ಬಿಗ್ಬಾಸ್: ಈ ವಾರ ಚೆನ್ನಾಗಿ ಆಡಿದ, ಕೆಟ್ಟದಾಗಿ ಆಡಿದ ಸ್ಪರ್ಧಿಗಳು ಯಾರು?
ಬಿಗ್ಬಾಸ್ ಮನೆಯಲ್ಲಿ ಐದನೇ ದಿನ ಕೆಲವು ಕುತೂಹಲಕಾರಿ ಘಟನೆಗಳು ನಡೆದವು. ನಿರ್ಮಲಾ ಅವರ ವರ್ತನೆಯಲ್ಲಿ ಭಾರಿ ಬದಲಾವಣೆ ಆಗಿದ್ದು ಪ್ರಮುಖ ವಿಷಯವಾದರೆ. ಸ್ಪರ್ಧಿ ಧನುಶ್ರಿ ಬಿಗ್ಬಾಸ್ ಮನೆಯ ಜೈಲಿಗೆ ಹೋಗುವ ಮೊದಲ ಸ್ಪರ್ಧಿ ಎನಿಸಿಕೊಂಡರು.
ಈ ವಾರ ಕೊಡಲಾದ ಟಾಸ್ಕ್ಗಳಲ್ಲಿ ಅತ್ಯಂತ ಕೆಟ್ಟದಾಗಿ ಆಡಿದ ಒಬ್ಬ ವ್ಯಕ್ತಿಯನ್ನು ಹಾಗೂ ಬಹಳ ಚೆನ್ನಾಗಿ ಆಡಿದ ವ್ಯಕ್ತಿಯನ್ನು ಮನೆಯ ಸದಸ್ಯರೆಲ್ಲರೂ ಸೇರಿ ತೀರ್ಮಾನಿಸುವಂತೆ ಬಿಗ್ಬಾಸ್ ಹೇಳಿದರು.
ಎಲ್ಲರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಧನುಶ್ರಿ ಈ ವಾರ ಚೆನ್ನಾಗಿ ಪ್ರದರ್ಶನ ಮಾಡಲಿಲ್ಲ ಎಂದು ಹೇಳಿದರು. ಹಾಗಾಗಿ ಬಿಗ್ಬಾಸ್, ಧನುಶ್ರಿ ಅವರು ಮುಂದಿನ ಆದೇಶದ ವರೆಗೂ ಬಿಗ್ಬಾಸ್ ಮನೆಯ ಜೈಲಿನಲ್ಲಿ ಇರಬೇಕು ಎಂದು ಹೇಳಿದರು.

ಅಷ್ಟೇ ಅಲ್ಲದೆ, ಧನುಶ್ರಿ ಮನೆಯ ಇತರ ಸದಸ್ಯರು ಬಳಸುವ ಯಾವುದೇ ಸೌಲಭ್ಯವನ್ನು ಬಳಸುವಂತಿಲ್ಲ. ಊಟಕ್ಕೆ ಕೇವಲ ರಾಗಿಗಂಜಿ ಮಾತ್ರವೇ ಸೇವಿಸಬೇಕು ಹಾಗೂ ಮನೆಯ ಸದಸ್ಯರ ಅಡಿಗೆಗೆ ಬೇಕಾದ ಎಲ್ಲ ತರಕಾರಿಗಳನ್ನು ಧನುಶ್ರೀ ಅವರೇ ಕತ್ತರಿಸಿ ಕೊಡಬೇಕು ಎಂದು ಹೇಳಿದರು.
ನಂತರ ಟಾಸ್ಕ್ಗಳಲ್ಲಿ ಚೆನ್ನಾಗಿ ಆಡಿದ ಸ್ಪರ್ಧಿ ಯಾರೆಂದು ಆಯ್ಕೆ ಮಾಡುವಂತೆ ಬಿಗ್ಬಾಸ್ ಹೇಳಿದರು. ಪ್ರಶಾಂತ್ ಸಂಬರ್ಗಿ ಅವರನ್ನು ಈ ವಾರ ಚೆನ್ನಾಗಿ ಟಾಸ್ಕ್ಗಳಲ್ಲಿ ಆಡಿದ ವ್ಯಕ್ತಿ ಎಂದು ಬಿಗ್ಬಾಸ್ ಮನೆಯ ಸದಸ್ಯರು ಘೋಷಿಸಿದರು. ಅವರಿಗೆ ಬಿಗ್ಬಾಸ್ ಅಭಿನಂದನೆ ಸಲ್ಲಿಸಿದರು.
ಶನಿವಾರ ಮತ್ತು ಭಾನುವಾರ ವೀಕೆಂಡ್ ಎಪಿಸೋಡ್ಗಳಿದ್ದು, ಈ ಸೀಸನ್ನಲ್ಲಿ ಮೊದಲ ವೀಕೆಂಡ್ ಶೋ ನಡೆಸಿಕೊಡಲು ಸುದೀಪ್ ಅವರು ಬರಲಿದ್ದಾರೆ. ಈ ವಾರ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.


Click it and Unblock the Notifications











