ಗೊಳೋ ಎಂದು ಕಣ್ಣೀರಿಟ್ಟ ಋಷಿಕುಮಾರ ಸ್ವಾಮಿ
ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋನ 20, 21 ಹಾಗೂ 22ನೇ ದಿನ ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಹದಿಮೂರನೆ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಅಡಿಯಿಟ್ಟ ಕಾಳಿಕಾ ಮಠದ ಋಷಿಕುಮಾರ ಸ್ವಾಮಿ ಅದ್ಯಾಕೋ ಏನೋ ಗೊಳೋ ಎಂದು ಕಣ್ಣೀರಿಟ್ಟರು.
ನಟಿ ನಿಖಿತಾ ತುಕ್ರಲ್ ಮೇಲೆ ಕೈಮಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟರು. ಅಯ್ಯೋ ಛೇ ನಾನು ಈ ರೀತಿ ಮಾಡಬಾರದಿತ್ತು ಎಂದು ಅವರು ಮನಸ್ಸಿನಲ್ಲೇ ಚಡಪಡಿಸುತ್ತಿದ್ದರು. ಇದನ್ನು ಗಮನಿಸಿದ ಬಿಗ್ ಬಾಸ್ ಅವರನ್ನು ಕನ್ಫೆಷನ್ ರೂಮಿಗೆ ಕರೆದರು.
ಅಲ್ಲಿ ಬಿಗ್ ಬಾಸ್ ಮಾತನಾಡುತ್ತಾ, ಋಷಿಕುಮಾರ ತಾವೇನಾದರೂ ಮಾತನಾಡಬೇಕೆಂದಿದ್ದೀರಾ? ಎಂದದ್ದೇ ತಡ. ಮಡುಗಟ್ಟಿದ್ದ ಕಣ್ಣೀರು ಕೋಡಿಯಾಗಿ ಹರಿಸಿಬಿಟ್ಟರು. ಒಂದೈದು ನಿಮಿಷಗಳ ಕಾಲ ಅವರ ಉತ್ತರ ಕಣ್ಣೀರೇ ಆಗಿತ್ತು.

ಪಶ್ಚಾತ್ತಾಪ ಅನುಭವಿಸಿದ ಋಷಿಕುಮಾರ
ನಟಿ ನಿಖಿತಾ ಮೇಲೆ ನಾನು ಕೈ ಮಾಡಬಾರದಿತ್ತು. ಆದರೂ ಏನೋ ನಡೆದುಹೋಯಿತು. ಇದಕ್ಕಾಗಿ ನಾನು ಪಶ್ಚಾತ್ತಾಪ ಪಟ್ಟಿದ್ದೇನೆ. ಎರಡೇ ದಿನಕ್ಕೆ ಇಲ್ಲಿಂದ ಓಡಿಹೋಗುಬೇಕು ಅನ್ನಿಸಿದೆ ಎಂದರು. ನಾನು ಸಾಯಬೇಕು ಅಂತಿದ್ದೀನಿ. ಆದರೆ ಇನ್ನೂ ಯಾಕೆ ಬದುಕಿದ್ದೀನೋ ಎಂದು ಏನೇನೋ ಬಡಬಡಿಸಿದರು.

ಋಷಿಕುಮಾರನಿಗೆ ಬಿಗ್ ಬಾಸ್ ಸಮಾಧಾನ
ಕಡೆಗೆ ಅವರ ನೋವೆಲ್ಲಾ ಕಣ್ಣೀರಾಗಿ ಹರಿದ ಮೇಲೆ ಬಿಗ್ ಬಾಸ್ ಸಮಾಧಾನಪಡಿಸಿದರು. ಋಷಿಕುಮಾರನಲ್ಲಿ ಧೈರ್ಯ ತುಂಬಿದರು. ಸಮಾಧಾನದಿಂದ ಇರುವಂತೆ ಹೇಳಿ ಸಮಾಧಾನಪಡಿಸಿದರು. ಬಿಗ್ ಬಾಸ್ ಅವರ ಮಾತಿಗೆ ಕಾಳಿಕಾ ಮಠದ ಶ್ರೀಗಳು ಕೊಂಚ ಸಮಾಧಾನವಾದಂತೆ ಕಂಡರು.

ಹೋಗೆ, ಬಾರೆ ಬ್ರಹ್ಮಾಂಡ ಅದೇ ವರಸೆ
ಇನ್ನೊಂದು ಕಡೆ ನಿಖಿತಾರನ್ನು 'ಬ್ರಹ್ಮಾಂಡ' ಗುರೂಜಿಗಳು ಹೋಗೆ, ಬಾರೆ ಎಂದೇ ಸಂಬೋಧಿಸುತ್ತಿದ್ದರು. ಆದರೆ ನಿಖಿತಾ ಮಾತ್ರ ಅಪ್ಪಾಜಿ ಎಂದೇ ಕರೆಯುತ್ತಿದ್ದರು. ಇನ್ನೊಂದು ಕಡೆಗೆ ಚಂದ್ರಿಕಾ ಹಾಗೂ ನಿಖಿತಾ ನಡುವೆ ಮುಸುಕಿನ ಗುದ್ದಾಟ ನಡೆದೇ ಇದೆ.

ನಿಖಿತಾ, ಚಂದ್ರಿಕಾ ನಡುವೆ ಜಟಾಪಟಿ
ಇಬ್ಬರೂ ಹಾವು ಮುಂಗುಸಿ ತರಹ ಆಡುತ್ತಿದ್ದಾರೆ. ನಿಖಿತಾ ಐಸ್ ಕ್ರೀಂ ತಿಂದದ್ದಕ್ಕೆ ಚಂದ್ರಿಕಾ ಗರಂ ಆಗಿ ಜಟಾಪಟಿ ಶುರುವಾಯಿತು. ಇದರಿಂದ ಮನನೊಂದ ನಿಖಿತಾ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಬಿಕ್ಕಿ ಬಿಕ್ಕಿ ಅತ್ತು ಮನಸ್ಸು ಹಗುರ ಮಾಡಿಕೊಂಡರು ನಿಖಿತಾ.

ಬಿಗ್ ಬಾಸ್ ಅಡುಗೆಮನೆ ವಾಸ್ತು ಸರಿ ಇಲ್ಲವೆ?
ಅದ್ಯಾಕೋ ಏನೋ ಸುದೀಪ್ ಹೇಳಿದಂತೆ ಬಿಗ್ ಬಾಸ್ ಅಡುಗೆಮನೆಯ ವಾಸ್ತು ಸರಿ ಇಲ್ಲವೋ ಏನೋ? ಎಲ್ಲ ಜಗಳಗಳೂ ಅಲ್ಲಿಂದಲೇ ಆರಂಭವಾಗುತ್ತಿವೆ. ಸದ್ಯಕ್ಕೆ ಚಂದ್ರಿಕಾ ಹಾಗೂ ನಿಖಿತಾ ಒಬ್ಬರಿಗೊಬ್ಬರು ಒಂದಾಗುವ ಸೂಚನೆಗಳೇ ಕಂಡುಬರುತ್ತಿಲ್ಲ.

ಸುದೀಪ್ ನನಗೆ ಚಿಕ್ಕಂದಿನಿಂದಲೂ ಗೊತ್ತು
ಋಷಿಕುಮಾರ ಸ್ವಾಮೀಜಿ ಜೊತೆ ಸುದೀಪ್ ಬಗ್ಗೆ ಮಾತನಾಡುತ್ತಾ ಬ್ರಹ್ಮಾಂಡ ಕೆಲವು ವಿಚಾರಗಳನ್ನು ಹೇಳಿದರು. ಚಿಕ್ಕ ಹುಡುಗನಾಗಿದ್ದಾಗ ಅವರ ಅಮ್ಮನ ಜೊತೆ ಸುದೀಪ ನನ್ನನ್ನು ಕಾಣಲು ಬರುತ್ತಿದ್ದ. ಅವನು ಚಿಕ್ಕಂದಿನಿಂದಲೂ ನನಗೆ ಗೊತ್ತು. ಆದರೆ ಈ ದೇವರು ದಿಂಡಿರು ಎಂದರೆ ನಂಬ್ತಾ ಇರ್ಲಿಲ್ಲ ಬಿಡಿ ಎಂದ.

ಲಿವಿಂಗ್ ಏರಿಯಾದಲ್ಲೇ ನಾಮಿನೇಶನ್ ಗೆ ಸೂಚನೆ
ಈ ಬಾರಿ ಬಿಗ್ ಬಾಸ್ ನಾಮಿನೇಟ್ ಮಾಡಬೇಕಾದ ಸದಸ್ಯರ ಹೆಸರುಗಳನ್ನು ಗೋಪ್ಯವಾಗಿ ಸೂಚಿಸದೆ ಲಿವಿಂಗ್ ಏರಿಯಾದಲ್ಲೇ ತಿಳಿಸಲು ಕೋರಿದರು. ಇದರಿಂದ ಮನೆಯಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರಿತುಕೊಳ್ಳುವ ಚಾನ್ಸ್ ಸಿಕ್ಕಿತು. ಇದನ್ನು ಎಲ್ಲರೂ ಸರಿಯಾಗಿಯೇ ಬಳಸಿಕೊಂಡರು.

ಕಣ್ಣೀರ ಕೋಡಿ ಹರಿಸಿದ ವಿನಾಯಕ ಜೋಶಿ
ಬಿಗ್ ಬಾಸ್ ಮನೆಯಲ್ಲಿ ವಿನಾಯಕ ಜೋಶಿ ಸಹ ಅಷ್ಟೇ ಏಕಾಂಗಿತನ ಅನುಭವಿಸುತ್ತಿದ್ದ. ಅವರನ್ನು ಒಮ್ಮೆ ಕನ್ಫೆಷನ್ ರೂಮಿಗೆ ಬಿಗ್ ಬಾಸ್ ಕರೆದರು. ಅಲ್ಲಿ ಜೋಶಿ ತಮ್ಮ ದುಃಖವನ್ನು ತೋಡಿಕೊಂಡರು. ಕಣ್ಣೀರ ಕೋಡಿ ಹರಿಸಿ ಮನಸ್ಸನ್ನು ಹಗುರ ಮಾಡಿಕೊಂಡರು.

ಈ ಬಾರಿ ಮೂವರು ನಾಮಿನೇಟ್ ಆಗಿದ್ದಾರೆ
ಈ ಬಾರಿ ಮನೆಯಿಂದ ಹೊರಹೋಗಲು ಮೂರುಮಂದಿ ನಾಮಿನೇಟ್ ಆಗಿದ್ದಾರೆ. ಋಷಿಕುಮಾರ ಸ್ವಾಮೀಜಿ, ನಿಖಿತಾ ತುಕ್ರಲ್ ಹಾಗೂ ವಿನಾಯಕ ಜೋಶಿ. ಋಷಿಕುಮಾರನ ಜೊತೆ ಯಾರೂ ಹೊಂದಾಣಿಕೆಯಾಗುತ್ತಿಲ್ಲ. ಮನೆಯಲ್ಲಿ ಎಲ್ಲರೂ ಇನ್ನೂ ಆತನೊಂದಿಗೆ ಸಲುಗೆಯಿಂದ ಇಲ್ಲ.


Click it and Unblock the Notifications











