ದೀಪಿಕಾ ದಾಸ್ ಶ್ರಮಕ್ಕೆ 'ವೆಲ್ ಡನ್' ಎಂದ ಕಿಚ್ಚ ಸುದೀಪ್
ನೋಡನೋಡುತ್ತಿದ್ದಂತೆಯೇ, 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ನಾಲ್ಕು ವಾರಗಳು ಉರುಳಿವೆ. ಈ ನಾಲ್ಕು ವಾರಗಳಲ್ಲಿ ಕ್ಯಾಮರಾಗಳ ಫೋಕಸ್ ದೀಪಿಕಾ ದಾಸ್ ಮೇಲೆ ಹೆಚ್ಚು ಇದ್ದದ್ದು ಇದೇ ವಾರ. ಯಾಕಂದ್ರೆ, 'ಸಪ್ತಾಶ್ವ' ತಂಡಕ್ಕೆ ದೀಪಿಕಾ ದಾಸ್ ನಾಯಕಿ ಆಗಿದ್ದರು.
ದೀಪಿಕಾ ದಾಸ್ ಅಂದ್ರೆ ಬರೀ ಗ್ಲಾಮರ್ ಗೊಂಬೆ. ಮೂರು ಹೊತ್ತು ಸ್ಟೈಲ್ ಮಾಡಿಕೊಂಡು, ಮೇಕಪ್ ಹಾಕಿಕೊಂಡು ಇರುತ್ತಾರೆ. 'ಬಿಗ್ ಬಾಸ್' ಮನೆಯಲ್ಲಿ ಈಕೆ ಏನನ್ನೂ ಮಾಡುತ್ತಿಲ್ಲ. ಯಾರೊಂದಿಗೂ ಸರಿಯಾಗಿ ಮಾತನಾಡಲ್ಲ. 'ಬಿಗ್ ಬಾಸ್' ಕೊಡುವ ಚಟುವಟಿಕೆಗಳಲ್ಲೂ ಅಷ್ಟಾಗಿ ಭಾಗವಹಿಸಲ್ಲ ಎಂಬ ಕಂಪ್ಲೇಂಟ್ಸ್ ಇತ್ತು.
ಆ ಎಲ್ಲಾ ದೂರುಗಳಿಗೂ ಈ ವಾರ ದೀಪಿಕಾ ದಾಸ್ ದಿಟ್ಟ ಉತ್ತರ ನೀಡಿದ್ದರು. 'ಸಪ್ತಾಶ್ವ' ತಂಡದ ಕ್ಯಾಪ್ಟನ್ ಆಗಿ 'ಮಾಡು ಇಲ್ಲವೇ ಬಿಡು' ಟಾಸ್ಕ್ ನಲ್ಲಿ ಗಂಟೆಗಳ ಕಾಲ ಒಂಟಿ ಕಾಲಲ್ಲಿ ನಿಂತು ಭೂಮಿ ಶೆಟ್ಟಿಗೆ ದೀಪಿಕಾ ದಾಸ್ ಪೈಪೋಟಿ ನೀಡಿದ್ದರು.

ಕೊನೆಯಲ್ಲಿ ಭೂಮಿ ಶೆಟ್ಟಿ ಗೆದ್ದರೂ, ದೀಪಿಕಾ ದಾಸ್ ಕೊಟ್ಟ ಫೈಟ್ ಮಾತ್ರ ಬೊಂಬಾಟ್. ಹೀಗಾಗಿ, ಈ ವಾರದ 'ಕಿಚ್ಚನ ಮೆಚ್ಚುಗೆಯ ಚಪ್ಪಾಳೆ' ದೀಪಿಕಾ ದಾಸ್ ಪಾಲಾಗಿದೆ.
''ಒಂದು ತಂಡದ ಕ್ಯಾಪ್ಟನ್ ಆಗಿ, ಆ ತಂಡವನ್ನು ಅದ್ಭುತವಾಗಿ ಮುನ್ನಡೆಸಿದವರು ದೀಪಿಕಾ ದಾಸ್. ಒಂದು ಹಂತದಲ್ಲಿ ಸಪ್ತಾಶ್ವ ತಂಡದ ಸ್ಕೋರ್ ಲೈನ್ ತುಂಬಾ ಹಿಂದೆ ಇತ್ತು. ಆದರೆ ಕೊನೆಯವರೆಗೂ ಹೋರಾಟ ನಡೆಸಿದರು. ಯಾರು ಗೆದ್ದರು, ಯಾರು ಸೋತರು ಅನ್ನೋದು ಮುಖ್ಯ ಅಲ್ಲ. ವೆರಿ ವೆಲ್ ಡನ್ ದೀಪಿಕಾ..'' ಎನ್ನುತ್ತ ಕಿಚ್ಚ ಸುದೀಪ್, ದೀಪಿಕಾಗೆ ಚಪ್ಪಾಳೆ ತಟ್ಟಿದರು. ಜೊತೆಗೆ ''ಎಲ್ಲದಕ್ಕಿಂತ ಹೆಚ್ಚಾಗಿ ಈ ವಾರ ಮನೆಯಲ್ಲಿ ದೀಪಿಕಾ ಹೆಚ್ಚಾಗಿ ಕಾಣಿಸಿಕೊಂಡರು. ಒಳ್ಳೆಯ ಸ್ಪಿರಿಟ್ ನಿಂದ ಆಟ ಆಡಿದರು. ಇದು ಹೀಗೆ ಮುಂದುವರೆಯಲಿ..'' ಎಂದು ಸುದೀಪ್ ಹೇಳಿದರು.
ಆರೋಗ್ಯ ಸರಿ ಇಲ್ಲದೇ ಇದ್ದರೂ, ಪರ್ಫಾಮ್ ಮಾಡಿದ ಭೂಮಿ ಶೆಟ್ಟಿಗೂ ಸುದೀಪ್ ಭೇಷ್ ಎಂದರು. ಚಪ್ಪಾಳೆ ಮಾತ್ರ ದೀಪಿಕಾಗೆ ಹೋಗಿರಬಹುದು, ಆದರೆ ಪ್ರತಿಯೊಬ್ಬರೂ ಶ್ರಮ ಪಟ್ಟಿರುವುದಕ್ಕೆ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸಂತಸ ವ್ಯಕ್ತಪಡಿಸಿದರು.


Click it and Unblock the Notifications











