ನಿಮ್ಮಪ್ಪ ನಿಮ್ಮ ತಾತ ಫೂಲ್, ನಾನಲ್ಲ ಎಂದ ಚಂದ್ರಿಕಾ
ರಾಜ್ಯದಲ್ಲಿ ಚುನಾವಣೆ ಕಾವು ಪರಾಕಾಷ್ಠೆ ತಲುಪಿದೆ. ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಚುನಾವಣೆ ಬಿಸಿ ತಟ್ಟಿದೆ. ಒಟ್ಟು ಮೂರು ಪಕ್ಷಗಳ ನಡುವೆ ಮನೆಯಲ್ಲಿ ರಾಜಕೀಯ ವಾತಾವರಣ ಬಿರುಸಾಗಿದೆ. ಪಕ್ಷಾಂತರ, ಉಚ್ಛಾಟನೆ, ರೆಸಾರ್ಟ್ ರಾಜಕೀಯ, ಚಾಣಕ್ಷ ತಂತ್ರ, ಕುತಂತ್ರಗಳು ಮನೆಯಲ್ಲಿ ಜೋರಾಗಿ ನಡೆಯುತ್ತಿವೆ.
ಬಿಗ್ ಬಾಸ್ ಮನೆ ಈಗ ಮನೆಯೊಂದು ಮೂರು ಪಕ್ಷವಾಗಿದೆ. ಪಕ್ಷಗಳ ನಡುವೆ ಕಚ್ಚಾಟ ಶುರುವಾಗಿದೆ. ಅವರ ಮೇಲೆ ಇವರು, ಇವರ ಮೇಲೆ ಇನ್ನೊಬ್ಬರು ಅಪಪ್ರಚಾರ ಮಾಡುತ್ತಿದ್ದಾರೆ. ಒಬ್ಬರನೊಬ್ಬರು ಕಾಲೆಳೆಯುವ ಆಟ ಸಾಗಿದೆ. ಪೊರಕೆ ಪಕ್ಷದ ಮುಖಂಡ ರೋಹನ್ ಗೌಡ ಅವರ ಬಲಗೈ ಬಂಟ ಅರುಣ್ ಸಾಗರ್ ಎಲ್ಲರನ್ನೂ ಮಾತಿನಲ್ಲೇ ಮರ್ಡರ್ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಚಂದ್ರಿಕಾ ಹಾಗೂ ನಿಖಿತಾ ನಡುವಿನ ಕೋಲ್ಡ್ ವಾರ್ ಹಾಟ್ ಆಗಿ ಬದಲಾಗಿದೆ. ಇಬ್ಬರೂ ಒಬ್ಬರನ್ನೊಬ್ಬರು ಮನಸೋ ಇಚ್ಛೇ ಬೈದುಕೊಂಡು ಸಮಾಧಾನಚಿತ್ತರಾದರು. ಚಂದ್ರಿಕಾ ಅವರನ್ನು ಎಕ್ಕಾಮಕ್ಕಾ ನಿಖಿತಾ ಬೈದರು.

ನಿಮ್ಮಪ್ಪ ನಿಮ್ಮ ತಾತ ಫೂಲ್ ಎಂದ ಚಂದ್ರಿಕಾ
ಇವರಿಬ್ಬರ ಕಿತ್ತಾಟವನ್ನು ಮೂಕಪ್ರೇಕ್ಷಕರಂತೆ ಅರುಣ್ ಸಾಗರ್ ಹಾಗೂ ಅನುಶ್ರೀ ನೋಡುತ್ತಿದ್ದರು. ಅವರು ಸಮಾಧಾನ ಮಾಡಲು ಯತ್ನಿಸಲಿಲ್ಲ. ಪ್ಲೀಸ್ ಮೈಂಡ್ ಯುವರ್ ಟಂಗ್, ಯು ಆರ್ ಎ ಫೂಲ್ ಎಂದ ನಿಖಿತಾ. ಇದಕ್ಕೆ ಪ್ರತಿಯಾಗಿ ಚಂದ್ರಿಕಾ, ನಿಮ್ಮಪ್ಪ, ನಿಮ್ಮ ತಾತ ಫೂಲ್ ಎಂದು ತಿರುಗೇಟು.

ಸದ್ಯಕ್ಕೆ ತಣ್ಣಗಾದ ಕೋಲ್ಡ್ ವಾರ್
ಕಡೆಗೆ ಚಂದ್ರಿಕಾ ಅವರು ನಿನ್ನಷ್ಟಕ್ಕೆ ನೀನಿರು, ನನ್ನಷ್ಟಕ್ಕೆ ನಾನಿರುತ್ತೇನೆ. ಅದು ನಿನಗೂ ಒಳ್ಳೇದು ನನಗೂ ಒಳ್ಳೇದು ಎಂದು ಶಾಂತಿಯ ಬಾವುಟ ಹಾರಿಸಿದರು. ಅಲ್ಲಿಗೆ ಇಬ್ಬರ ನಡುವಿನ ಮಾತಿನ ಯುದ್ಧ ತಾತ್ಕಾಲಿಕವಾಗಿ ನಿಂತಿದೆ. ಮತ್ತೆ ಯಾವಾಗ ಶುರುವಾಗುತ್ತದೋ ಗೊತ್ತಿಲ್ಲ. ಇಬ್ಬರೂ ಅಗ್ನಿಪರ್ವತದಂತೆ ಹೊಗೆಯುಗುಳುತ್ತಲೇ ಇದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಆಫಲ್ ಪಕ್ಷ ಉದಯ
ಇನ್ನೊಂದು ಕಡೆ ಮನೆಯಲ್ಲಿ ಹೊಸ ಪಕ್ಷವೊಂದು ಉದಯವಾಗಿದೆ. ಅದು ಆಫಲ್ ಪಕ್ಷ. ಸೇಬು ಹೇಗೆ ಆರೋಗ್ಯಕ್ಕೆ ಹಾಗೂ ಪ್ರೀತಿಗೆ ಸಂಕೇತವೋ ತಮ್ಮ ಪಕ್ಷವೂ ಅಷ್ಟೇ ಎಂಬುದು ಪಕ್ಷದ ನಾಯಕಿ ಅನುಶ್ರೀ ವಿವರಣೆ. ಆಕೆಗೆ ಬಲಗೈ ಬಂಟನಾಗಿ ತಿಲಕ್ ಇದ್ದಾರೆ.

ನರೇಂದ್ರ ಬಾಬು ಶರ್ಮಾ ಉಚ್ಛಾಟನೆ
ಮನೆಯಲ್ಲಿ ಪಕ್ಷಬಾಹಿರ ಚಟುವಟಿಕೆಗಳು ನಡೆಸುತ್ತಿದ್ದರು ಎಂಬ ಕಾರಣಕ್ಕೆ ತಮ್ಮ ಪಕ್ಷದ ಬಲಗೈ ಬಂಟ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರನ್ನು ಪಕ್ಷದಿಂದ ಉಚ್ಛಾಟಿಸಿದರು. ಜಯಲಕ್ಷ್ಮಿ ಅವರು ಮೂರು ಸಲ ಉಚ್ಛಾಟನೆ ಎಂದು ಹೇಳಿ ಶರ್ಮಾ ಅವರನ್ನು ಪಕ್ಷದಿಂದ ಹೊರಹಾಕಿದರು.

ಜಯಲಕ್ಷ್ಮಿ, ಶರ್ಮಾ ತಂತ್ರ, ಕುತಂತ್ರ
ಜಯಲಕ್ಷ್ಮಿ ಅವರು ಶರ್ಮಾ ಅವರನ್ನು ಪಕ್ಷದಿಂದ ಹೊರಹಾಕಿದ್ದರೂ ಇಬ್ಬರ ನಡುವೆ ಯಾವುದೇ ವೈಷಮ್ಯ ಇಲ್ಲ. ಇಬ್ಬರೂ ರಾಜಕಾರಣಗಳನ್ನು ಮೀರಿಸುವಷ್ಟು ನಿಪುಣರಂತೆ ಕಾಣುತ್ತಿದ್ದಾರೆ. ಇಬ್ಬರ ನಡುವೆ ರಾಜಕೀಯದ ಚರ್ಚೆ ನಡೆದಿದೆ.

ಅರುಣ್ ರನ್ನು ಪಾಪಿಷ್ಟಮುಂಡೇದು ಎಂದ ಶರ್ಮಾ
ನರ್ಸಮ್ಮನ ಜೊತೆ ಶರ್ಮಾ ಮಾತನಾಡುತ್ತಾ ಪಾಪಿಷ್ಟಮುಂಡೇದು ತಲೆ ತಿನ್ನುತ್ತಿದ್ದಾನೆ ಎಂದು ಅರುಣ್ ಬಗ್ಗೆ ಕಾಮೆಂಟ್ ಮಾಡಿದರು. ನಗರ ಪ್ರದೇಶದ ಗಲಾಟೆ, ಜಂಜಾಟ ಬೇಡ ಎಂದೇ ನಾನು ನಗರದ ಹೊರಗೆ ಮಠ ಮಾಡಿದೋನು. ಇಲ್ಲಿಗೆ ಬಂದ್ರು ಈ ಗಲಾಟೆ ತಪ್ಪುತ್ತಿಲ್ಲ ತಥ್ ಎಂದು ಕಿಡಿಕಾರಿದರು.

ಮನೆಯಲ್ಲಿ ಶುರುವಾಗಿದೆ ರೆಸಾರ್ಟ್ ರಾಜಕೀಯ
ಮನೆಯ ರಾಜಕೀಯ ವರ್ತಮಾನ ಬದಲಾಗುತ್ತಿದೆ. ಮನೆಯಲ್ಲಿ ರೆಸಾರ್ಟ್ ರಾಜಕೀಯವೂ ಶುರುವಾಗಿದೆ. ತಮ್ಮ ಪಕ್ಷಕ್ಕೆ ಸೆಳೆಯುವ ತಂತ್ರಗಳು ಹೆಣೆಯಲಾಗುತ್ತಿವೆ. ರಾಜಕೀಯದಿಂದ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ.

ಪಕ್ಷಾಂತರಕ್ಕೆ ಬ್ರಹ್ಮಾಂಡ ಶರ್ಮಾ ನಿರ್ಧಾರ
ಮನೆಯಲ್ಲಿ ತಂತ್ರ, ಕುತಂತ್ರ, ಶಕುನಿ ತಂತ್ರಗಳು ಶುರುವಾಗಿವೆ. ನರ್ಸ್ ಜಯಲಕ್ಷ್ಮಿ ಹಾಗೂ ಶರ್ಮಾ ನಡುವೆ ಚಾಣಾಕ್ಷ ತಂತ್ರಗಳು ನಡೆದವು. ಎಚ್ಚರದ ಹೆಜ್ಜೆ ಇಡುತ್ತಿರುವ ಶರ್ಮಾ ಸಾಹೇಬರು ಮತ್ತೊಂದು ಪಕ್ಷ ಸೇರುವ ಬಗ್ಗೆ ತೀರ್ಮಾನಿಸಿದ್ದಾರೆ. ನರ್ಸ್ ಜಯಲಕ್ಷ್ಮಿ ರಾಜಕೀಯವೇ ಬೇಡ ಎಂದು ದೂರ ಉಳಿದಿದ್ದಾರೆ.


Click it and Unblock the Notifications











