ಅಕುಲ್ ಬಾಲಾಜಿಯನ್ನು ಬಾಸ್ಟರ್ಡ್ ಎಂದ ಸಂತೋಷ್
ಬಿಗ್ ಬಾಸ್ ಕಾರ್ಯಕ್ರಮ ಇಪ್ಪತ್ತೈದನೇ ದಿನಕ್ಕೆ ಅಡಿಯಿಟ್ಟಿದೆ. ಬೆಳಗ್ಗೆ ಎಂಟು ಗಂಟೆಗೆ ದಿನದಾರಂಭವಾಯಿತು. ಇಪ್ಪತ್ತೈದು ದಿನ ಕಳೆದರೂ ಮುಂಜಾನೆ ಒಂದೇ ಒಂದು ಸುಪ್ರಭಾತ ಕೇಳಿಸಲಿಲ್ಲ. ಪ್ರತಿದಿನವೂ ಸಿನಿಮಾ ಹಾಡುಗಳ ಮೂಲಕವೇ ಆರಂಭಿಸಲಾಗುತ್ತಿರುವುದು ಯಾಕೋ ಏನೋ ಗೊತ್ತಿಲ್ಲ.
ಇಷ್ಟು ದಿನ ಜೋಡಿ ಹಕ್ಕಿಗಳಂತೆ ಓಡಾಡುತ್ತಿದ್ದ ನೀತೂ ಹಾಗೂ ಆದಿ ಸ್ವಲ್ಪ ಗರಂ ಆಗಿ ಕಾಣಿಸಿಕೊಂಡರು. ಸಣ್ಣಪುಟ್ಟ ವಿಚಾರಕ್ಕೆ ಇಬ್ಬರೂ ಗರಂ ಆದರು. ಇದಕ್ಕಾಗಿ ಆದಿ ಪದೇಪದೇ ಸಾರಿ ಎಂದು ಹೇಳುತ್ತಾ ನೀತೂ ಬಳಿ ಗೋಗರೆದರು. ಇದೆಲ್ಲಾ ಇಬ್ಬರ ನಾಟಕ ಎಂದು ನೋಡುಗರ ಗಮನಕ್ಕೂ ಬಂತು.

ಈ ಬಾರಿ ಲಗ್ಜುರಿ ಬಜೆಟ್ ನಲ್ಲಿ ಗೆದ್ದ ದೀಪಿಕಾ ಅವರ ತಂಡದ ಸದಸ್ಯರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ನೀಡಲಾಯಿತು. ಆದರೆ ನಾಮಿನೇಟ್ ಆಗಿರುವ ನೀತೂ, ಮಯೂರ್ ಹಾಗೂ ಲಯ ಅವರಿಗೆ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸುವ ಅರ್ಹತೆ ಇರಲಿಲ್ಲ.
ಮನೆಯ ಬಹುತೇಕ ಸದಸ್ಯರು ದೀಪಿಕಾ ಅವರ ಹೆಸರನ್ನು ಕ್ಯಾಪ್ಟನ್ ಪಟ್ಟಕ್ಕೆ ಸೂಚಿಸಿದರು. ತಾನು ಕ್ಯಾಪ್ಟನ್ ಆಗುತ್ತೇನೆ ಎಂದು ಬಹುಶಃ ಒಳಗೊಳಗೇ ಮಂಡಕ್ಕಿ ಮೆಲ್ಲುತ್ತಿದ್ದ ಸಂತೋಷ್ ಗೆ ನಿರಾಸೆಯಾಯಿತು. ಮನೆಯ ಈ ವಾರದ ಹೊಸ ಕ್ಯಾಪ್ಟನ್ ಆಗಿ ದೀಪಿಕಾ ಆಯ್ಕೆಯಾದರು.
ಅಕುಲ್ ಮತ್ತು ಸಂತೋಷ್ ಒಬ್ಬರಿಗೊಬ್ಬರು ಕಿಚಾಯಿಸಿಕೊಂಡರು. ಇಲ್ಲಿಂದ ನೀನೂ ಹೊರಗೆ ಹೋದ ಮೇಲೆ ನಿರ್ಮಲ ಶೌಚಾಲಯದಲ್ಲಿ ನಿನಗೆ ಕೆಲಸ ಗ್ಯಾರಂಟಿ ಕಣೋ ಎಂದು ಅಕುಲ್ ಹೇಳಿದ್ದಕ್ಕೆ. ನೀನು ಬಟ್ಟೆ ಬಿಚ್ಚಿಕೊಂಡು ಅಲ್ಲಿ ಚಿಲ್ಲರೆ ಕಾಸಿಗೆ ಭಿಕ್ಷೆ ಬೇಡುತ್ತಿರುತ್ತೀಯ ಎಂದು ಸಂತೋಷ್ ಹೇಳಿದರು. ಮಾತಿನ ಭರದಲ್ಲಿ ಅಕುಲ್ ಅವರನ್ನು ಬಾಸ್ಟರ್ಡ್ ಎಂಬ ಶಬ್ದ ಸಂತೋಷ್ ಅವರ ಬಾಯಿಯಿಂದ ಹೊರಬಿತ್ತು.
ಇಬ್ಬರ ನಡುವೆ ಒಂದಷ್ಟು ಮಾತಿನ ಚಕಮಕಿ ನಡೆಯಿತು. ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡರು. ನಾವಿಬ್ಬರು ಹಾಗೆ ತಮಾಷೆ ಮಾಡಿಕೊಳ್ಳುವುದು ಸರಿಯಿಲ್ಲ ಎಂದು ಸಂತೂ ಹೇಳಿದ. ಅದಕ್ಕೆ ಅಕುಲ್ ಸಹ ಆಯ್ತು ಎಂಬಂತೆ ಹೇಳಿದರು. ಅಲ್ಲಿಗೆ ಇಬ್ಬರ ನಡುವೆ ಯುದ್ಧವಿರಾಮ ಘೋಷಣೆಯಾಯಿತು.


Click it and Unblock the Notifications











