ಜಗನ್ ಘರ್ಜನೆಗೆ 'ಮಾಸ್ಟರ್' ಅಕುಲ್ ಕೂಡ ಹೊರತಾಗಲಿಲ್ಲ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ ಐವತ್ತು ದಿನಗಳು ಕಳೆದು ಹೋಗಿವೆ. ಈ ಐವತ್ತು ದಿನಗಳಲ್ಲಿ ಜಗನ್ ಎಷ್ಟು ಬಾರಿ ಜಗಳ ಮಾಡಿದ್ದಾರೋ, ಅದೆಷ್ಟು ಬಾರಿ ಕಣ್ಣು ಕೆಂಪಗೆ ಮಾಡಿದ್ದಾರೋ, ಯಾರ್ಯಾರ ಜೊತೆ ವಾಗ್ವಾದ ನಡೆಸಿದ್ದಾರೋ... ಲೆಕ್ಕವೇ ಇಲ್ಲ ಬಿಡಿ.!
ಮೂಗಿನ ತುದಿಯಲ್ಲೇ ಕೋಪ ಹೊಂದಿರುವ ಜಗನ್ ಘರ್ಜನೆಗೆ ಅಕುಲ್ ಬಾಲಾಜಿ ಕೂಡ ಹೊರತಾಗಲಿಲ್ಲ.!
'ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಯಾಗಿ ಬಂದಿರುವ ಅಕುಲ್ ಬಾಲಾಜಿ, 'ಗಂಧದ ಗುಡಿ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ನಾಡಿನಿಂದ ಕಾಡಿಗೆ ಬಂದ ಮಾಸ್ಟರ್ ಆಗಿದ್ದಾರೆ. ಮಾಸ್ಟರ್ ಅಕುಲ್ ವಿರುದ್ಧವೇ ಹುಲಿರಾಯ ಜಗನ್ ಘರ್ಜಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?
'ಬಿಗ್ ಬಾಸ್' ನೀಡಿದ್ದ 'ಗಂಧದ ಗುಡಿ' ಟಾಸ್ಕ್ ನಲ್ಲಿ ಸಮೀರಾಚಾರ್ಯ (ಕರಡಿ), ಜಗನ್ (ಹುಲಿ), ದಿವಾಕರ್ (ಕೋತಿ), ನಿವೇದಿತಾ (ಮರಿ ಆನೆ), ಆಶಿತಾ (ಗಿಳಿ) ಹಾಗೂ ಅನುಪಮಾ (ಕೋತಿ) ಕಾಡು ಪ್ರಾಣಿಗಳಾದರೆ... ಕಾರ್ತಿಕ್, ಚಂದನ್ ಶೆಟ್ಟಿ, ರಿಯಾಝ್, ವೈಷ್ಣವಿ, ಶ್ರುತಿ, ಕೃಷಿ ಹಾಗೂ ಜಯಶ್ರೀನಿವಾಸನ್ ಕಾಡು ಜನರಾದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಬಂದ ಅಕುಲ್ ಬಾಲಾಜಿ ''ನಾಡಿನಿಂದ ಕಾಡಿಗೆ ಬಂದ'' ಮಾಸ್ಟರ್ ಪಾತ್ರವನ್ನ ವಹಿಸಿಕೊಂಡರು.

ಮಾಸ್ಟರ್ ಅಕುಲ್ ಗೆ ಸವಾಲು
ಗಂಧದ ಗುಡಿಗೆ ಒಳ್ಳೆಯ ಉದ್ದೇಶ ಇಟ್ಟುಕೊಂಡು ಬಂದ ಮಾಸ್ಟರ್ ಗೆ ಬಿಗ್ ಬಾಸ್ ಮೊದಲ ಹಂತದ ಸವಾಲು ನೀಡಿದರು. ಮಾಸ್ಟರ್, ಕಾಡು ಜನರ ಸಹಾಯದಿಂದ ಗಂಧದ ಗುಡಿಯಲ್ಲಿ ವಾಸ ಇರುವ ಆರು ಪ್ರಾಣಿಗಳಲ್ಲಿ ನಾಲ್ಕು ಪ್ರಾಣಿಗಳನ್ನ ಉಪಾಯದಿಂದ ಸೆರೆ ಹಿಡಿದು, ಅವುಗಳನ್ನು ಪ್ರತ್ಯೇಕವಾಗಿ ನಾಲ್ಕು ಪಂಜರಗಳಲ್ಲಿ ಬಂಧಿಸಬೇಕಿತ್ತು. ನಾಲ್ಕು ಪ್ರಾಣಿಗಳನ್ನು ಸೆರೆ ಹಿಡಿಯಲು ರಾತ್ರಿ ತನಕ ಅವಕಾಶ ಇತ್ತು.

ಮಾಸ್ಟರ್ ಮಾಡಿದ ಉಪಾಯ ಏನು.?
ಪ್ರಾಣಿಗಳಿಗೆ ಆಹಾರ ಹಾಗೂ ನೀರು ಬೇಕು ಅಂದ್ರೆ ಬಂಧಿಯಾಗಬೇಕು ಎಂಬ ಉಪಾಯವನ್ನ ಮಾಸ್ಟರ್ ಅಕುಲ್ ಮಾಡಿದರು. ''ನೀರು ಕೊಡಿ'' ಅಂತ ಸಮೀರಾಚಾರ್ಯ (ಕರಡಿ) ಕೇಳಿದಾಗಲೂ, ಬಂಧಿಯಾಗುವಂತೆ ಅಕುಲ್ ಕೇಳಿಕೊಂಡರು. ಆದ್ರೆ, ಅದಕ್ಕೆ ಸಮೀರಾಚಾರ್ಯ ಸಮ್ಮತಿ ನೀಡಲಿಲ್ಲ.

ಬಲೆ ಬೀಸಿದ ಅಕುಲ್
ಇತ್ತ ಹುಲಿಗೆ ಮಾಸ್ಟರ್ ಅಕುಲ್ ಹಾಗೂ ಕಾಡು ಮಂದಿ ಬಲೆ ಬೀಸಿದರು. ಹುಲಿಯನ್ನ (ಜಗನ್) ಹಿಡಿದು ಕರೆತರುವಾಗ, ಗಾಜಿನ ಬಾಗಲನ್ನು ಜಗನ್ ಹಿಡಿದು ಜಗ್ಗಿದರು. ಹೀಗಾಗಿ ಹುಲಿಯನ್ನ ಹಿಡಿಯುವಲ್ಲಿ ಕಾಡು ಮಂದಿ ಯಶಸ್ವಿ ಆಗಲಿಲ್ಲ.

'ಬಿಗ್ ಬಾಸ್' ಕೊಟ್ರು ಖಡಕ್ ಆದೇಶ
''ಪ್ರಾಣಿಗಳಾಗಲಿ, ಕಾಡು ಜನರಾಗಲಿ... ಯಾವುದೇ ಕಾರಣಕ್ಕೂ ಮನೆಯ ಗಾಜಿನ ಮುಖ್ಯ ದ್ವಾರವನ್ನು ದುರ್ಬಳಕೆ ಮಾಡುವಂತಿಲ್ಲ. ಈ ನಿಯಮದ ಉಲ್ಲಂಘನೆ ಆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ'' ಎಂದು 'ಬಿಗ್ ಬಾಸ್' ಆದೇಶಿಸಿದರು. ಅದಕ್ಕೆ ''ಥ್ಯಾಂಕ್ಯು'' ಎಂದು ಅಕುಲ್ ಹೇಳಿದಾಗ, ಅನುಪಮಾ (ಕೋತಿ) ''ಅಲ್ಲಿ ಪ್ರಾಣಿಗಳು ಮಾತ್ರ ಕಿತ್ತಾಡಿಲ್ಲ. ಮನುಷ್ಯ ಪ್ರಾಣಿಗಳೂ ಹಾಗೆ ಮಾಡಿದ್ದಾರೆ. ಅವರೂ ಅರ್ಥ ಮಾಡಿಕೊಳ್ಳಬೇಕು'' ಎಂದು ಜಗನ್ ರನ್ನ ಸಮರ್ಥಿಸಿಕೊಂಡರು.

ಪಂಜರ ಬೀಗ ಕದ್ದಿದ್ದ ಪ್ರಾಣಿಗಳು
ಇತ್ತ ಪ್ರಾಣಿಗಳು ಪಂಜರದ ಕೀಗಳನ್ನು ಕದ್ದಿದ್ದವು. ಕೀ ಕೊಡುವಂತೆ ಮಾಸ್ಟರ್ ಅಕುಲ್ ಕೇಳಿಕೊಂಡಾಗ, ''ನೀರು-ಊಟ ಕೊಡಿ ಇಲ್ಲ ಅಂದ್ರೆ ಏನನ್ನೂ ಕೊಡುವುದಿಲ್ಲ. ಇಡೀ ರಾತ್ರಿ ಹೀಗೆ ನಡೆಯಲಿ..'' ಎಂದು ಹುಲಿಯ ಮುಖವಾಡವನ್ನ ಕಿತ್ತು ಬಿಸಾಕಿ ಜಗನ್ ಪಾತ್ರದಿಂದ ಹೊರ ಬಂದರು.

ಅಕುಲ್ ಕೆನ್ನೆಗೆ ಪೆಟ್ಟು
ಪ್ರಾಣಿಗಳನ್ನು ಹಿಡಿಯುವ ಸಂದರ್ಭದಲ್ಲಿ ಹುಲಿಯನ್ನ (ಜಗನ್) ಅಕುಲ್ ಹಿಡಿದುಕೊಂಡರು. ಬಿಡಿಸಿಕೊಳ್ಳುವ ಭರದಲ್ಲಿ ಅಕುಲ್ ಕೆನ್ನೆಗೆ ಪೆಟ್ಟಾಯ್ತು. ಅದು ಜಗನ್ ಕಡೆಯಿಂದ. ಆಗ ಕೋಪಗೊಂಡ ಅಕುಲ್, ''ದೈಹಿಕವಾಗಿ ಹಲ್ಲೆ ಮಾಡುವುದು ನಿನಗೆ ಮಾತ್ರ ಅಲ್ಲ ನನಗೂ ಬರುತ್ತೆ'' ಎಂದರು.

ಜಗನ್ ಇನ್ನೂ 'ಮಗು'.!
ಅಕುಲ್ - ''ದೈಹಿಕವಾಗಿ ಹಲ್ಲೆ ಮಾಡುವುದು ನಿನಗೆ ಮಾತ್ರ ಅಲ್ಲ ನನಗೂ ಬರುತ್ತೆ''
ಜಗನ್ - ''ನಾನಿನ್ನೂ ದೈಹಿಕವಾಗಿ ಹಲ್ಲೆ ಮಾಡೇ ಇಲ್ಲ''
ಅಕುಲ್ - ''ನನಗೆ ಹೊಡೆದೆ''
ಜಗನ್ - ''ನೀನೇ ಎಳೆದುಕೊಂಡಿದ್ದು. ನಾನು ಫಿಸಿಕಲ್ ಆದರೆ ಏನನ್ನೂ ನೋಡಲ್ಲ''
ಅಕುಲ್ - ''ಏನಪ್ಪಾ.. ಈ ಮಗು ಇಷ್ಟೊಂದು ನೋಡ್ಬಿಟ್ಟಿದೆ.
ಜಗನ್ - ''ಮಗು.? ಮಗು ಯಾವಾಗ್ಲೋ ದೊಡ್ಡದು ಆಯ್ತು.
ಅಕುಲ್ - ''ಇನ್ನೂ ಮಗು ತರಹ ಇದೆ ಇದು.!''
ಜಗನ್ - ''ಪ್ರೀತಿಯಿಂದ ಮಾತನಾಡಿದರೆ ಖಂಡಿತ ಮಗು''
ಅಕುಲ್ - ''ನಾನೂ ಅಷ್ಟೇ''

ಜಗನ್ ಗೆ ಅಕುಲ್ ಟಾಂಗ್..?
ಆಟವನ್ನ ಆಟದ ರೀತಿ ಆಡದೆ, ಎಲ್ಲರ ಮೇಲೆ ಉಗ್ರ ಪ್ರತಾಪ ತೋರುವ.... ಕಿರುತೆರೆ ಲೋಕದಲ್ಲಿ ಇನ್ನೂ ಅಂಬೆಗಾಲು ಇಡುತ್ತಿರುವ ಜಗನ್ ಗೆ ಮಗು ಎಂದು ಕರೆದು ಅಕುಲ್ ಟಾಂಗ್ ಕೊಟ್ಟಿರುವ ಹಾಗಿದೆ.


Click it and Unblock the Notifications