ಬಿಗ್ಬಾಸ್: ಸುದೀಪ್ ಕೇಳಿದ ಪ್ರಶ್ನೆಯಿಂದ ಕಣ್ಣೀರು ಹಾಕಿದ ರಘು ಗೌಡ
ಬಿಗ್ಬಾಸ್ ಸೀಸನ್ 8 ರ ಮೊದಲ ವೀಕೆಂಡ್ ಎಪಿಸೋಡ್ ಅನ್ನು ಸುದೀಪ್ ಅವರು ನಡೆಸಿಕೊಟ್ಟರು. ಈ ಸೀಸನ್ನ ಮೊದಲ ಪಂಚಾಯಿತಿಯಲ್ಲಿ ಸುದೀಪ್ ಅವರು ಸ್ಪರ್ಧಿಗಳ ಕಷ್ಟ-ಸುಖ ಕೇಳಿದರು. ತಪ್ಪು-ಒಪ್ಪು ಅರ್ಥ ಮಾಡಿಸಿದರು. ನಕ್ಕರು-ನಗಿಸಿದರು.
ಆರಂಭದಲ್ಲಿಯೇ ಎಲ್ಲರಿಗೂ ಒಂದು ವಾರದ ಬಿಗ್ಬಾಸ್ ಮನೆಯಲ್ಲಿದ್ದ ಅನುಭವವನ್ನು ಕೇಳಿದರು ಸುದೀಪ್. ಬಹುತೇಕರು ತಾವು ಬಿಗ್ಬಾಸ್ ಮನೆಗೆ ಬರುವ ಮುಂಚೆ ಇದ್ದ ಆತಂಕ ಹಾಗೂ ಆ ನಂತರ ಆದ ಬದಲಾವಣೆಗಳ ಬಗ್ಗೆ ಹೇಳಿದರು.
ರಘು ಗೌಡ ಅವರ ಸರದಿ ಬಂದಾಗ, ಸುದೀಪ್ ಅವರು, 'ರಘು ಅವರೇ, ನಿಮಗೆ ಮೊಬೈಲ್ ಎಂದರೆ ಬಹಳ ಇಷ್ಟ. ಹೆಂಡತಿ ಎಂದರೂ ಬಹಳ ಇಷ್ಟ. ಮಗ ಎಂದರೆ ಇನ್ನೂ ಬಹಳ ಇಷ್ಟ. ಇವು ಮೂರರಲ್ಲಿ ಹೆಚ್ಚು ಯಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಿ' ಎಂದು ಪ್ರಶ್ನೆ ಮಾಡಿದರು.

ಸುದೀಪ್ ಪ್ರಶ್ನೆಗೆ ಉತ್ತರಿಸಲಾಗದೆ ಕಣ್ಣೀರು
ಸುದೀಪ್ ಅವರ ಪ್ರಶ್ನೆಗೆ ಉತ್ತರಿಸಲಾಗದೆ ಗಂಟಲು ಒತ್ತರಿಸಿ ಬಂದ ರಘು ಅಲ್ಲಿಯೇ ಅತ್ತು ಬಿಟ್ಟರು. ಅಪ್ಪ-ಅಮ್ಮನ ಅತ್ಮಹತ್ಯೆ ಕತೆ ಹೇಳುವಾಗಲೂ ಭಾವನೆಗಳನ್ನು ಬಚ್ಚಿಟ್ಟುಕೊಂಡು ಗಟ್ಟಿಯಾಗಿದ್ದ ರಘು, ಮಗನ ಬಗ್ಗೆ ವಿಚಾರಿಸಿದ ಕೂಡಲೇ ಭಾವುಕರಾಗಿಬಿಟ್ಟರು.

ಅವನ ಧ್ವನಿ ಕೇಳದೆ ಬಹಳ ಕಷ್ಟವಾಗ್ತಿದೆ: ರಘು ಗೌಡ
ಆದರೂ ಕೂಡಲೇ ಸಾವರಿಸಿಕೊಂಡ ರಘು ಗೌಡ, 'ಮಗನನ್ನು ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಜೊತೆ ಇರಬೇಕಾದರೆ ಅವನು ಏನಾದರೂ ಗಲಾಟೆ ಮಾಡಿದರೆ, ಕ್ವಾಟ್ಲೆ ಕೊಟ್ರೆ, ಹೊಡೆದು ಬಿಡಬೇಕು ಅನ್ನಿಸೋದು. ಆದರೆ ಈಗ ಅವನ ಧ್ವನಿ ಕೇಳದೇ ಬಹಳ ಕಷ್ಟವಾಗುತ್ತಿದೆ. ಅವನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದರು ರಘು ಗೌಡ.

'ಎಷ್ಟು ದಿನ ಬಿಗ್ಬಾಸ್ ಮನೆಯಲ್ಲಿರಬೇಕು ಎಂದುಕೊಂಡಿದ್ದೀರಿ'
ಆ ನಂತರ ಸುದೀಪ್ ಅವರು ಮಾತು ಮುಂದುವರೆಸಿ, 'ನೀವು ಎಷ್ಟು ದಿನ ಬಿಗ್ಬಾಸ್ ಮನೆಯಲ್ಲಿರಬೇಕು ಎಂದುಕೊಂಡು ಬಂದಿದ್ದೀರಾ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಘು, 'ಗೆಲ್ಲುವೆನೋ ಇಲ್ಲವೋ ಗೊತ್ತಿಲ್ಲ. ಬಿಗ್ಬಾಸ್ ಶೋ ನ ಅಂತ್ಯದವರೆಗೂ ಇರಬೇಕು ಎಂದುಕೊಂಡಿದ್ದೇನೆ' ಎಂದರು.

'ನೀವು ಅತ್ತರೆ ಟಿವಿ ಮುಂದೆ ನಿಮ್ಮ ಕುಟುಂಬದವರೂ ಅಳುತ್ತಾರೆ'
'ಹಾಗಿದ್ದರೆ ನಿಮ್ಮಲ್ಲಿರುವ ಈ ಎಲ್ಲ ಎಮೋಷನ್ಗಳನ್ನು ನಿಯಂತ್ರಿಸಿಕೊಳ್ಳಿ. ಗಟ್ಟಿಯಾಗಿರಿ. ನಿಮ್ಮ ಮನೆಯವರು ನಿಮ್ಮ ಶೋ ನೋಡಲು ವಾರದ ಅಂತ್ಯದಲ್ಲಿ ಟಿವಿ ಮುಂದೆ ಕುಳಿತಿರುತ್ತಾರೆ. ಇಲ್ಲಿ ನೀವು ಅತ್ತರೆ ಅಲ್ಲಿ ಅವರು ಅಳುತ್ತಾರೆ. ಧೈರ್ಯದಿಂದ, ಗಟ್ಟಿಯಾಗಿರಿ' ಎಂದು ಸಲಹೆ ನೀಡಿದರು ಸುದೀಪ್.


Click it and Unblock the Notifications











