ಬಿಗ್ ಬಾಸ್ ನಲ್ಲಿ ಬಹಳ ದಿನಕ್ಕೆ ಹರಿದ ಕಣ್ಣೀರ ಕೋಡಿ
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವಾರಗಳು ಉರುಳುತ್ತಿದ್ದಂತೆ ಮನೆಯಲ್ಲಿ ಸದಸ್ಯರ ಸಂಖ್ಯೆಯೂ ಕಡಿಮೆಯಾಗುತ್ತಾ ಬರುತ್ತಿದೆ. ಈ ವಾರ ಆದಿ ಲೋಕೇಶ್ ಹೊರಬಿದ್ದ ನಂತರ ಮನೆಯಲ್ಲಿ ಈಗ ಉಳಿದಿರುವ ಸದಸ್ಯರು ಕೇವಲ ಎಂಟು ಮಂದಿ ಮಾತ್ರ.
ಅರುವತ್ತ ಮೂರು ಮತ್ತು ಅರುವತ್ತ ನಾಲ್ಕನೇ ದಿನ ಕೆಲವು ರೋಚಕ ಘಟನೆಗಳಿಗೆ ಬಿಗ್ ಬಾಸ್ ಮನೆ ಸಾಕ್ಷಿಯಾಯಿತು. ಮನೆಯ ಯಾವ ಇಬ್ಬರು ಸದಸ್ಯರನ್ನು ನೀವು ರಕ್ಷಿಸಲು ಇಚ್ಛಿಸುತ್ತೀರಾ ಎಂದು ದೀಪಿಕಾರನ್ನು ಬಿಗ್ ಬಾಸ್ ಕೇಳಿದ್ದರು. ಆಗ ಅವರು ಸೃಜನ್ ಮತ್ತು ಅಕುಲ್ ಹೆಸರು ಸೂಚಿಸಿದ್ದರು.
ಪಕ್ಕದಲ್ಲೇ ಇದ್ದ ತನ್ನ ಹೆಸರನ್ನು ಏಕೆ ಸೂಚಿಸಲಿಲ್ಲ ಎಂದು ಸಂತೋಷ್ ಅವರು ದೀಪಿಕಾ ಬಳಿ ಕ್ಯಾತೆ ತೆಗೆದರು. ಇದೇ ವಿಚಾರವಾಗಿ ಇಬ್ಬರ ನಡುವೆ ಸ್ವಲ್ಪ ಮಾತುಕತೆಯೂ ನಡೆಯಿತು. ಕಡೆಗೆ ದೀಪಿಕಾ ಬೇಸರಗೊಂಡು ತನ್ನ ತಂದೆತಾಯಿ ಆಣೆಗೂ ನಿನ್ನ ಜೊತೆ ಇನ್ನು ಮುಂದೆ ಮಾತಾಡಲ್ಲ ಎಂದು ಎದ್ದು ಹೊರಟು ಹೋದರು.

ದೀಪಿಕಾ ಮಾತ್ರ ಸೊಪ್ಪ ಹಾಕಲಿಲ್ಲ
ಇಷ್ಟೆಲ್ಲಾ ಗಲಾಟೆ ನಡೆದ ಬಳಿಕವೂ ಸಂತೋಷ್ ಮಾತ್ರ ದೀಪಿಕಾ ಹಿಂದೆಹಿಂದೆಯೇ ಸುತ್ತಾ ತನ್ನನ್ನು ಮಾತನಾಡುವಂತೆ ದುಂಬಾಲು ಬಿದ್ದ. ಆದರೆ ಇದಕ್ಕೆ ದೀಪಿಕಾ ಮಾತ್ರ ಸೊಪ್ಪು ಹಾಕಲಿಲ್ಲ. ಶಟ್ ಅಪ್ ಎಂದು ಬೈದರೂ ಬಿಡದೆ ಅವರ ಹಿಂದೆಯೇ ಸುತ್ತುತ್ತಿದ್ದರು.

ಬಿಕ್ಕಿಬಿಕ್ಕಿ ಅತ್ತು ಕಣ್ಣೀರಿಟ್ಟ ದೀಪಿಕಾ
ಇವರಿಬ್ಬರನ್ನೂ ಒಂದು ಮಾಡಲು ಮನೆಯ ಸದಸ್ಯರೂ ಸಾಕಷ್ಟು ಶ್ರಮಿಸಿದರು. ಒಟ್ಟಾರೆಯಾಗಿ ಬಹಳ ದಿನಕ್ಕೆ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರ ಕೋಡಿ ಹರಿಯಿತು. ಸಂತೋಷ್ ಅವರನ್ನು ಎಷ್ಟು ದಿನ ಸಹಿಸಿಕೊಳ್ಳುವುದು. ಎಲ್ಲದಕ್ಕೂ ಅವನು ತನ್ನನ್ನು ಸಪೋರ್ಟ್ ಮಾಡುತ್ತಿಲ್ಲ ಎಂದು ಹೇಳುತ್ತಿರುತ್ತಾನೆ ಎಂದು ದೀಪಿಕಾ ಬಿಕ್ಕಿಬಿಕ್ಕಿ ಅತ್ತರು.
ರೋಹಿತ್ ಬಳಿ ಮಾತನಾಡುತ್ತಿದ್ದಾಳೆ ದೀಪಿಕಾ ಎಂದು ಮತ್ತೆ ಮನೆಯವರ ಮುಂದೆ ಕ್ಯಾತೆ ತೆಗೆಯುತ್ತಿದ್ದರು ಸಂತೋಷ್. ಕಡೆಗೆ ದೀಪಿಕಾಗೆ ರೋಹಿತ್ ಕೊಟ್ಟ ಸಲಹೆ ಎಂದರೆ ದಯವಿಟ್ಟು ಗೆಳೆತನ ಕಳೆದುಕೊಳ್ಳಬೇಡಿ ಎಂದು.

ಗುರುಪ್ರಸಾದ್ ರಿಂದ ಪುಕ್ಕಟೆ ಸಲಹೆ
ಅಯ್ಯೋ ಯಾಕಮ್ಮಾ ಏನಾಯ್ತು ನಿಜವಾಗಿಯೂ ನನಗೆ ಅರ್ಥವಾಗಿಲ್ಲ. ಇಷ್ಟಕ್ಕೂ ನಿಮ್ಮಿಬ್ಬರ ನಡುವೆ ಏನು ನಡೀತು ಎಂಬುದನ್ನು ಹೇಳು ಎಂದರು ಗುರುಪ್ರಸಾದ್. ಅದಕ್ಕೆ ದೀಪಿಕಾಫಸ್ಟ್ರೇಷನ್ ಅಷ್ಟೇ ಎಂದರು. ಅಯ್ಯೋ ನೀವಿಬ್ಬರೂ ಇಷ್ಟು ಚೆನ್ನಾಗಿದ್ದೀರಿ. ಇದ್ದಕ್ಕಿದ್ದಂತೆ ಏನಾಯಿತಪ್ಪಾ ಇವರಿಗೆ ಎಂದು ತುಂಬಾ ಬೇಸರವಾಯಿತು. ನನಗೂ ಸೃಜನ್ ಗೂ ಆಗಲ್ಲ, ಎರಡು ಮೂರು ದಿನ ಸುಮ್ಮನಿದ್ದು ಬಿಡುತ್ತೇವೆ. ಮತ್ತೆ ಸರಿ ಹೋಗುತ್ತೇವೆ. ನೀವು ಹಾಗೆ ಮಾಡಿ ಎಂಬ ಪುಕ್ಕಟೆ ಸಲಹೆಯನ್ನು ಕೊಟ್ಟರು ಗುರುಪ್ರಸಾದ್.

ಅಕುಲ್ ಶಿಕ್ಷೆ ಅರುವತ್ತ ನಾಲ್ಕನೇ ದಿನಕ್ಕೆ ಮುಕ್ತಾಯ
ಅಕುಲ್ ಅವರಿಗೆ ಆದಿ ಮನೆಯಿಂದ ಹೊರಹೋಗುವಾಗ ನೀಡಿದ್ದ ಸ್ಲೋ ಮೋಷನ್ ಶಿಕ್ಷೆ ಇಂದಿಗೆ ಮುಕ್ತಾಯವಾಯಿತು. ಸಂತೋಷ್ ಮತ್ತು ದೀಪಿಕಾ ಅವರನ್ನು ಪ್ಯಾಚಪ್ ಮಾಡಲು ಎಲ್ಲರೂ ಪ್ರಯತ್ನಿಸಿದರು. ಕಡೆಗೂ ಇಬ್ಬರೂ ಒಂದಾಗುವ ಸೂಚನೆಗಳು ಕಂಡುಬರಲಿಲ್ಲ.

ತನ್ನ ಪ್ರಾಮಿಸನ್ನು ಮುರಿದರು ದೀಪಿಕಾ
ಅರುವತ್ತ ನಾಲ್ಕನೇ ದಿನ ತನ್ನ ಪ್ರಾಮಿಸನ್ನು ಮುರಿದರು ದೀಪಿಕಾ. ಸಾರಿ ಮಮ್ ಡ್ಯಾಡಿ ಎಂದು ತಂದೆತಾಯಿಗೆ ಕ್ಷಮಾಪಣೆ ಕೋರಿ ದೀಪಿಕಾ ಮತ್ತು ಸಂತೋಷ್ ಇಬ್ಬರೂ ಒಂದಾದರು. ಕಡೆಗೆ ಇಬ್ಬರೂ ತಮ್ಮ ಮನಸ್ತಾಪ ಮರೆತು ಜೊತೆಯಾಗಿ ಊಟ ಮಾಡಿದರು. ಅಲ್ಲಿಗೆ ಅವರಿಬ್ಬರ ನಡುವಿನ ಮನಸ್ತಾಪಕ್ಕೆ ಬ್ರೇಕ್ ಬಿತ್ತು.

ಹಗ್ಗಜಗ್ಗಾಟದಲ್ಲಿ ಅಕುಲ್ ತಂಡಕ್ಕೆ ಗೆಲುವು
ಏತನ್ಮಧ್ಯೆ ಬಿಗ್ ಬಾಸ್ ವಿಶೇಷ ಏಕ ದಿನ ಟಾಸ್ಕ್ ಕೊಟ್ಟರು. ಅದರ ಹೆಸರು ಹಗ್ಗ ಜಗ್ಗಾಟ. ಮೊದಲ ತಂಡದ ನಾಯಕ ಸಂತೋಷ್, ಎರಡನೇ ತಂಡದ ನಾಯಕ ಅಕುಲ್. ಗಾರ್ಡನ್ ಏರಿಯಾ ಅಖಾಡ ಸಿದ್ಧವಾಯಿತು. ಆಟವೂ ಜೋರಾಗಿಯೇ ನಡೆಯಿತು. ಸಂತೂ ಕಡೆಗೆ ಎಲ್ಲರೂ ಮಹಿಳೆಯರೇ ಇದ್ದದ್ದು ವಿಶೇಷ. ಹಗ್ಗಜಗ್ಗಾಟದಲ್ಲಿ ಅಕುಲ್ ತಂಡ ಗೆಲುವು ಸಾಧಿಸಿತು.

ಮನೆಯಲ್ಲಿ ಅಂತರ್ಮುಖಿ ಯಾರು?
ಬಿಗ್ ಬಾಸ್ ರಿಂದ ಎರಡು ಪ್ರಶ್ನೆಗಳನ್ನು ಎಲ್ಲರಿಗೂ ಕೇಳಲಾಯಿತು. ಮನೆಯಲ್ಲಿ ಅತಿ ಕಡಿಮೆ ಮನರಂಜನೆ ನೀಡುವ ಒಬ್ಬ ಸದಸ್ಯ ಹಾಗೂ ಅಂತರ್ಮುಖಿಯಾಗಿರುವ ಸದಸ್ಯ ಯಾರು ಎಂಬೆರಡು ಪ್ರಶ್ನೆಗಳು ಕೇಳಲಾಯಿತು. ಇದಕ್ಕೆ ಬಹುತೇಕರು ಕೊಟ್ಟ ಉತ್ತರ ರೋಹಿತ್ ಹಾಗೂ ನೀತೂ. ಆದರೆ ರೋಹಿತ್ ಅವರು ಕೊಟ್ಟ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿತು. ಅಂತರ್ಮುಖಿ ಆಗಿರುವುದು ನಾನೇ ಎಂದು ಅವರು ಹೇಳಿದರು.

ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಇಲ್ಲ
ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಶುರುವಾಗುತ್ತದೆ ಎಂದು ಮನೆಯ ಸದಸ್ಯರು ಕಾಯುತ್ತಾ ಕುಳಿತಿದ್ದರು. ಆದರೆ ಬಹಳ ಹೊತ್ತು ಮನೆಯ ಸದಸ್ಯರನ್ನು ಕಾಯಿಸಿದ ಬಿಗ್ ಬಾಸ್ ಕಡೆಗೆ ನೀವಿನ್ನು ಹೊರಡಬಹುದು ಎಂದು ಆಜ್ಞಾಪಿಸಿದರು.

ಮನೆಯಲ್ಲಿ ಗೊಂದಲ ಶುರು
ಈ ಬಾರಿ ನಾಮಿನೇಷ ಪ್ರಕ್ರಿಯೆ ಇಲ್ಲದ ಕಾರಣ ಮನೆಯಲ್ಲಿ ನಿಗೂಢ ಮೌನ ಆವರಿಸಿದೆ. ಈ ಬಾರಿ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಬಗ್ಗೆ ಗೊಂದಲ ಶುರುವಾಗಿದೆ. ನಾಮಿನೇಷನ್ ಆಗುತ್ತೋ ಇಲಲ್ವೋ, ಆದರೆ ಯಾವಾಗ ಆಗುತ್ತದೋ, ಇನ್ಯಾವ ತಿರುವು ಪಡೆಯುತ್ತದೋ ಎಂಬ ಆತಂಕ ಮನೆಯ ಸದಸ್ಯರಲ್ಲಿ ಮನೆ ಮಾಡಿದೆ.


Click it and Unblock the Notifications











