯರು
ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆದ ಸದಸ್ಯರು ರೋಹಿತ್, ಲಯ, ಮಯೂರ್, ಸಂತೋಷ್, ನೀತೂ ಮತ್ತು ಆದಿ ಲೋಕೇಶ್. ಸಂತೋಷ ಅವರನ್ನು ಈ ಬಾರಿ ಕ್ಯಾಪ್ಟನ್ ಆದ ಅಕುಲ್ ಅವರು ಸುರಕ್ಷಿತರನ್ನಾಗಿ ಮಾಡುವ ಮೂಲಕ ಕೊನೆಗೆ ಐದು ಮಂದಿ ನಾಮಿನೇಟ್ ಪಟ್ಟಿಯಲ್ಲಿ ಉಳಿದರು.

ನಾಮಿನೇಷನ್ ನಿಂದ ಪಾರಾದ ಸಂತೋಷ್
ಸಂತೋಷ್ ಅವರು ಎಲ್ಲಾ ಶಿಕ್ಷೆಗಳನ್ನು ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳುತ್ತಾರೆ. ಅವರು ಇನ್ನೂ ಮನೆಯಲ್ಲಿ ಇರಬೇಕು. ಈ ಮನೆಯಲ್ಲಿರಲು ಅವರು ಎಲ್ಲಾ ವಿಧದಲ್ಲೂ ಲಾಯಕ್ಕು ಎಂದು ಕಾರಣ ಕೊಟ್ಟರು ಅಕುಲ್ ಬಾಲಾಜಿ. ಆದಿ, ಲಯ, ಮಯೂರ್, ನೀತೂ ಹಾಗೂ ರೋಹಿತ್ ಈ ವಾರ ನಾಮಿನೇಟ್ ಆದ ಸದಸ್ಯರು.

ಸತತ ನಾಲ್ಕನೇ ಬಾರಿ ರೋಹಿತ್ ನಾಮಿನೇಟ್
ಸತತ ನಾಲ್ಕನೇ ಬಾರಿ ರೋಹಿತ್ ನಾಮಿನೇಟ್ ಆಗಿದ್ದಾರೆ. ಸಂತೋಷ್ ಅವರನ್ನು ಸೇವ್ ಮಾಡಲು ಅಕುಲ್ ಕೊಟ್ಟ ಕಾರಣಕ್ಕೆ ರೋಹಿತ್ ಅಸಮಾಧಾನ ವ್ಯಕ್ತಪಡಿಸಿದರು. ಹಾಗೆಯೇ ಬಿಗ್ ಬಾಸ್ ನಲ್ಲಿ ಏನೋ ಗೋಲ್ ಮಾಲ್ ನಡೀತಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.

ಬಿಗ್ ಬಾಸ್ ನಲ್ಲಿ ಗೊಲ್ ಮಾಲ್ ನಡೀತಿದೆಯೇ?
ಮಯೂರ್ ಪಟೇಲ್ ಜೊತೆ ರೋಹಿತ್ ಮಾತನಾಡುತ್ತಾ, ನಾಲ್ಕು ಜನರ ಹೆಸರು ಒಂದೇ ಒಂದು ಸಲವು ನಾಮಿನೇಟ್ ಆಗಿಲ್ಲ. ಎಲ್ಲೋ ಏನೋ ಮಿಸ್ ಹೊಡೀತಿದೆ ಅನ್ನಿಸುತ್ತಿಲ್ಲವೇ ಎಂದು ಅನುಮಾನ ವ್ಯಕ್ತಪಡಿಸಿದರು. ಅವರು ಯಾರು ಎಂದು ಮಯೂರ್ ಕೇಳಿದಾಗ ಶ್ವೇತಾ, ಅನು, ಸೃಜಾ ಮತ್ತು ದೀಪಿಕಾ ಹೆಸರು ಹೇಳಿದರು. ಇವರನ್ನು ಯಾಕೆ ನಾಮಿನೆಟ್ ಮಾಡುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.

ಸಂತೋಷ್ ಮುಂಚೆ ಹೀಗಿರಲಿಲ್ಲ ಎಂದ ರೋಹಿತ್
ಐದಾರು ವರ್ಷಗಳ ಹಿಂದೆ ತಾನು ಸಂತೋಷ್ ಅವರನ್ನು ಭೇಟಿ ಮಾಡಿದ್ದೆ. ಆಗ ಈ ರೀತಿ ಇರಲಿಲ್ಲ ಅವನು. ಈಗ ಯಾಕೆ ಈ ರೀತಿ ಆಗಿದ್ದಾನೋ ಗೊತ್ತಿಲ್ಲ ಎಂದರು ರೋಹಿತ್ ಪಟೇಲ್. ಯಾಕೆ ಅವನು ಇಷ್ಟೆಲ್ಲಾ ಬದಲಾಗಿದ್ದಾನೋ ಎಂದೂ ಇಬ್ಬರು ಪಟೇಲರು ಚರ್ಚಿಸಿದರು.

ಬರ್ತ್ ಡೇಗೆ ವಿಶ್ ಮಾಡಲು ಅವಕಾಶ ಕೊಡಿ
ಇದೇ 23ಕ್ಕೆ ತಮ್ಮ ಪತಿಯ ಬರ್ತ್ ಡೇ ಇದೆ ಅವರಿಗೆ ಒಂದು ಸಣ್ಣ ವಿಶ್ ಮಾಡಲು ಅವಕಾಶ ಕೊಡುವಂತೆ ಶ್ವೇತಾ ಚೆಂಗಪ್ಪ ಕೇಳಿದರು. ಅನುಪಮಾ ಭಟ್ ಸಹ ತಮ್ಮ ಅಕ್ಕ ಹಾಗೂ ತಂದೆಯ ಬರ್ತ್ ಡೇ ಇದೆ ತಮಗೂ ಅವರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸುವಂತೆ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡರು.

ತಂತ್ರ, ಕುತಂತ್ರಗಳಿಗೆ ಬಿಗ್ ಬಾಸ್ ಮಂತ್ರ
ಒಟ್ಟಾರೆಯಾಗಿ ಈ ವಾರ ಹೊಸ ರೀತಿಯಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಗೆ ಮನೆಯ ಸದಸ್ಯರು ದಂಗಾಗಿದ್ದಾರೆ. ಬಿಗ್ ಬಾಸ್ ಈ ರೀತಿನೂ ಮಾಡ್ತಾರಾ ಎಂಬುದು ಅವರ ಮುಖಗಳಲ್ಲಿ ಕಾಣುತ್ತಿತ್ತು. ಮನೆಯ ಸದಸ್ಯರು ತಂತ್ರ, ಕುತಂತ್ರಗಳು ಲೆಕ್ಕಾಚಾರ ತಪ್ಪಿದ್ದವು.


Click it and Unblock the Notifications











