ನನಸಾಯ್ತು ಕಾಫಿನಾಡು ಚಂದು ಕನಸು, ಎಲ್ಲಾ ಶ್ರೇಯ ಅನುಶ್ರೀಗೆ
ಹುಟ್ಟುಹಬ್ಬಗಳನ್ನು 'ಹ್ಯಾಪಿ ಬರ್ತ್ ಡೇ ಟು ಯೂ' ಎಂದು ಹಾಡುತ್ತಾ ಆಚರಿಸುವುದು ಶತಮಾನದ ಸಂಪ್ರದಾಯ ಆ ಸಂಪ್ರದಾಯಕ್ಕೆ ಕೊಳ್ಳಿಯಿಟ್ಟಿದ್ದು ಚಿಕ್ಕಮಗಳೂರಿನ ಆಟೋ ಚಾಲಕ ಕಾಫಿನಾಡು ಚಂದು.
ಸ್ಟಾರ್ ಹೋಟೆಲ್ನಲ್ಲಿ ಹುಟ್ಟುಹಬ್ಬ ಆಚರಿಸಿದರೂ ಜನ ಈಗ ಕಾಫಿನಾಡು ಚಂದು ಮಾದರಿಯಲ್ಲಿಯೇ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ಅದೆಷ್ಟು ಬೇಗ ಕಾಫಿನಾಡು ಚಂದು ವೈರಲ್ ಆಗಿದ್ದಾರೆಂದರೆ ಫೇಸ್ಬುಕ್ ತೆರೆದರೆ ಅವರದ್ದೇ ವಿಡಿಯೋ.
ಕಾಫಿನಾಡು ಚಂದು ವಿಡಿಯೋಗಳು ಬಹಳ ವೈರಲ್ ಆಗುತ್ತವೆ, ಅವರು ತಮ್ಮ ಪ್ರತಿ ವಿಡಿಯೋದಲ್ಲಿ ತಾವು ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್ ಅಭಿಮಾನಿ ಎಂದು ಹೇಳುವುದನ್ನು ಮರೆಯುವುದಿಲ್ಲ. ಶಿವಣ್ಣನ ಅಪ್ಪಟ ಅಭಿಮಾನಿ ಆಗಿರುವ ಕಾಫಿನಾಡು ಚಂದು, ಅವರನ್ನು ಭೇಟಿ ಮಾಡುವ ಅದಮ್ಯ ಬಯಕೆ ಹೊಂದಿದ್ದರು. ಅದೀಗ ಈಡೇರಿದೆ. ಅದಕ್ಕೆ ನಿರೂಪಕಿ ಅನುಶ್ರೀ ಕಾರಣ ಎನ್ನಲಾಗುತ್ತಿದೆ.

ತಮ್ಮ ಇತ್ತೀಚಿನ ಕೆಲವು ವಿಡಿಯೋಗಳಲ್ಲಿ ತಾವು ಶಿವಣ್ಣನನ್ನು ಭೇಟಿ ಮಾಡುವ ಇಚ್ಛೇಯನ್ನು ಕಾಫಿನಾಡು ಚಂದು ವ್ಯಕ್ತಪಡಿಸಿದ್ದರು. ತಮ್ಮನ್ನು ಶಿವಣ್ಣನೊಂದಿಗೆ ಭೇಟಿ ಮಾಡಿಸಿ ಎಂದು ನಿರೂಪಕಿ ಅನುಶ್ರೀಯವರನ್ನು ಕಾಫಿನಾಡು ಚಂದು ವಿಡಿಯೋ ಮೂಲಕ ಮನವಿ ಸಹ ಮಾಡಿದ್ದರು. ಅವರ ಮನವಿ ಕೇಳಿದ ಅನುಶ್ರೀ ಹಾಗೂ ಜೀ ಕನ್ನಡ ಕೊನೆಗೂ ಕಾಫಿನಾಡು ಚಂದುವನ್ನು, ಶಿವಣ್ಣನ ಎದುರಿಗೆ ನಿಲ್ಲಿಸಿದ್ದಾರೆ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಶಿವರಾಜ್ ಕುಮಾರ್ ವಿಶೇಷ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು, ಇದೇ ಶೋನಲ್ಲಿ ನಿರೂಪಕಿಯಾಗಿದ್ದಾರೆ ಅನುಶ್ರೀ. ಇದೀಗ ಕಾಫಿನಾಡು ಚಂದುವನ್ನು ಈ ಶೋಗೆ ಕರೆತರಲಾಗಿದ್ದು, ಅವರ ಕನಸನ್ನು ಈಡೇರಿಸಲಾಗಿದೆ.
ಕಾಫಿನಾಡು ಚಂದು, ಅನುಶ್ರೀಯನ್ನು ಭೇಟಿ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಅದರ ಬೆನ್ನಲ್ಲೆ ಇದೀಗ ಕಾಫಿನಾಡು ಚಂದು, ಡಿಕೆಡಿ ವೇದಿಕೆ ಮೇಲೆ ಶಿವಣ್ಣನನ್ನು ಭೇಟಿ ಮಾಡಿರುವ ವಿಡಿಯೋ ಹಾಗೂ ಚಿತ್ರಗಳು ಹರಿದಾಡುತ್ತಿವೆ.
ಶಿವಣ್ಣನ ಮುಂದೆ ಕಾಫಿನಾಡು ಚಂದು ತನ್ನದೇ ಶೈಲಿಯಲ್ಲಿ ಹಾಡು ಹಾಡಿದ್ದಾನೆ. ಆ ವಿಡಿಯೋ ಸಹ ಹರಿದಾಡುತ್ತಿದೆ. ಶಿವಣ್ಣನನ್ನು ಭೇಟಿ ಮಾಡಬೇಕು ಎಂಬ ಬಹು ವರ್ಷಗಳ ಚಂದು ಕನಸು ಕೊನೆಗೂ ಈಡೇರಿದೆ. ಎಪಿಸೋಡ್ನ ಚಿತ್ರೀಕರಣ ಇದಾಗಲೇ ಪೂರ್ಣವಾಗಿದ್ದು, ಈ ಶೋ ವಾರಾಂತ್ಯದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











