ಮಧ್ಯ ರಾತ್ರಿ ಗಲಾಟೆ: ನಟ ರಕ್ಷಿತ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು
ಕನ್ನಡ ಧಾರಾವಾಹಿಯ ಜನಪ್ರಿಯ ನಟ ರಕ್ಷಿತ್ ಹಾಗೂ ಗೆಳೆಯರ ವಿರುದ್ಧ ಗಲಾಟೆ ಮಾಡಿದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.
'ಗಟ್ಟಿಮೇಳ' ಧಾರಾವಾಹಿಯ ಮುಖ್ಯ ನಟ ರಕ್ಷಿತ್ ಹಾಗೂ ಅದೇ ಧಾರಾವಾಹಿಯ ಕೆಲವು ನಟರು, ತಂತ್ರಜ್ಞರು ಕೆಲವು ದಿನಗಳ ಹಿಂದೆ ಕೆಂಗೇರಿಯ ಜಿಂಜರ್ ಲೇಕ್ ವ್ಯೂ ಹೋಟೆಲ್ ಬಳಿ ಗಲಾಟೆ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ರಕ್ಷಿತ್ ಹಾಗೂ ಇತರರನ್ನು ಬಂಧಿಸಿ ಬಳಿಕ ಠಾಣೆ ಜಾಮೀನಿನ ಮೇಲೆ ಬಿಟ್ಟು ಕಳಿಸಿದ್ದರು. ಆದರೆ ಈಗ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಿದ್ದು, ರಕ್ಷಿತ್ ಅನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.

ಧಾರಾವಾಹಿ ಚಿತ್ರೀಕರಣ ಮುಗಿಸಿದ್ದ ರಕ್ಷಿತ್ ಹಾಗೂ ತಂಡ ರಾತ್ರಿ ಹತ್ತು ಗಂಟೆ ಬಳಿಕ ಕೆಂಗೇರಿಯ ಜಿಂಜರ್ ಲೇಕ್ ವ್ಯೂ ಹೋಟೆಲ್ಗೆ ಬಂದು ಮ್ಯಾನೇಜರ್ಗೆ ಕರೆ ಮಾಡಿ ಹೋಟೆಲ್ ತೆಗೆಸಿ ಒಳಗೆ ಕೂತು ಮದ್ಯ ಸೇವಿಸಿದ್ದರು. ಒಳಗೆ ಜೋರಾಗಿ ಕಿರುಚಾಡಿ ಗಲಾಟೆ ಮಾಡಿದ್ದರು. ಇದರಿಂದ ಸ್ಥಳೀಯರಿಗೆ ಕಿರಿ-ಕಿರಿ ಆಗಿದ್ದು ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಎಎಸ್ಐ ನಾಗರಾಜು ನೀಡಿರುವ ದೂರಿನಂತೆ, ನಾಗರಾಜು ಹಾಗೂ ಇತರರು ಮೈಲಸಂದ್ರ ರಸ್ತೆಯಲ್ಲಿ ರಾತ್ರಿ 1:30ಗೆ ಗಸ್ತು ತಿರುಗುತ್ತಿದ್ದಾಗ ಠಾಣೆಯಿಂದ ಕರೆ ಬಂದಿದ್ದು, ಜಿಂಜರ್ ಲೇಕ್ ವ್ಯೂ ಹೋಟೆಲ್ನಲ್ಲಿ ಗುಂಪೊಂದು ಕುಡಿದು ಗಲಾಟೆ ಮಾಡುತ್ತಿರುವ ತಿಳಿಸಿದಾಗ ಎಎಸ್ಐ ನಾಗರಾಜು ಹಾಗೂ ಇತರ ಸಿಬ್ಬಂದಿ 1:40 ಕ್ಕೆ ಸ್ಥಳಕ್ಕೆ ತೆರಳಿದ್ದಾರೆ.
ಜಿಂಜರ್ ಲೇಕ್ ವ್ಯೂ ಹೋಟೆಲ್ನ ಒಳಗೆ ಐವರು ಪುರುಷರು, ಇಬ್ಬರು ಮಹಿಳೆಯರು ಜೋರಾಗಿ ಕೂಗಾಡಿ ಶಾಂತಿ ಭಂಗ ಮಾಡುತ್ತಿರುವುದನ್ನು ಪೊಲೀಸರು ಗಮಿಸಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರೊಂದಿಗೆ ಏರು ದನಿಯಲ್ಲಿ ಮಾತನಾಡಿದ ಅವರು ಅಲ್ಲಿಂದ ಹೊರಡಲು ನಿರಾಕರಿಸಿದ್ದಾರೆ. ಆಗ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಿಐ ಅವರಿಗೆ ವಿಷಯ ತಿಳಿಸಲಾಗಿ ಅವರು ಸ್ಥಳಕ್ಕೆ ಬಂದು ಹೊಯ್ಸಳ ಕರೆಸಿ ಅದರಲ್ಲಿ ಹೋಟೆಲ್ನಲ್ಲಿದ್ದವರನ್ನು ಠಾಣೆಗೆ ಕರೆತಂದು ಅವರ ಹೆಸರು, ವಿಳಾಸ ನಮೂದು ಮಾಡಿಕೊಳ್ಳಲಾಗಿದೆ. ಈ ಎಫ್ಐಆರ್ ಅನ್ನು 28/01/2022ರಂದು ದಾಖಲಿಸಲಾಗಿದೆ.
ನಿನ್ನೆ ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದ ನಟ ರಕ್ಷಿತ್, ತಾವು ಹೋಟೆಲ್ಗೆ ಹೋಗಿದ್ದು ನಿಜವೆಂದು ಆದರೆ ತಾವು ಮದ್ಯ ಸೇವನೆ ಮಾಡಿಲ್ಲ, ಸ್ಥಳಕ್ಕೆ ಬಂದ ಪೊಲೀಸರೊಟ್ಟಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದಿದ್ದರು. ಅಲ್ಲದೆ ತಮ್ಮ ಮೇಲೆ ಎಫ್ಐಆರ್ ದಾಖಲಾಗಿಲ್ಲ. ತಮ್ಮ ವೈದ್ಯಕೀಯ ಪರೀಕ್ಷೆಯೂ ನಡೆದಿಲ್ಲ ಎಂದು ಹೇಳಿದ್ದರು. ಆದರೆ ರಕ್ಷಿತ್ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಾಗಿರುವುದು ಖಾತ್ರಿಯಾಗಿದೆ.


Click it and Unblock the Notifications











