ಈಟಿವಿಯನ್ನು ಟಿಆರ್ ಪಿಯಲ್ಲಿ ಮೇಲೆತ್ತಿದ ಬಿಗ್ ಬಾಸ್
ಬಿಗ್ ಬಾಸ್ ರಿಯಾಲಿಟಿ ಶೋ ಸತತ 73ನೇ ದಿನಕ್ಕೆ ಕಾಲಿರಿಸಿದೆ. ಈ ಕಾರ್ಯಕ್ರಮದ ಮೂಲಕ ಈಟಿವಿ ಕನ್ನಡ ವಾಹಿನಿ ಟಿಆರ್ ಪಿ ಯಲ್ಲೂ ದಾಖಲಾರ್ಹ ಸಾಧನೆ ಮಾಡಿದೆ. ಕನ್ನಡ ಮನರಂಜನಾ ವಾಹಿನಿಗಳಲ್ಲಿ ಮೂರನೇ ಸ್ಥಾನದಲ್ಲಿದ್ದ ಈಟಿವಿ ಕನ್ನಡ ಈಗ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಮೊದಲ ಸ್ಥಾನದಲ್ಲಿ ಉದಯ ವಾಹಿನಿ ಇದೆ. ಮೂರನೇ ಸ್ಥಾನಕ್ಕೆ ಸುವರ್ಣ ವಾಹಿನಿ ಸರಿದಿದೆ.
ಇನ್ನು 73ನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ. ಪೀಟಿ ಮಾಸ್ಟರ್ ಆಗಿ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಟಾಸ್ಕ್ ನಿಭಾಯಿಸಿದರು. ಆದರೆ ಅವರ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ನೋಡಿ ಮಕ್ಕಳೇ ಚಿಕ್ಕವಯಸ್ಸಲ್ಲಿ ಚೆನ್ನಾಗಿ ವ್ಯಾಯಾಮ ಮಾಡಿದ್ದಕ್ಕೇ ಈ ವಯಸ್ಸಲ್ಲಿ ನಾನು ಈ ರೀತಿ ಡುಮ್ಮಕ್ಕೆ ಇರುವುದು ಎಂದು ಪಾಠ ಮಾಡಿದರು.

ಆದರೆ ಮನೆಯ ಸದಸ್ಯರು ಯಾರೂ ಪೀಟಿ ಮಾಸ್ಟರ್ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅವರ ಜೊತೆ ಕಣ್ಣಾಮುಚ್ಚಾಲೆ, ಜೂಟಾಟ ಆಡುತ್ತಾ ಪೀಟಿ ಮಾಸ್ಟರ್ ಗೇ ಬೆವರಿಳಿಸಿದರು. ಕಡೆಗೆ ಅವರು ಬೇಸತ್ತು. ರಿಟೈರ್ಡ್ ಆಗಿ ನನ್ನ ಪಾಡಿಗೆ ನಾನು ರಾಮಾ ಕೃಷ್ಣ ಎಂದಿದ್ದೆ. ರಿಟೈರ್ಡ್ ಆದರೂ ಪರ್ವಾಗಿಲ್ಲ ಎಂದು ಕರೆದುಕೊಂಡು ಬಂದು ಈ ಕೆಲಸ ಕೊಟ್ಟರು. ಸಾಕಾಗಿ ಹೋಗಿದೆಯಪ್ಪಾ ಎಂದು ನಿಟ್ಟುಸಿರುಬಿಟ್ಟರು.
ಈ ಎಲ್ಲಾ ಆಟಗಳು ಮುಗಿದ ಮೇಲೆ ಅಸಲಿ ಆಟ ಶುರುವಾಗಿದ್ದು ನಿಕಿತಾ ಕನ್ನಡ ಪಾಠ ಮಾಡುವ ಮೂಲಕ. ಕನ್ನಡ ಮೇಡಂಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ಅವರ ಕೈಗೆಯಲ್ಲಿ ಸಿಕ್ಕ ಕನ್ನಡ ಪದಗಳು ಹಾಫ್ ಮರ್ಡರ್, ಫುಲ್ ಮರ್ಡರ್ ಆದವು.
ಸ್ವತಃ ವಿದ್ಯಾರ್ಥಿಗಳೇ ಕನ್ನಡ ಮೇಡಂಗೆ ಕನ್ನಡ ಪಾಠ ಕಲಿಸುವಂತಾಯಿತು. ಈ ಮೇಡಂಗೆ ಅ ಆ ಇ ಈ ಉ ಊ ಬಿಟ್ಟರೆ ಇನ್ನೇನು ಗೊತ್ತಿರಲಿಲ್ಲ. ಕನ್ನಡದ ಗಂಧಗಾಳಿಯೂ ಗೊತ್ತಿರಲಿಲ್ಲ. ನಿಕಿತಾ ಅವರಿಗೆ ಕನ್ನಡ ಪಾಠ ಮಾಡುವ ಸುವರ್ಣಾವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಬಳಸಿಕೊಂಡು ಅವರು ಕನ್ನಡಿಗರ ಮನಗೆಲ್ಲಬಹುದಾಗಿತ್ತು. ಆದರೆ ಅವರ ಬಾಯಲ್ಲಿ ಕನ್ನಡ ಪದಗಳು ವಿಲವಿಲ ಎಂದು ಒದ್ದಾಡುವಂತಾಯಿತು.


Click it and Unblock the Notifications











