ಕ್ರೂರತನ ಮೆರೆದ ಆಂಡಿಗೆ ಚಡಿಯೇಟು ಕೊಟ್ಟ ಕಿಚ್ಚ ಸುದೀಪ್.!
Recommended Video

'ಬಿಗ್ ಬಾಸ್' ಒಂದು ಟ್ಯಾಲೆಂಟ್ ಶೋ ಅಲ್ಲ. ಭಿನ್ನ-ವಿಭಿನ್ನ ಸನ್ನಿವೇಶಗಳಲ್ಲಿ ಯಾರ್ಯಾರು ಹೇಗ್ಹೇಗೆ ವರ್ತಿಸುತ್ತಾರೆ ಎಂಬುದನ್ನು ತೋರಿಸುವುದೇ 'ಬಿಗ್ ಬಾಸ್' ಶೋ ಉದ್ದೇಶ. ಇದೊಂಥರಾ ಮನುಷ್ಯನ ವರ್ತನೆಯ ಅಧ್ಯಯನ ಕುರಿತಾದ ಶೋ.
ಚಟುವಟಿಕೆಗಳಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಅನ್ನೋದಕ್ಕಿಂತ ಯಾರ ವ್ಯಕ್ತಿತ್ವ ಹೇಗೆ ಎಂಬುದರ ಮೇಲೆ ವೀಕ್ಷಕರು ಕಣ್ಣಿಟ್ಟಿರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ಮುಕ್ತಾಯಗೊಂಡ 'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಚಟುವಟಿಕೆಯನ್ನೇ ತೆಗೆದುಕೊಳ್ಳಿ...
ಇದರಲ್ಲಿ ಸೋಲು-ಗೆಲುವು ಮುಖ್ಯ ಆಗಲಿಲ್ಲ. ವಿಲನ್ ಗಳಾಗಿ ಸ್ಪರ್ಧಿಗಳು ನಡೆದುಕೊಂಡ ರೀತಿ ಬಗ್ಗೆ ವೀಕ್ಷಕರು ಟೀಕೆ ಮಾಡಿದ್ದರು. ಅದರಲ್ಲೂ, ಹೀರೋ ಪಾತ್ರಧಾರಿಗಳ ಕಣ್ಣಿಗೆ ವಿಲನ್ ಪಾತ್ರಧಾರಿ ಆಂಡ್ರ್ಯೂ ಪದೇ ಪದೇ ಸ್ಪ್ರೇ ಹೊಡೆದಿದ್ದು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿತ್ತು.
ವಿಲನ್ ಆಗಿ ಆಂಡಿ ನಡೆದುಕೊಂಡ ರೀತಿ ಬಗ್ಗೆ ಕಿಚ್ಚ ಸುದೀಪ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಇಂಥ ಎಡವಟ್ಟು ಮಾಡುತ್ತಲೇ ಇರುವ ಆಂಡಿಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಮಾತಲ್ಲೇ ಚಡಿಯೇಟು ಕೊಟ್ಟರು. ಮುಂದೆ ಓದಿರಿ...

ಗರಂ ಆಗಿದ್ದ ಕಿಚ್ಚ ಸುದೀಪ್
'ಸೂಪರ್ ವಿಲನ್ಸ್ ವರ್ಸಸ್ ಸೂಪರ್ ಹೀರೋಸ್' ಟಾಸ್ಕ್ ನಲ್ಲಿ ಆಂಡಿ ನಡೆದುಕೊಂಡ ರೀತಿ ಬಗ್ಗೆ ಕೊಂಚ ಗರಂ ಆಗಿದ್ದ ಸುದೀಪ್, ''ಮಿಸ್ಟರ್ ಆಂಡಿ... ಬೇರೆಯವರ ಕಣ್ಣು ಬಾಯಿಗೆ ಪರ್ಫ್ಯೂಮ್ ಹಾಕಿದ್ದು ಓಕೆನಾ.?'' ಎಂದು ಪ್ರಶ್ನಿಸಿದರು. ಅದಕ್ಕೆ, ''ಟಾಸ್ಕ್ ಮಾಡುವ ಜೋಶ್ ನಲ್ಲಿ ಪರ್ಫ್ಯೂಮ್ ಹಾಕಲು ಶುರು ಮಾಡಿದೆ. ಅಲ್ಲಿಂದ ಅದು ಬೆಳೆಯಿತು'' ಅಂತ ಆಂಡಿ ಸಮಜಾಯಿಷಿ ನೀಡಲು ಮುಂದಾದರು.

ಕ್ಷಮೆ ಕೇಳಿದ ಆಂಡಿ
''ಪರ್ಫ್ಯೂಮ್ ಬಾಟಲ್ ಮೇಲೆ ಸೂಚನೆ ಕೊಡಲಾಗಿದೆ. ಹದಿನೈದು ಸೆಂಟಿಮೀಟರ್ ದೂರದಿಂದ ಪರ್ಫ್ಯೂಮ್ ಸ್ಪ್ರೇ ಮಾಡಿಕೊಳ್ಳಿ.. ಕಣ್ಣು-ಮೂಗಿಗೆ ಸ್ಪ್ರೇ ಮಾಡಬೇಡಿ ಅಂತ ಪರ್ಫ್ಯೂಮ್ ಬಾಟಲ್ ಮೇಲೆ ಬರೆದಿದೆ. ಬಿಗ್ ಬಾಸ್ ಮನೆ ಆಕ್ಸಿಡೆಂಟಲ್ ಝೋನ್ ಆಗಬಹುದಿತ್ತು. ಯಾಕಂದ್ರೆ, ನೀವು ಇಡೀ ದಿನ ಪರ್ಫ್ಯೂಮ್ ಹೊಡೆಯುತ್ತಲೇ ಇದ್ರಿ. ಜೀವ ಹೋಗಬಹುದಿತ್ತು, ಕೆಲವರಿಗೆ ಅಲರ್ಜಿ ಆಗಬಹುದಿತ್ತು. ಅದು ಡೇಂಜರಸ್, ಫನ್ನಿ ಆಗಿರಲಿಲ್ಲ'' ಎಂದು ಸುದೀಪ್ ಹೇಳಿದಾಗ, ಆಂಡಿ ಕ್ಷಮೆ ಕೇಳಿದರು.

ಕ್ಷಮೆ ಕೇಳಿದರೆ ಸರಿ ಹೋಗುತ್ತಾ.?
''ಅತಿಯಾದರೆ ಅಮೃತವೂ ವಿಷ ಅಂತ ಇದೇ ಸೀಸನ್ ನಲ್ಲಿ ಮನೆಯಲ್ಲಿ ಕೂತಿರುವ ದೊಡ್ಡ ವ್ಯಕ್ತಿ ಹೇಳುತ್ತಾರೆ. ಆ ದೊಡ್ಡ ವ್ಯಕ್ತಿ ನೀವೇ. ದೊಡ್ಡ ವ್ಯಕ್ತಿ ಹೇಳಿದ ಮಾತನ್ನ, ಅದೇ ದೊಡ್ಡ ವ್ಯಕ್ತಿ ಮುರಿದು, ಪದೇ ಪದೇ ಕ್ಷಮೆ ಕೇಳುತ್ತಿದ್ದರೆ... ಅಷ್ಟು ಜನರಲ್ಲಿ ಯಾರಿಗೋ ಒಬ್ಬರಿಗೆ ಕಣ್ಣು ಹೋಗಿದಿದ್ದರೆ, ಜೀವಕ್ಕೆ ತೊಂದರೆ ಆಗಿದ್ದರೆ, ಹೆಚ್ಚು ಕಮ್ಮಿ ಆಗಿದ್ದರೆ.. ಏನಾಗಬೇಕಿತ್ತು.? ಕ್ಷಮೆ ಕೇಳಿದರೆ ಸರಿ ಹೋಗುತ್ತಾ.?'' ಎಂದು ಸುದೀಪ್ ಖಾರವಾಗಿ ಪ್ರಶ್ನಿಸಿದರು.

ದಡ್ಡತನದಿಂದ ಆದ ಕೆಲಸ ಅದು
''ಅರ್ಥ ಆಯಿತು ಸರ್. ಇನ್ಮೇಲೆ ಯಾವತ್ತೂ ಹೀಗೆ ಮಾಡಲ್ಲ. ನನ್ನ ದಡ್ಡತನ. ದಯವಿಟ್ಟು ಕ್ಷಮಿಸಿ'' ಎಂದಷ್ಟೇ ಆಂಡಿ ಹೇಳಿದರು.

ಪರಿಜ್ಞಾನ ಇಲ್ಲದಿರುವುದು ಮೂರ್ಖತನ
''ಟಾಸ್ಕ್ ನಲ್ಲಿ ಹೊರಗೆ ಬರುವುದು ವ್ಯಕ್ತಿತ್ವ. ದಡ್ಡತನದಿಂದ ಆಯಿತು ಅಂತಲ್ಲ. ಪರಿಜ್ಞಾನ ಇಲ್ಲದಿರುವುದು ಮೂರ್ಖತನ. ಕಿರಿಕಿರಿ ಮಾಡಬಹುದು ಅಂತ ಆಟದ ನಿಯಮದಲ್ಲಿ ಇತ್ತು. ಆದ್ರೆ, ಗಾಯದ ಮೇಲೆ ಸ್ಪ್ರೇ ಮಾಡ್ತೀರಾ. ಇದು ಅತಿ ಆಯಿತು ಅಂತ ಎಲ್ಲೂ ನಿಲ್ಲಿಸಲೇ ಇಲ್ಲ'' - ಸುದೀಪ್

ಮತ್ತೆ ಪ್ರಾಮಿಸ್ ಮಾಡಿದ ಆಂಡಿ
''ಖಂಡಿತ ನನ್ನಿಂದ ತಪ್ಪಾಗಿದೆ. ಕ್ಷಮೆ ಕೇಳಲು ನನಗೆ ಹಕ್ಕು ಇಲ್ಲ ಅನ್ಸುತ್ತೆ. ಇನ್ಮೇಲೆ ಹೀಗೆ ಮಾಡಲ್ಲ ಅಂತ ಪ್ರಾಮಿಸ್ ಮಾಡಿದ್ದೇನೆ. ಪರ್ಸನಲ್ ಆಗಿ ಬೈಗುಳ ಜಾಸ್ತಿ ಆಯ್ತು. ಹೀಗಾಗಿ ನಾನು ನಿಲ್ಲಿಸಲಿಲ್ಲ. ನನ್ನನ್ನ ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ತಪ್ಪಾಗಿದೆ. ಕ್ಷಮಿಸಿ'' - ಆಂಡಿ

ಪಶ್ಚಾತ್ತಾಪ ಆಗಿಲ್ಲ.!
''ನೀವು ಕ್ಷಮೆ ಕೇಳಿದ್ದು ಕ್ಯಾಪ್ಟನ್ ಆದ್ಮೇಲೆ. ಹೀಗಾಗಿ ನೀವು ಕ್ಷಮೆ ಕೇಳಿದ್ದು ನಿಮಗೆ ತೊಂದರೆ ಆಗಬಾರದು ಅಂತ ಹೊರತು ಬೇರೆ ಯಾವುದಕ್ಕೂ ಅಲ್ಲ. ಪಶ್ಚಾತ್ತಾಪ ಆಯಿತು ಅಂತ ಯಾರಿಗೂ ಅನ್ನಿಸಲೇ ಇಲ್ಲ'' ಎಂದು ಬೇಸರದಿಂದ ಸುದೀಪ್ ನುಡಿದರು.


Click it and Unblock the Notifications











