'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹಂಸಲೇಖ ಯಾಕೆ ಬರ್ಲಿಲ್ಲ.? ಕಾರಣ ಬಹಿರಂಗ.!
ಮನ ಮುಟ್ಟುವ ಸಾಹಿತ್ಯ-ಸಂಗೀತದ ಮೂಲಕ ಕನ್ನಡ ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿರುವ, 'ನಾದ ಬ್ರಹ್ಮ' ಎಂದೇ ಕರೆಯಿಸಿಕೊಳ್ಳುವ ಹಂಸಲೇಖ 'ಸಾಧಕರ ಸೀಟ್' ಮೇಲೆ ಯಾವಾಗ ಕೂರುತ್ತಾರೋ ಎಂದು ಕೋಟ್ಯಾಂತರ ಕನ್ನಡಿಗರು 'ವೀಕೆಂಡ್ ವಿತ್ ರಮೇಶ್' ಮೊದಲ ಆವೃತ್ತಿಯಿಂದಲೂ ಕಾತರದಿಂದ ಕಾಯುತ್ತಲೇ ಇದ್ದಾರೆ.
ಆದ್ರೆ, ಇಲ್ಲಿಯವರೆಗೂ ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಕಡೆ ಹಂಸಲೇಖ ಮುಖ ಮಾಡಿಲ್ಲ. ಹಂಸಲೇಖ ಅವರಿಗೆ ಜೀ ವಾಹಿನಿ ಹಾಗೂ ರಮೇಶ್ ಅರವಿಂದ್ ಎಷ್ಟೋ ಬಾರಿ ಆಹ್ವಾನ ನೀಡಿದರೂ, ಅದನ್ನ ಹಂಸಲೇಖ ಪುರಸ್ಕರಿಸಿಲ್ಲ.
'ಸ್ಫೂರ್ತಿಯ ಚಿಲುಮೆ' ಹಂಸಲೇಖ ಸಾಧಕರ ಸೀಟ್ ಮೇಲೆ ಕೂರದೇ ಇರುವುದಕ್ಕೂ ಒಂದು ಕಾರಣ ಇದೆ. ಆ ಕಾರಣ ಕನ್ನಡದ ಜನಪ್ರಿಯ ಸುದ್ದಿ ವಾಹಿನಿ 'ಸುದ್ದಿ ಟಿವಿ'ಯಲ್ಲಿ ಬಯಲಾಗಿದೆ. ಮುಂದೆ ಓದಿರಿ....

'ಸುದ್ದಿ ಟಿವಿ'ಯಲ್ಲಿ ಹಂಸಲೇಖ ಸಂದರ್ಶನ
'ಸುದ್ದಿ ಟಿವಿ'ಯ ಮುಖ್ಯಸ್ಥರಾಗಿರುವ ಶಶಿಧರ್ ಭಟ್ ನಡೆಸಿಕೊಡುವ 'ಒನ್ ಟು ಒನ್' ಸಂದರ್ಶನದಲ್ಲಿ ಹಂಸಲೇಖ ಭಾಗವಹಿಸಿದ್ದರು. ಸಂದರ್ಶನದಲ್ಲಿ ತಮ್ಮ ವೃತ್ತಿಬದುಕಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಹಂಸಲೇಖ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಯಾಕೆ ಹೋಗಲಿಲ್ಲ ಎಂಬುದಕ್ಕೂ ವಿವರಣೆ ನೀಡಿದರು.

ಎಲ್ಲರಿಗೂ ಸ್ಫೂರ್ತಿ ನೀಡಲು ಬಯಸುತ್ತೇನೆ
''ನಾನು ಮಾನಸಿಕವಾಗಿ ಡೌನ್ ಆಗಿದ್ದಾಗಲೂ, ಯಾರಿಗೂ ಗೊತ್ತಾಗಿರುವುದಿಲ್ಲ. ಯಾಕಂದ್ರೆ, ನಾನು ಯಾವಾಗಲೂ ಎಲ್ಲರಿಗೂ ಸ್ಫೂರ್ತಿ ನೀಡಲು ಬಯಸುತ್ತೇನೆ. ನನ್ನನ್ನ ದೊಡ್ಡ ಜನರೇಟರ್ ಅಂತಲೇ ಕರೆಯುತ್ತಾರೆ. ನಾನು ಡಲ್ ಆಗಿರುವುದನ್ನೇ ಯಾರೂ ನೋಡಿಲ್ಲ'' - ಹಂಸಲೇಖ

ಯಾವಾಗಲೂ ನಗುನಗುತ್ತಲೇ ಇರುವವನು
''ಒಂದೊಂದು ಬಾರಿ ನಾನು ಆಫೀಸ್ ನಲ್ಲಿ ಪೇಪರ್ ಓದುವಾಗ, ಯಾರಾದರೂ ಬಂದಾಗ, ನಾನು ಅವರ ಮುಖ ನೋಡಿದಾಗ, ಅವರು ಗಾಬರಿ ಪಡುತ್ತಾರೆ. ಯಾಕೆ ಅಂತ ಕೇಳಿದಾಗ, ಸೀರಿಯಸ್ ಆಗಿದ್ದೀರಲ್ಲ ಅಂತ ಹೇಳ್ತಾರೆ. ಅಂದ್ರೆ, ನಾನು ಯಾವಾಗಲೂ ನಗುನಗುತ್ತಲೇ ಇರುವವನು. ಓದುವಾಗಲೂ ನಗುತ್ತಾ ಇರಬೇಕು ಎಂಬುದು ನನ್ನ ಸುತ್ತ-ಮುತ್ತ ಇರುವವರ ಆಜ್ಞೆ'' - ಹಂಸಲೇಖ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹೋಗಲಿಲ್ಲ
''ನಾನು ನನಗಾಗಿರುವ ನೋವನ್ನ ಇದುವರೆಗೂ ಯಾರಿಗೂ ತೋರಿಸಿಲ್ಲ. ತೋರಿಸಿಕೊಳ್ಳುವುದೂ ಇಲ್ಲ. ಇದೇ ಕಾರಣಕ್ಕೆ ನಾನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹೋಗಲಿಲ್ಲ'' ಎಂದು 'ಸುದ್ದಿ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಹಂಸಲೇಖ ಹೇಳಿದರು.

ಒಂದು ಲಕ್ಷ ಬಾರಿ ಕರೆದಿದ್ದಾರೆ
''ರಮೇಶ್ ಎಂಬ ದೊಡ್ಡ ನಟ 'ವೀಕೆಂಡ್ ವಿತ್ ರಮೇಶ್' ಎಂಬ ದೊಡ್ಡ ಕಾರ್ಯಕ್ರಮ ಮಾಡಿ ಒಂದು ಲಕ್ಷ ಬಾರಿ ಕರೆದಿದ್ದಾರೆ. ಆದ್ರೆ ನಾನು ಹೋಗಿಲ್ಲ. ಕಾರಣ ಏನು ಅಂದ್ರೆ, ನನ್ನ ಕಷ್ಟ ಹೇಳಿಕೊಳ್ಳುವುದಕ್ಕೆ ನಾನು ಸಿದ್ಧವಾಗಿಲ್ಲ. ನನ್ನ ಕಷ್ಟವನ್ನ ತೆಗೆದಿಡುವುದಕ್ಕೆ ಅವರಿಗೂ ಅಧಿಕಾರ ಇಲ್ಲ'' - ಹಂಸಲೇಖ

ನನ್ನ ನೋವೇ ನನ್ನ ಹಾಡು
''ನನ್ನ ನೋವು ನನಗೆ ಯಾವಾಗಲೂ ಎನರ್ಜಿ ಕೊಡುತ್ತದೆ. ನನ್ನ ನೋವು ನನಗೆ ಯಾವಾಗಲೂ ಹೊಸದನ್ನು ಮಾಡುವುದಕ್ಕೆ ಪ್ರೇರೇಪಿಸುತ್ತದೆ. ನನ್ನ ನೋವು, ನನ್ನ ಹಾಡು ಒಂದೇ'' ಎಂದಿದ್ದಾರೆ ಹಂಸಲೇಖ (ಕೃಪೆ: ಸುದ್ದಿ ಟಿವಿ)


Click it and Unblock the Notifications











