ಬಿಗ್ ಬಾಸ್ ಸದಸ್ಯರಿಗೆ ಒಂದಷ್ಟು ಪುಕ್ಕಟೆ ಸಲಹೆಗಳು!
ಈ ಬಾರಿ ಮನೆಯಿಂದ ಯಾರು ಹೊರಹೋಗಬಹುದು ಎಂಬ ಬಗ್ಗೆ ಮನೆಯ ಸದಸ್ಯರ ನಡುವೆ ಚರ್ಚೆ ನಡೆಯಿತು. ಅದರಲ್ಲೂ ನೇರವಾಗಿ ನಾಮಿನೇಟ್ ಆಗಿರುವ ಸದಸ್ಯರ ವರ್ತನೆಯೇ ಬದಲಾಗಿದೆ. ಸಂತೋಷ್ ಅಂತೂ ಬಹುಶಃ ಇದೇ ತಮ್ಮ ಕೊನೆಯ ವಾರ ಎಂಬಂತಿದ್ದಾರೆ.
ಅವರಿಗೆ ಸ್ವಲ್ಪ ಧೈರ್ಯ ತುಂಬುವ ಪ್ರಯತ್ನವನ್ನು ಗುರುಪ್ರಸಾದ್ ಮಾಡಿದರು. ಆ ಶಾರದೆ ಹೇಳುತ್ತಿದ್ದಾಳೆ ನಿನಗೆ ಇನ್ನೂ ಸ್ವಲ್ಪ ದಿನ ಮನೆಯಲ್ಲಿರುವ ಭಾಗ್ಯ ಇದೆ ಎಂದರು. ಇಲ್ಲಿಂದ ಒಬ್ಬರನ್ನು ನಾನು ಕರೆದುಕೊಂಡು ಹೋಗಬಹುದೇ ಎಂದು ಯಾರನ್ನೋ ಮನಸ್ಸಿನಲ್ಲಿ ಇಟ್ಟುಕೊಂಡು ಸಂತೋಷ್ ಕೇಳಿದ ಪ್ರಶ್ನೆಗೆ ಗುರು ಪ್ರಸಾದ್ ಉತ್ತರ ಕೊಡಲಿಲ್ಲ. ಶಾರದೆ ಔಟ್ ಆಫ್ ಆರ್ಡರ್ ಎಂದರು.
ಅರುವತ್ತೇಳನೇ ದಿನ ಗುರುಪ್ರಸಾದ್ ಅವರ ಕ್ಯಾಪ್ಟನ್ ಅವಧಿ ಮುಕ್ತಾಯವಾಯಿತು. ಈ ಬಗ್ಗೆ ಬಿಗ್ ಬಾಸ್ ಪ್ರಕಟಿಸುತ್ತಿದ್ದಂತೆ ಎಲ್ಲರೂ ಅವರ ಮುಂದೆ ಕುಣಿದಾಡಿದರು. ಅಯ್ಯೋ ನನ್ನ ಮಕ್ಳ ಮುಂದೆ ನಿಮಗಿದೆ ಇರಿ ಎಂದು ಅವರು ನಗಾಡಿದರು. ಬನ್ನಿ ನೋಡೋಣ 67ನೇ ದಿನ ಏನು ನಡೀತು ಎಂದು.

ಹೊಸ ಕ್ಯಾಪ್ಟನ್ ಆಗಿ ಅಕುಲ್ ಬಾಲಾಜಿ
ಕ್ಯಾಪ್ಟನ್ ಪಟ್ಟಕ್ಕೆ ನೀತೂ ಹಾಗೂ ಅಕುಲ್ ನಡುವೆ ಸ್ಪರ್ಧೆ ನಡೆಯಿತು. ಇವರಿಬ್ಬರನ್ನು ಆಯ್ಕೆ ಮಾಡಿದ್ದು ನೇರವಾಗಿ ನಾಮಿನೇಟ್ ಆಗಿರುವ ಸಂತೋಷ್, ಅನುಪಮಾ ಹಾಗೂ ರೋಹಿತ್. ಮನೆಯ ಸದಸ್ಯರ ಮತಗಳ ಆಧಾರದ ಮೇಲೆ ಅಕುಲ್ ಈ ವಾರ ಹೊಸ ಕ್ಯಾಪ್ಟನ್ ಆಗಿ ಆಯ್ಕೆಯಾದರು.

ಏಕದಿನದ ಟಾಸ್ಕ್ ಅದುವೆ ಸಲಹಾ ಪೆಟ್ಟಿಗೆ
ಬಿಗ್ ಬಾಸ್ ಏಕದಿನ ಟಾಕ್ಸ್ ಕೊಟ್ಟರು. ಅದುವೇ 'ಸಹಲಾ ಪೆಟ್ಟಿಗೆ'. ಮನೆಯ ಸದಸ್ಯರಿಗೆ ಕೊಡುವ ಸಲಹೆಯನ್ನು ಒಂದು ಪತ್ರದಲ್ಲಿ ಬರೆದು ಪೆಟ್ಟಿಗೆಯಲ್ಲಿ ಹಾಕಬೇಕು. ಕನಿಷ್ಠ ಇಬ್ಬರು ಗರಿಷ್ಠ ಮೂವರಿಗೆ ಸಲಹೆ ಕೊಡಬೇಕು. ಅದರಂತೆ ಮನೆಯ ಸದಸ್ಯರು ಬರೆದರು.

ನೀತೂಗೆ ಕೊಟ್ಟ ಪುಕ್ಕಟೆ ಸಲಹೆಗಳು
ಎಲ್ಲದಕ್ಕೂ ಗಲಾಟೇನೇ ಪರಿಹಾರ ಅಲ್ಲ. ತಾಳ್ಮೆಯಿಂದ ಯೋಚಿಸಿ. ಸೀಕ್ರೆಟ್ ರೂಮನ್ನು ಆಧಾರವಾಗಿಟ್ಟುಕೊಂಡು ಉಳಿದ ಸದಸ್ಯರನ್ನು ಹೀಯಾಳಿಸುವುದು ತಪ್ಪು ಎಂದು ಮನೆಯ ಸದಸ್ಯರಲ್ಲಿ ಒಬ್ಬರಾಗಿರುವ ನೀತೂ ಅವರಿಗೆ ಕೊಟ್ಟ ಪುಕ್ಕಟೆ ಸಲಹೆಗಳು ಇವು.

ಸಂತೋಷ್ ನೀವು ಚಂಚಲ ಸ್ವಭಾವ ಬಿಡಿ
ಲವಲವಿಕೆಯಿಂದ ಇರಿ. ತುಂಬಾ ಸೂಕ್ಷ್ಮ ಸ್ವಭಾವದವರು ನೀವು. ಚಂಚಲ ಸ್ವಭಾವ ಬಿಡಿ. ನಗುನಗುತ್ತಾ ಇರಿ. ಯಾವಾಗಲ್ಲೂ ಕನ್ನಡವನ್ನು ಮನಸ್ಸಿನಿಂದ ಮಾತನಾಡಿ ಎಂಬ ಸಲಹೆಗಳು ಸಂತೋಷ್ ಅವರಿಗೆ ಕೊಡಲಾಗಿತ್ತು.

ತಾಳಿದವನು ಬಾಳಿಯಾನು ಅಕುಲ್ ಗೆ ಸಲಹೆ
ಮಾನವನಾಗಿರು. ಕೆಲವು ಸಲ ಸೋಲುವುದರಲ್ಲಿ ತಪ್ಪೇನು ಇಲ್ಲ. ತಾಳ್ಮೆ ಮತ್ತು ಫೋಕಸ್ ಬೆಟ್ಟವನ್ನೂ ಅಲುಗಾಡಿಸಬಲ್ಲದು. ಆಕ್ರಮಣಕಾರಿಯಾಗಿರಬೇಡಿ ಅಂದರೆ ಅಗ್ರೇಸೀವ್ ಆಗಿರಬೇಡಿ. ನಿಮ್ಮ ಕೆಲಸವನ್ನು ಪ್ರೀತಿಸಿ ನಿಮ್ಮ ಕೆಲಸದ ವ್ಯಾಖ್ಯೆ ಮಾಡಬೇಡಿ. ತಾಳಿದವನು ಬಾಳಿಯಾನು ಎಂಬ ಬಿಟ್ಟಿ ಸಲಹೆಗಳು ಅಕುಲ್ ಬಾಲಾಜಿ ಅವರಿಗೆ ನೀಡಲಾಯಿತು.

ಹೆಚ್ಚಾಗಿ ಹಾಸಿಗೆ ಮೇಲೆಯೇ ಕಳೆಯಬೇಡಿ
ದಿನದ ಬೆಳಕಿರುವಾಗ ಹಾಸಿಗೆ ಮೇಲೆ ತುಂಬ ಹೊತ್ತು ಕೂತಿರುವುದು ಮನಸ್ಸಿನ ಆರೋಗ್ಯಕ್ಕೂ ದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಏಳಿ ಎದ್ದೇಳಿ ಬೇರೆಯವರನ್ನು ಹುರುದುಂಬಿಸಿ. ಮನಬಿಚ್ಚುವ ಅಗತ್ಯವಿದೆ. ತಾನು ತಾನೇ ಆಗಿರಬೇಕು. ಎಲ್ಲಾ ವಿಚಾರಾಗಳಲ್ಲೂ ಹಿಂಜರಿಯುತ್ತಾರೆ. ಸ್ವಂತ ವ್ಯಕ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಸಲಹೆಗಳನ್ನು ಸೃಜನ್ ಗೆ ನೀಡಲಾಯಿತು.

ಮನಸ್ಸು ಬಿಚ್ಚಿ ಮಾತನಾಡಿ ರೋಹಿತ್
ಮನಸ್ಸು ಬಿಚ್ಚಿ ಮಾತನಾಡಿ. ಟಾಸ್ಕ್ ನಲ್ಲಿ ಆಕ್ಟೀವ್ ಆಗಿರಿ. ಲವಲವಿಕೆಯಿಂದ ಇರಿ. ತೀರಾ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಕೋಪದ ಕಣ್ಣಿಂದ ಎಲ್ಲರನ್ನೂ ಅಳೆಯಬೇಡಿ ಎಂಬ ಉಚಿತ ಸಲಹೆಗಳು ರೋಹಿತ್ ಅವರಿಗೆ ನೀಡಲಾಯಿತು.

ಗುರುಪ್ರಸಾದ್ ನೀವೊಬ್ಬರೇ ಬುದ್ಧಿವಂತರಲ್ಲ
ತಮ್ಮ ಅಭಿಪ್ರಾಯಗಳನ್ನು ಮನೆಯ ಇತರೆ ಸದಸ್ಯರ ಮೇಲೆ ಹೇರುವುದು ಬೇಡ. ನಾನು ಇರುವುದೇ ಹೀಗೆ ಅದನ್ನು ಪಡೆಯಲು ಏನು ಬೇಕಾದರೂ ಮಾಡ್ತೀನಿ ಎಂಬ ಧೋರಣೆ ಬಿಡಿ. ತುಂಬಾ ಯೋಚಿಸಬೇಡಿ ಇಲ್ಲಿ ಎಲ್ಲರೂ ಬುದ್ಧಿವಂತರೇ. ಯಾರೂ ಪರ್ಫೆಕ್ಟ್ ಅಲ್ಲ. ನೀವು ಪರ್ಫೆಕ್ಟ್ ಎಂಬ ಹುಸಿ ವರ್ತನೆ ಬೇಡ. ಯಾರ ಫೀಲಿಂಗ್ಸ್ ಜೊತೆ ಆಟವಾಡಬೇಡಿ. ಬೇರೆಯವರನ್ನು ಬದಲಾಯಿಸುವ ಮೊದಲು ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಗೌರವವನ್ನು ಸಂಪಾದಿಸಿಕೊಳ್ಳಬೇಕು ಅದನ್ನು ಬಲವಂತವಾಗಿ ಪಡೆಯಬೇಡಿ. ನಿಮ್ಮ ಭಾಷೆಯ ಮೇಲೆ ಹಿಡಿತ ಇರಲಿ. ಮುಖ ನೋಡಿ ಯಾರನ್ನೂ ಅಳೆಯಬೇಡಿ ಎಂಬ ಸಲಹೆಗಳು ಗುರುಪ್ರಸಾದ್ ಅವರಿಗೆ ನೀಡಲಾಯಿತು.

ನನಗೆ ಬುದ್ಧಿವಾದ ಹೇಳ್ತಾರಲ್ಲಾ ಎಂಬ ಧೋರಣೆ
ಸಲಹೆಗಳನ್ನು ಮೊದಲು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ಎಲ್ಲರೂ ಕಾಲ ಸರಿಯುತ್ತಿದ್ದಂತೆ ಯೋಚಿಸಲಾರಂಭಿಸಿದರು. ತಮಗೇ ಬುದ್ಧಿ ಹೇಳ್ತಾರಲ್ಲಾ ಎಂಬಂತೆ ವರ್ತಿಸಲಾರಂಭಿಸಿದರು. ಇದು ನಾನು ಕೊಟ್ಟ ಸಲಹೆಯಲ್ಲ. ಬಹುಶಃ ಬಿಗ್ ಬಾಸ್ ಕೆಲವು ಸಲಹೆಗಳನ್ನು ಸೇರಿಸಿರಬಹುದು ಎಂಬ ಲೆಕ್ಕಾಚಾರವೂ ನಡೆಯಿತು.

ನಾನು ಏನು ಎಂಬುದನ್ನು ತೋರಿಸ್ತೀನಿ
ಪೇಮೆಂಟ್ ಇಲ್ಲದೆ ನಾನು ಒಂದೇ ಒಂದು ಸೆಂಟೆನ್ಸ್ ಬರೆಯಲ್ಲ. ಹಾಗಾಗಿ ಕೊಟ್ಟ ಕನಿಷ್ಠ ಆಯ್ಕೆಗಳನ್ನು ಬಳಸಿಕೊಂಡು ನಾನು ಬರೆದಿದ್ದೇನೆ ಎಂದರು ಗುರುಪ್ರಸಾದ್. ನನ್ನನ್ನು ಬುದ್ಧಿವಂತ ಅಲ್ಲಾ ಎಂದು ಬರೆದಿದ್ದಾರೆ. ಅವರಿಗೆಲ್ಲಾ ಇದೆ ಮುಂದೆ ಎಂದರು. ನಾನು ಮನೆಗೆ ಬಂದ ಮೇಲೆ ಇಲ್ಲಿನವರು ಆಕ್ಟೀವ್ ಆಗಿದ್ದಾರೆ ಎಂದು ಅಕುಲ್ ಬಳಿ ಹೇಳಿಕೊಂಡರು.


Click it and Unblock the Notifications











