ಬಿಗ್ ಬಾಸ್ ಕನ್ನಡ ಫೈನಲ್ ಗೆ ಕೌಂಟ್ ಡೌನ್ ಆರಂಭ
ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ನಿರ್ಣಾಯಕ ಹಂತ ತಲುಪಿದೆ. 'ಬಿಗ್ ಬಾಸ್ ಕನ್ನಡ' ಮೊದಲ ಆವೃತ್ತಿಯಲ್ಲಿ ಗೆಲುವು ಯಾರು ಸಾಧಿಸಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ. 'ಬಿಗ್ ಬಾಸ್' ಗೆಲುವಿನ ಮಾಲೆ ಯಾರಿಗೆ ಬೀಳಲಿದೆ ಎಂಬುದು ಗೊತ್ತಾಗಬೇಕಾದರೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಕಾಯಬೇಕು.
ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದ ಸ್ಪರ್ಧಿಗೆ ರು.50 ಲಕ್ಷಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಇದಕ್ಕೂ ಮುನ್ನ ಉಳಿದಿರುವ ನಾಲ್ಕು ಸ್ಪರ್ಧಿಗಳಿಗೆ ಬಿಗ್ ಬಾಸ್ ಹೊಸ ಆಫರ್ ಕೊಟ್ಟರು. ಅದೇನೆಂದರೆ ರು.10 ಲಕ್ಷದ ಸೂಟ್ ಕೇಸ್. ಇಲ್ಲಿಂದ ಈಗಲೇ ಹೋಗಬೇಕು ಎನ್ನುವರು ಈ ಸೂಟ್ ಕೇಸ್ ತೆಗೆದುಕೊಂಡು ಹೋಗಬಹುದು.

ಇದಕ್ಕಾಗಿ 24 ಗಂಟೆಗಳ ಕಾಲಾವಕಾಶವನ್ನೂ ನೀಡಲಾಯಿತು. ಆದರೆ ಯಾವೊಬ್ಬ ಸ್ಪರ್ಧಿಯೂ ಈ ಹತ್ತು ಲಕ್ಷ ರುಪಾಯಿಗಳ ಸೂಟ್ ಕೇಸ್ ಮುಟ್ಟಲು ಸಿದ್ಧರಿರಲಿಲ್ಲ. ಪ್ರತಿ ಬಾರಿಯೂ ನನ್ನನ್ನು ಇಲ್ಲಿಂದ ಆದಷ್ಟು ಬೇಗ ಕಳುಹಿಸಲು ವ್ಯವಸ್ಥೆ ಮಾಡಿ ಎನ್ನುತ್ತಿದ್ದ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಸೂಟ್ ಕೇಸ್ ಕಡೆ ತಲೆ ಹಾಕದೆ ಇದ್ದದ್ದು ವಿಶೇಷವಾಗಿತ್ತು.
ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಸದೊಂದು ಟಾಸ್ಕ್ ನೀಡಿದರು. ಅದೇನೆಂದರೆ ಹತ್ತು ಪಟ್ಟು ಶಕ್ತಿ ಹತ್ತು ಪಟ್ಟು ಆರಾಮ. ಈ ಸ್ಪರ್ಧಿಯ ಪ್ರಕಾರ ನಾಲ್ಕು ಮಂದಿಗೂ ನಾಲ್ಕು ಬ್ಯಾಟರಿಗಳನ್ನು ನೀಡಲಾಗಿತ್ತು. ಡ್ಯುರಾಸೆಲ್ ಬ್ಯಾಟರಿ ಪಡೆದವರು ಅದೃಷ್ಟವಂತರು ಹಾಗೂ ಅವರು ಗೆದ್ದಂತೆ ಎಂದು ತಿಳಿಸಲಾಯಿತು.
ಈ ಸ್ಪರ್ಧೆಯಲ್ಲಿ ಬ್ರಹ್ಮಾಂಡ ಶರ್ಮಾ ಹಾಗೂ ವಿಜಯ್ ರಾಘವೇಂದ್ರ ಗೆದ್ದರು. ಅವರಿಬ್ಬರಿಗೂ ಸ್ಮಾರ್ಟ್ ಆಂಡ್ರಾಯ್ಡ್ ಕೈಗಡಿಯಾರ ಉಡುಗೊರೆಯಾಗಿ ಸಿಕ್ಕಿದೆ. ಇದನ್ನು ಅಂತಿಮ ದಿನ ನೀಡಲಾಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದರು. ಈ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ಇಬ್ಬರಿಗೂ ಔತಣವನ್ನೂ ನೀಡಿದರು ಬಿಗ್ ಬಾಸ್.


Click it and Unblock the Notifications











