ಕಾರ್ ಮೇಲೆ ಕಾಗೆ ಕೂತರೂ ಸಿದ್ದರಾಮಯ್ಯ 'ಸಿ.ಎಂ' ಕುರ್ಚಿಗೆ ಕುತ್ತು ಬರಲೇ ಇಲ್ಲ.!
ಮೂಢನಂಬಿಕೆಗಳ ಮೇಲೆ ಸಿ.ಎಂ ಸಿದ್ದರಾಮಯ್ಯ ಎಂದೂ ನಂಬಿಕೆ ಇಟ್ಟವರಲ್ಲ. ಅಸಲಿಗೆ... ಮೂಢನಂಬಿಕೆ, ಕಂದಾಚಾರಗಳನ್ನು ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ರಾಜ್ಯದ ಜನತೆಗೆ ಸಲಹೆ ನೀಡಿದ್ದವರು ಇದೇ ಸಿದ್ದರಾಮಯ್ಯ.
ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದ ಸಿದ್ದರಾಮಯ್ಯ, ಕರ್ನಾಟಕದ ಮುಖ್ಯಮಂತ್ರಿಗಳ ಪಾಲಿಗೆ ಶಾಪಗ್ರಸ್ತವಾಗಿರುವ ಚಾಮರಾಜನಗರಕ್ಕೂ ಹನ್ನೊಂದು ಬಾರಿ ಭೇಟಿ ನೀಡಿ, ತಾವು 'ಮೂಢನಂಬಿಕೆ ವಿರೋಧಿ' ಎಂದು ಸಾರಿ ಸಾರಿ ಹೇಳಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಮೂಢನಂಬಿಕೆಗಳ ವಿರುದ್ಧ ಸಿ.ಎಂ ಸಿದ್ದರಾಮಯ್ಯ ಮಾತನಾಡಿದರು. ತಮ್ಮ ಕಾರಿನ ಮೇಲೆ ಕಾಗೆ ಕೂತಾಗ, ಇಡೀ ದಿನ 'ಶನಿ ಹೆಗಲೇರಿರುವ' ಬಗ್ಗೆ ಮಾಧ್ಯಮಗಳು ಚರ್ಚೆ ಮಾಡಿದ್ದರೂ, ತಮ್ಮ ಸಿ.ಎಂ. ಕುರ್ಚಿಗೆ ಯಾವುದೇ ಕುತ್ತು ಬರಲಿಲ್ಲ ಎಂದು ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡರು. ಮುಂದೆ ಓದಿರಿ...

ಶಾಪಗ್ರಸ್ತ ಚಾಮರಾಜನಗರ
''ಅಧಿಕಾರದಲ್ಲಿ ಇರುವವರು ಚಾಮರಾಜನಗರಕ್ಕೆ ಹೋದರೆ, ಅಧಿಕಾರ ಕಳೆದುಕೊಳ್ಳುತ್ತಾರೆ ಅಂತ ಹೇಳ್ತಾರೆ. 'ಅಧಿಕಾರ ಹೇಗೆ ಹೋಗುತ್ತದೆ ನೋಡೋಣ' ಎಂದು ನಾನು ಮುಖ್ಯಮಂತ್ರಿ ಆದ್ಮೇಲೆ ಹನ್ನೊಂದು ಬಾರಿ ಚಾಮರಾಜನಗರಕ್ಕೆ ಹೋಗಿದ್ದೇನೆ. ಈ ಮೂಢನಂಬಿಕೆಗಳ ಮೇಲೆ ನಂಬಿಕೆ ಇಡಬಾರದು. ಇದರಿಂದ ಸಮಾಜಕ್ಕೆ ಒಳ್ಳೆಯದ್ದಾಗಲ್ಲ'' - ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ

ಕಾರಿನ ಮೇಲೆ ಕಾಗೆ ಕೂತಾಗ...
''ನನ್ನ ಕಾರಿನ ಮೇಲೆ ಕಾಗೆ ಕೂತಿತ್ತು. 'ಸಿದ್ದರಾಮಯ್ಯನಿಗೆ ಶನಿ ಹೆಗಲೇರಿತು, ಅಧಿಕಾರ ಕಳೆದುಕೊಳ್ಳುತ್ತಾರೆ' ಎಂದು ಟಿವಿಗಳಲ್ಲಿ ಚರ್ಚೆ ಶುರು ಆಯ್ತು. ಇವೆಲ್ಲ ಮೌಢ್ಯಗಳು.! ಪಾಪ.. ಆ ಕಾಗೆಗೆ ಕುರುಡು. ಕಣ್ಣು ಕಾಣುತ್ತಿರಲಿಲ್ಲ. ಎಲ್ಲೋ ಬಂದು ಕೂತ್ಕೊಳ್ತು ಅಷ್ಟೇ'' - ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
ಸಿಎಂ ಕಾರಿನ ಮೇಲೆ ಕುಳಿತ ಕಾಗೆಗೆ ಮಾಧ್ಯಮಗಳ ರೆಕ್ಕೆ ಪುಕ್ಕ!

ನಂಬಿಕೆಯ ವಿರೋಧಿ ಅಲ್ಲ
''ನಾನು ನಂಬಿಕೆಯನ್ನು ವಿರೋಧ ಮಾಡುವುದಿಲ್ಲ. ದೇವರ ಬಗ್ಗೆ ನಂಬಿಕೆ ಇರುತ್ತದೆ. ಆದ್ರೆ, ನಮ್ಮ ನಂಬಿಕೆಯಿಂದ ನಮಗೆ ಹಾಗೂ ಸಮಾಜಕ್ಕೆ ಕೆಟ್ಟದಾಗಬಾರದು. ಸಮಾಜದ ಶೋಷಣೆ ಆಗಬಾರದು'' - ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ

ಇಂತಹ ಮೂಢನಂಬಿಕೆಗಳು ಬೇಡ
''ಎಂಜಲು ಎಲೆ ಮೇಲೆ ಉರುಳಾಡಿದರೆ, ಚರ್ಮದ ರೋಗ ವಾಸಿ ಆಗುತ್ತದೆ, ನಮಗೆ ಒಳ್ಳೆಯದ್ದಾಗುತ್ತದೆ ಎಂಬ ಮೂಢನಂಬಿಕೆಗಳು ಬೇಡ'' - ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ
ವಿಜ್ಞಾನ ಓದಿ, ಮೂಢನಂಬಿಕೆ ತೊಲಗಿಸಿ : ಸಿದ್ದರಾಮಯ್ಯ

ಪುನರ್ಜನ್ಮದಲ್ಲಿಯೂ ನಂಬಿಕೆ ಇಲ್ಲ
''ಸತ್ಯವೇ ಸ್ವರ್ಗ, ಮಿಥ್ಯವೇ ನರಕ' ಎಂದು ಬಸವಣ್ಣ ಹೇಳುತ್ತಾರೆ. ಸ್ವರ್ಗ ಹಾಗೂ ನರಕ ಇರಲು ಸಾಧ್ಯವಿಲ್ಲ. ಪುನರ್ಜನ್ಮ ಆಗುವುದಕ್ಕೂ ಸಾಧ್ಯ ಇಲ್ಲ. ನಾನು ಅದರಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ'' - ಸಿದ್ದರಾಮಯ್ಯ, ಕರ್ನಾಟಕ ಮುಖ್ಯಮಂತ್ರಿ


Click it and Unblock the Notifications











