''ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ'' ಎಂದ ನಟ ಜಗ್ಗೇಶ್
ಇಷ್ಟು ದಿನ ಜೋರಾಗಿ ಮಾತನಾಡುತ್ತಿದ್ದ ನಟಿ ಸಂಯುಕ್ತ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಕೈಯಲ್ಲಿ ಮಾತನಾಡಿದರು. ಅದು ಸಮೀರಾಚಾರ್ಯ ಅವರ ಜೊತೆಗೆ.!
'ಬಿಗ್ ಬಾಸ್' ಮನೆಯೊಳಗೆ ಚಟುವಟಿಕೆ ಚಾಲ್ತಿಯಲ್ಲಿದ್ದ ಸಮಯದಲ್ಲಿ ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಕೂತಿದ್ದರು. ತಮ್ಮನ್ನ ಬಿಡಿಸಲು ಚಂದನ್ ಶೆಟ್ಟಿ ಕೇಳಿಕೊಂಡಾಗ ಜೆಕೆ ಹಾಗೂ ಸಮೀರಾಚಾರ್ಯ ಓಡಿ ಬಂದರು. ಇದೇ ವೇಳೆ ಚಂದನ್ ಬಳಿ ಇದ್ದ ಕತ್ತರಿ ತೆಗೆದುಕೊಳ್ಳಲು ಶ್ರುತಿಗೆ ಸಂಯುಕ್ತ ಹೇಳಿದರು. ಮೂವರು ಸಂಯುಕ್ತ ಸುತ್ತ ಸುತ್ತುವರಿದಾಗ ಯಾರು ಯಾರನ್ನ ಮುಟ್ಟಿದರೋ ಗೊತ್ತಿಲ್ಲ. ಒಟ್ನಲ್ಲಿ, ''ಸಮೀರಾಚಾರ್ಯ ನನ್ನನ್ನ ಮುಟ್ಟಿದರು'' ಎಂದು ಏಕ್ದಂ ಅವರ ಮೇಲೆ ಕೈ ಮಾಡಿದರು ಸಂಯುಕ್ತ ಹೆಗ್ಡೆ.

ದೈಹಿಕ ಹಲ್ಲೆ ನಡೆಸಿ ಮನೆಯ ಮೂಲ ನಿಯಮ ಮುರಿದ ಕಾರಣ ಸಂಯುಕ್ತ ರನ್ನ 'ಬಿಗ್ ಬಾಸ್' ಹೊರ ಹಾಕಿದರು.
ಸಂಯುಕ್ತ ರವರ ಈ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಮೀರಾಚಾರ್ಯ ಪತ್ನಿ ಶ್ರಾವಣಿ ಕೂಡ ಸಂಯುಕ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ' ವರದಿ ಪ್ರಕಟ ಮಾಡಿತ್ತು.
'ಫಿಲ್ಮಿಬೀಟ್ ಕನ್ನಡ' ವರದಿ ಕುರಿತಾದ ಟ್ವೀಟ್ ನ ರೀ-ಟ್ವೀಟ್ ಮಾಡುವ ಮೂಲಕ ಈ ಇಡೀ ಘಟನೆ ಬಗ್ಗೆ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
''ಸಮೀರಾಚಾರ್ಯ ಮೇಲೆ ಕೈ ಮಾಡಿದ ಸಂಯುಕ್ತ ಕ್ಷಮೆಗೆ ಅನರ್ಹ. ಸ್ತ್ರೀ ಕುಲಕ್ಕೆ ಈಕೆ ಕಳಂಕ. ಬೆಳೆದ ವಾತಾವರಣ ಸರಿಯಿಲ್ಲ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಬರೀ ಜಗ್ಗೇಶ್ ಮಾತ್ರ ಅಲ್ಲ, 'ಬಿಗ್ ಬಾಸ್ ಕನ್ನಡ'ದ ಮಾಜಿ ಸ್ಪರ್ಧಿಗಳು ಕೂಡ ಸಂಯುಕ್ತ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











