ನಿರ್ಮಲಾಗೆ ಬಿಗ್ ಬಾಸ್ ಏಕೆ ಬೇಕಿತ್ತು? ಪತ್ನಿ ಬಗ್ಗೆ ಸರ್ದಾರ್ ಸತ್ಯ ಬಿಚ್ಚಿಟ್ಟ ಇಂಟರೆಸ್ಟಿಂಗ್ ವಿಚಾರ
ಬಿಗ್ ಬಾಸ್ ಕನ್ನಡ ಎಂಟನೇ ಆವೃತ್ತಿಯಲ್ಲಿ ನಿರ್ಮಲಾ ಚೆನ್ನಪ್ಪ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಎಲ್ಲಿಯೂ ಚರ್ಚೆಯಾಗಿರಲಿಲ್ಲ. ಆವೃತ್ತಿಯ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ನಿರ್ಮಲಾ ಅವರು ಯಾರು ಎನ್ನುವುದೇ ಅನೇಕರಿಗೆ ತಿಳಿದಿರಲಿಲ್ಲ. ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ ಎಂದು ಸುದೀಪ್ ಹೇಳಿದ ಕೂಡಲೇ ಯಾವ ಸಿನಿಮಾ, ಯಾವಾಗ ಎಂದು ಹುಡುಕಿದವರು ಇದ್ದಾರೆ.
ಬಿಗ್ ಬಾಸ್ ಆರಂಭವಾಗಿ ಒಂದು ವಾರ ಕಳೆದು ಹೋಗಿದೆ. ಮೊದಲನೇ ವಾರ ನಿರ್ಮಲಾ ಮೇಲೆ ಮಿಶ್ರಪ್ರತಿಕ್ರಿಯೆ ಇದೆ. ಒಳ್ಳೆಯ ಆಟ ಆಡ್ತಿದ್ದಾರೆ, ಉತ್ತಮ ಪ್ರತಿಸ್ಪರ್ಧಿ ಎಂದು ಕೆಲವರು ಹೇಳುತ್ತಿದ್ದಾರೆ. ನಾಟಕ ಮಾಡ್ತಿದ್ದಾರೆ, ವಿಚಿತ್ರ ವ್ಯಕ್ತಿತ್ವ ಎಂದು ಮತ್ತೆ ಕೆಲವರು ಟೀಕೆ ಮಾಡ್ತಿದ್ದಾರೆ. ಪತ್ನಿಯ ಬಗ್ಗೆ ಸರ್ದಾರ್ ಸತ್ಯ ಫೇಸ್ಬುಕ್ ಲೈವ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆಕೆ ಧೈರ್ಯವಂತೆ, ಪ್ರಮಾಣಿಕ ಮಹಿಳೆ ಎಂದು ತಿಳಿಸಿರುವ ಸತ್ಯ ಬಿಗ್ ಬಾಸ್ ವಿಚಾರದಲ್ಲಿ ತಮ್ಮ ಪಾತ್ರವೇನು ಎಂದು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ನಿರ್ಮಲಾ ಬಹಳ ಧೈರ್ಯವಂತೆ
''ಎಲ್ಲವನ್ನು ಧೈರ್ಯವಾಗಿ ತೆಗೆದುಕೊಂಡು ಮುನ್ನುಗ್ಗುವ ದಿಟ್ಟ ಮಹಿಳೆ. ತಪ್ಪು ಮಾಡಿದಾಗ ಕೈ ಎತ್ತುವುದು ರಂಗಭೂಮಿ ಕಲಾವಿದೆಯ ಸ್ವಭಾವ. ಹಾಗಾಗಿ, ಅಂದು ಟಾಸ್ಕ್ನಲ್ಲಿ ತಂಡ ಸೋಲು ಕಂಡಾಗ ತಪ್ಪು ಮಾಡಿದೆ ಎಂದು ಮುಂದೆ ನಿಂತಳು'' ಎಂದು ಸತ್ಯ ಹೇಳಿದ್ದಾರೆ.

ಹೆಚ್ಚು ಓದಿ ತಿಳಿದುಕೊಂಡಿರುವ ಮಹಿಳೆ
''ಬಹಳ ಚೆನ್ನಾಗಿ ಓದಿದ್ದಾಳೆ. ಬಿಎ, ಎಂಎ, ಎಂಎಸ್ಡಬ್ಲ್ಯೂ ಹಾಗೂ ಮಾಸ್ಟರ್ ಇನ್ ಡ್ರಾಮಾ ಮಾಡಿದ್ದಾಳೆ. ರಂಗಭೂಮಿಯಲ್ಲಿ ಬಹಳ ಕೆಲಸ ಮಾಡಿದ್ದಾರೆ. ವೇದಿಕೆ ಹಿಂದೆಯೂ ವೇದಿಕೆ ಮೇಲೆ ಜವಾಬ್ದಾರಿ ವಹಿಸಿ ಗೆಲುವು ಕಂಡಿದ್ದಾರೆ. ಕಲಾವಿದರ ಕುಟುಂಬ ಎಷ್ಟೇ ಕಷ್ಟ ಬಂದರೂ ಕಲೆಯನ್ನು ಬಿಟ್ಟು ದೂರ ಹೋಗಲ್ಲ. ಎನ್ಸಿಸಿ ತರಬೇತಿ ಪಡೆದಿದ್ದರು. ಆಕೆಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕು ಬರುತ್ತೆ. ನಾನು ಶಿಸ್ತು ಕಲಿತಿದ್ದು ಅವರಿಂದಲೇ. ಎಲ್ಲರಿಗೂ ಗೌರವ ಕೊಟ್ಟು, ಅವರೊಂದಿಗೆ ಬೆರೆತು, ಬಹಳ ಕಷ್ಟಪಟ್ಟು ಬೆಳೆದು ಬಂದವರು ನಿರ್ಮಲಾ'' ಎಂದು ಪತ್ನಿಯ ವ್ಯಕ್ತಿತ್ವ ಪರಿಚಯ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.

ಬಿಗ್ ಬಾಸ್ ಏಕೆ ಬೇಕಿತ್ತು?
''ನಿಷ್ಠೆಯಿಂದ, ಪ್ರಮಾಣಿಕವಾಗಿ ಕೆಲಸ ಮಾಡುವವರಿಗೆ ಬಿಗ್ ಬಾಸ್. ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾಗೆ ಆಟವಾಡುವ ಯೋಗ್ಯತೆ ಇದೆ, ಅದಕ್ಕೆ ಆಟ ಆಡಲು ಹೋಗಿದ್ದಾರೆ. ಆಕೆ ಪ್ರಮಾಣಿಕ ಸ್ಪರ್ಧಿ, ಒಳಗೆ ಇರಬೇಕು. ಅವರಿಗೆ ಬಿಗ್ ಬಾಸ್ ಅವಕಾಶ ಬಂದಾಗ, ಹೋಗ್ತೀನಿ ಅಂದ್ರು ಹೋಗಿ ಅಂದೆ, ಅವರ ವೈಯಕ್ತಿಕ ನಿರ್ಧಾರ. ಅಭಿವ್ಯಕ್ತಿ ಸ್ವಾತಂತ್ರ್ಯ. ಅದನ್ನು ತಡೆಯಲು ನಾನು ಯಾರು'' ಎಂದು ಸತ್ಯ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಗೆದ್ದರೆ ಏನು ಮಾಡ್ತಾರೆ? ಎನ್ನುವುದಕ್ಕೂ ಉತ್ತರ ಇಲ್ಲ. ಅದಾಗಲೇ ಆಕೆಯ ಮನಸ್ಸಿನಲ್ಲಿ ಒಂದಿಷ್ಟು ಕಾರ್ಯಕ್ರಮಗಳಿವೆ ಎಂದಿದ್ದಾರೆ.

ನಿರ್ಮಲಾ ರಾಜ್ಯ ಪ್ರಶಸ್ತಿ ಗೆದ್ದು ಬಗೆ...
ತಲ್ಲಣ ಚಿತ್ರದ ಅಭಿನಯಕ್ಕಾಗಿ ನಿರ್ಮಲಾ ಚೆನ್ನಪ್ಪ ಅವರಿಗೆ 2012ನೇ ಸಾಲಿನಲ್ಲಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ. ಆ ಸಾಲಿನಲ್ಲಿ ನಟ ದರ್ಶನ್ ಅವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಅಂದು ನಿರ್ಮಲಾ ಅವರ ಜೊತೆ ರಾಧಿಕಾ ಪಂಡಿತ್, ಪ್ರಿಯಾಮಣಿ, ಪಾರ್ವತಿ ಮೆನನ್ ಅಂತಹ ನಟಿಯರು ಸ್ಪರ್ಧೆಯಲ್ಲಿದ್ದರು. ತಲ್ಲಣ್ಣ ಅತ್ಯುತ್ತಮ ಚಿತ್ರ, ನಿರ್ದೇಶನ ಹಾಗೂ ಅತ್ಯುತ್ತಮ ನಟಿ ಮೂರು ರಾಜ್ಯ ಪ್ರಶಸ್ತಿ ಪಡೆದುಕೊಂಡಿತ್ತು.


Click it and Unblock the Notifications











