ಹೊಸ ಸಾವಿತ್ರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್
ಓದುಗರೇ, ಗೊಂದಲ ಬೇಡ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಜೀ ಕನ್ನಡದ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಬದಲಿಗೆ ಅಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಚಿ ಸೌ ಸಾವಿತ್ರಿ ಇನ್ನು ಮಂದೆ ಹೊಸ ರೂಪದಲ್ಲಿ ಬರಲಿದ್ದಾಳೆ. ಹೊಸ ಸಾವಿತ್ರಿಯ ಪರಿಚಯ ಸಮಾರಂಬಕ್ಕೆ ನಟ ದರ್ಶನ್ ಅಲ್ಲಿ ಹಾಜರಾಗಲಿದ್ದಾರೆ. ಚಿ ಸೌ ಸಾವಿತ್ರಿ ಹಳೆ ಕಥೆ ಮುಗಿದು ಹೊಸ ಸಾವಿತ್ರಿಯ ಕಥೆ ಇನ್ಮುಂದೆ ಪ್ರಾರಂಭವಾಗಲಿದೆ.
ಇಲ್ಲಿಯವೆರೆಗೆ ಸಾವಿತ್ರಿಯಾಗಿ ನಟಿಸಿರುವ ನಟಿ 'ಗೌತಮಿ' ಇನ್ನುಂದೆ 'ಹಳೆ ಸಾವಿತ್ರಿ' ಎನಿಸಿಕೊಳ್ಳಲಿದ್ದಾರೆ. ಕಾರಣ, ಮುಂದೆ ಬರಲಿರುವ ಹೊಸ ಸಾವಿತ್ರಿ ಕಥೆಗೆ ಹೊಸ ನಟಿಯೊಬ್ಬರ ಆಗಮನವಾಗಲಿದೆ. ಆ ನಟಿ ಯಾರು? ಯಾರು ಇನ್ನು ಮಂದೆ ಸಾವಿತ್ರಿಯಾಗಿ ಈ ಧಾರಾವಾಹಿಯನ್ನು ಮುನ್ನಡೆಸಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್! ಆದರೆ, ಈ ಹೊಸ ಸಾವಿತ್ರಿ ಆಗಮನ ಭಾರೀ ಅದ್ದೂರಿಯಾಗಿ ಮೈಸೂರಿನಲ್ಲಿ ನಡೆಯಲಿದೆ ಎಂಬ ಗುಟ್ಟು ರಟ್ಟಾಗಿದೆ.
ಇಂದು ಮೈಸೂರಿನಲ್ಲಿ ನಡೆಯಲಿರುವ ವೈಭವೋಪೇತ ಸಮಾರಂಭದಲ್ಲಿ ನಟ ದರ್ಶನ್ ಪ್ರಮುಖ ಆಕರ್ಷಣೆಯಾಗಿ ಮಿಂಚಲಿದ್ದಾರೆ. ಜೊತೆಗೆ ಬೆಳ್ಳಿತೆರೆ ಹಾಗೂ ಕಿರುತೆರೆಯ ಬಹಳಷ್ಟು ಕಲಾವಿದರು ಅಲ್ಲಿ ಸೇರಲಿದ್ದಾರೆ. ಕಾರಣ, ಮೈಸೂರಿನ ಕಲಾಮಂದಿರದಲ್ಲಿ ಇಂದು ಭರ್ಜರಿ ಮನರಂಜನೆ ಕಾರ್ಯಕ್ರಮ ಕೂಡ ನಡೆಯಲಿದೆ. ನಟ ದರ್ಶನ್ ಹೊಸ ಸಾವಿತ್ರಿಗೆ 'ಮುನ್ನುಡಿ' ಬರೆಯಲಿದ್ದಾರೆ.
ಶ್ರುತಿ ನಾಯ್ಡು ನಿರ್ದೇಶನ ಹಾಗೂ ನಿರ್ಮಾಣದ ಚಿ ಸೌ ಸಾವಿತ್ರಿ ಧಾರಾವಾಹಿ ಮುಂದೆ ಸಂಪೂರ್ಣ ಹೊಸ ರೂಪ ಪಡೆಯಲಿದೆ. ಮುಂದೆ, ಈ ಧಾರಾವಾಹಿಯ ಕಥೆ, ನಿರೂಪಣೆ ಹಾಗೂ ಕಲಾವಿದರ ವಿವರಕ್ಕಾಗಿ ಧಾರಾವಾಹಿಯ ಮುಂದಿನ ಸಂಚಿಕೆಗಳನ್ನು ವೀಕ್ಷಿಸಿ. ಈ ಧಾರಾವಾಹಿ, ಸೋಮವಾರದಿಂದ ಶುಕ್ರವಾರ, ಸಾಯಂಕಾಲ 7-00 ಗಂಡೆಗೆ ಪ್ರಸಾರವಾಗುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications












