ಹಂಸಲೇಖ ಅವರನ್ನು ಮಾಂಸದ ಮುದ್ದೆ ಎಂದು ದೂರ ತಳ್ಳಿದ್ದರು!
Recommended Video

ಸಂಗೀತ ಮಾಂತ್ರಿಕ ಹಂಸಲೇಖ ಅವರ ಸಿನಿಮಾ ಪ್ರಯಾಣ, ಯಶಸ್ಸು, ಅವರ ಹಾಡುಗಳು ಎಲ್ಲರಿಗೆ ತಿಳಿದಿದೆ. ಆದರೆ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಯಾರಿಗೂ ಹೆಚ್ಚು ಗೊತ್ತಿಲ್ಲ. ಅವರು ಸಹ ತಮ್ಮ ವೈಯಕ್ತಿಕ ಜೀವನದ ಸಂಗತಿಗಳನ್ನು ಜಾಸ್ತಿ ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ.
ಆದರೆ ಇದೀಗ ಹಂಸಲೇಖ ತಮ್ಮ ಜೀವನದ ಒಂದು ಪ್ರಮುಖ ನೋವಿನ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಸರಿಗಮಪ ಕಾರ್ಯಕ್ರಮದ ಸೆಮಿ ಫೈನಲ್ ಸಂಚಿಕೆಯಲ್ಲಿ ತೀರ್ಪುಗಾರರಾದ ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಅವರ ತಾಯಂದಿರು ಆಗಮಿಸಿದ್ದರು. ಈ ವೇಳೆ ಆ ತಾಯಂದಿರ ಮಾತು ಕೇಳಿದ ಹಂಸಲೇಖ ''ನನಗೆ ನಮ್ಮ ಅಮ್ಮನ ನೆನಪಾಗುತ್ತಿದೆ'' ಎಂದು ತಮ್ಮ ಅಗಲಿದ ತಾಯಿಯ ಬಗ್ಗೆ ಮಾತನಾಡಿದರು.
ತಮ್ಮ ತಾಯಿಯ ಬಗ್ಗೆ ಹಂಸಲೇಖ ಆಡಿದ ಹೃದಯಸ್ಪರ್ಶಿ ಮಾತುಗಳ ಮುಂದಿದೆ ಓದಿ...

ಎಲ್ಲಿಂದ ನಮ್ಮ ಅಮ್ಮನನ್ನು ತರಲಿ
''ತಾಯಿ ಎಲ್ಲ ಕಾಲದಲ್ಲಿ ತಾಯಿಯೇ. ಅವಳು ಮಾಡ್ರನ್ ತಾಯಿ, ಓಲ್ಡ್ ತಾಯಿ, ಓಲ್ಡೆಸ್ಟ್ ತಾಯಿ ಅಂತ ಇರುವುದಿಲ್ಲ. ಮಕ್ಕಳನ್ನು ಹೆತ್ತ ಇಬ್ಬರು ತಾಯಿಯರು ನಮ್ಮ ವೇದಿಕೆಯಲ್ಲಿ ಮಕ್ಕಳಾಗಿದ್ದಾರೆ. ತಾಯಿ ಮಗುವನ್ನು ಹೆರುತ್ತಾಳೆ. ಆದರೆ, ಒಬ್ಬ ಮಗ ಆತನ ತಾಯಿಯನ್ನು ಮಗುವಾಗಿ ನೋಡುವುದು ಈ ದೇಶದ ಸಂಸ್ಕೃತಿ. ಇದನೆಲ್ಲ ನೋಡಿ ನನಗೂ ನಮ್ಮ ಅಮ್ಮನ ನೆನಪಾಗುತ್ತಿದೆ. ಈಗ ಎಲ್ಲಿಂದ ನಮ್ಮ ಅಮ್ಮನನ್ನು ತರಲಿ.'' - ಹಂಸಲೇಖ, ಸಂಗೀತ ನಿರ್ದೇಶಕ

ಇದು ಮಾಂಸದ ಮುದ್ದು..ಕೆಲಸಕ್ಕೆ ಬರಲ್ಲ.. ಎಂದಿದ್ದರು
''ನಾನು ನಮ್ಮಮ್ಮ ಅಪ್ಪನಿಗೆ 13ನೇ ಮಗ. ನಾನು ಹುಟ್ಟಿದಾಗ ಎಲ್ಲ ಒಂಬತ್ತು ಗ್ರಹಗಳು ಕೆಟ್ಟ ಕಾಲದಲ್ಲಿ ಇತ್ತು ಎಂದು ಹೇಳಿ ನನ್ನನ್ನು ಎಲ್ಲರೂ ದೂರ ಇಟ್ಟಿದ್ದರು. ನಾನು ಹುಟ್ಟಿದ ಒಂದು ತಿಂಗಳಿಗೆ smallpox ಬಂತು. ಆಗ ನನ್ನ ಮೂಗು, ಹಲ್ಲು, ಬಾಯಿ ತುಂಬ ಮೃದು ಆಗಿ, ಯಾವ ಕಡೆ ತಿರುಗಿಸಿದರು ಆ ಕಡೆ ಬರುವ ಹಾಗಿತ್ತು. ಆಗ ಈ ಮಗು ಮಾಂಸದ ಮುದ್ದೆ.. ಇದು ಕೆಲಸಕ್ಕೆ ಬರಲ್ಲ.. ಎಂದು ಎಲ್ಲರೂ ಹೇಳಿದ್ದರು.''- ಹಂಸಲೇಖ, ಸಂಗೀತ ನಿರ್ದೇಶಕ

ಸಾಯುತ್ತಿರುವ ಮಗುವಿಗೆ ಜೀವ ಬರಿಸಿದಳು
''ನನ್ನನ್ನು ಎಲ್ಲರೂ ದೂರ ಮಾಡಿದ್ದರು. ಆದರೆ ನಮ್ಮ ತಾಯಿ ನನ್ನ ಮಗ ಮಾಂಸದ ಮುದ್ದೆ ಅಲ್ಲ ಎಂದು ಸಣ್ಣ ಕೋಣೆಯಲ್ಲಿ ನನ್ನ ದೇಹವನ್ನು ಆರು ತಿಂಗಳು ನೋಡಿಕೊಂಡಳು. ಹತ್ತಿಯಲ್ಲಿ ಹಾಲನ್ನು ಬಾಯಿಗೆ ಹಾಕುತ್ತಿದ್ದಳು. ನನ್ನ ಮೂಗನ್ನು ಬಾಯನ್ನು ಸರಿ ಮಾಡುತ್ತಿದ್ದಳು. ಹೀಗೆ ಆರು ತಿಂಗಳು ಮಾಡಿ ಸಾಯುತ್ತಿರುವ ಮಗುವಿಗೆ ಜೀವ ಬರಿಸಿದಳು.'' - ಹಂಸಲೇಖ, ಸಂಗೀತ ನಿರ್ದೇಶಕ

ಸ್ಟಾರ್ ಆದ ನಂತರ ಸಿಕ್ಕ ಸಂಖ್ಯಾಶಾಸ್ತ್ರಜ್ಞರು
''ಒಮ್ಮೆ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞರಾದ ಶಕುಂತಲ ದೇವಿ ಅವರು ಸಿಕ್ಕಿದರು. ಆಗ ಅವರು ಹಂಸಲೇಖ ಅವರೇ ನಿಮ್ಮ ಹುಟ್ಟಿದ ದಿನ, ಸಮಯ ಎಲ್ಲ ನೋಡಿದ್ದೇನೆ ಅದು ತುಂಬ ಕೆಟ್ಟದ್ದಾಗಿದೆ. ಆದರೂ ನೀವು ದೊಡ್ಡ ಸ್ಟಾರ್ ಆಗಿದ್ದೀರಾ. ಸಂಖ್ಯಾಶಾಸ್ತ್ರದ ಪ್ರಕಾರ ನೀವು ಸಾಯಬೇಕಿತ್ತು. ಇದಕ್ಕೆಲ್ಲ ನೋಡಿ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಎಂದರು.'' - ಹಂಸಲೇಖ, ಸಂಗೀತ ನಿರ್ದೇಶಕ

ತನ್ನ ಬಾಣಂತನವನ್ನು ತಾನೇ ಮಾಡಿಕೊಂಡಿದ್ದಳು
''ನಮ್ಮಮ್ಮ ತನ್ನ ಬಾಣಂತನವನ್ನು ತಾನೇ ಮಾಡಿಕೊಂಡಿದ್ದಳು. ಆಕೆಯೇ ಬಾವಿಯಲ್ಲಿ ನೀರು ತಂದು ಸ್ನಾನ ಮಾಡಿ ಮಗುವನ್ನು ನೋಡಿಕೊಳ್ಳತ್ತಿದ್ದಳು. ಅವರ ಶಕ್ತಿ, ಮಕ್ಕಳ ಮೇಲಿನ ಪ್ರೀತಿ, ಒಂದು ಜೀವವನ್ನು ಕಾಪಾಡಲೇ ಬೇಕು ಎನ್ನುವ ಆಲೋಚನೆ ನಿಜಕ್ಕೂ ದೊಡ್ಡದು. ಅದು ಎಲ್ಲ ತಾಯಂದರಿಗೆ ಇರುತ್ತದೆ.'' - ಹಂಸಲೇಖ, ಸಂಗೀತ ನಿರ್ದೇಶಕ

ತಾಯಿ ಜಾತಕಕ್ಕಿಂತ ದೊಡ್ಡವಳು
''ಪ್ರತಿ ಜಾತಕ ಮನುಷ್ಯನ ಜ್ಞಾನಕ್ಕೆ ಎಟುಕಿದ ಲೆಕ್ಕಾಚಾರ. ಆದರೆ ಅದಕ್ಕೆ ಮೇಲೆ ಭಗವಂತ, ಗುರು ಅದಕ್ಕೂ ಹೆಚ್ಚಾಗಿ ಒಬ್ಬ ತಾಯಿ ಇದ್ದಾಳೆ. ನಾನು ಕೆಟ್ಟ ಕಾಲದಲ್ಲಿ ಹುಟ್ಟಿರಬಹುದು, ಜೊತೆಗೆ ನಾನು ಸಾಯಬೇಕಾಗಿತ್ತು ನಿಜ ಆದರೆ ತಾಯಿ ಎನ್ನುವುವವಳು ಸೃಷ್ಟಿ ನಿಯಮವನ್ನು ಬದಲಿಸಿ ನನ್ನನ್ನು ಇಲ್ಲಿ ತಂದು ಕೂರಿಸಿದ್ದಾಳೆ.'' - ಹಂಸಲೇಖ, ಸಂಗೀತ ನಿರ್ದೇಶಕ


Click it and Unblock the Notifications











