'ಇಂಡಿಯನ್' ಶೋ ಗೆದ್ದ ಪ್ರದೀಪ ಅಲಿಯಾಸ್ ಸುನಾಮಿ ಕಿಟ್ಟಿ
'Incredible ಇಂಡಿಯಾದಲ್ಲೊಂದು Impossible ಜರ್ನಿ' ಎಂಬ ಅಡಿಬರಹವಿದ್ದ ಈ ಟಿವಿ ವಾಹಿನಿಯ ಇಂಡಿಯನ್ ರಿಯಾಲಿಟಿ ಶೋನ ಚಾಂಪಿಯನ್ ಆಗಿ ಸುನಾಮಿ ಕಿಟ್ಟಿ ಹೊರ ಹೊಮ್ಮಿದ್ದಾರೆ. ಗ್ರ್ಯಾಂಡ್ ಫಿನಾಲೆ ಎಪಿಸೋಡು ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮುನ್ನ ಕಿಟ್ಟಿ ವಿಜೇತನಾಗಿರುವ ಸುದ್ದಿ ಸೋರಿಕೆಯಾಗಿದೆ. ಎಚ್ ಡಿ ಕೋಟೆಯಲ್ಲಿ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ ಸುನಾಮಿ ಕಿಟ್ಟಿಗೆ 10 ಲಕ್ಷ ರೂ.ಗಳ ನಗದು ಬಹುಮಾನ ಮೊತ್ತ ಸಿಕ್ಕಿದೆ.
ರಾಜ್ಯದ ಮೂಲೆ ಮೂಲೆಗಳಿಂದ 14 ಜನರ ತಂಡ ರಚಿಸಿ ಏಳು ರಾಜ್ಯಗಳಲ್ಲಿ 90 ದಿನಗಳ ಕಾಲ ನಡೆಸಿದ ಇಂಡಿಯನ್ ರಿಯಾಲಿಟಿ ಶೋನಲ್ಲಿ ಎಚ್ ಡಿ ಕೋಟೆಯ ದೇವಮ್ಮ ಅವರ ಪುತ್ರ ಪ್ರದೀಪ್ ಅಲಿಯಾಸ್ ಸುನಾಮಿ ಕಿಟ್ಟಿ 'ಇಂಡಿಯನ್' ಆಗಿದ್ದಾನೆ.
ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ಸಿನ ನಂತರ ಈಟಿವಿಯಲ್ಲಿ ಆರಂಭಗೊಂಡಿರುವ ಮತ್ತೊಂದು ರಿಯಾಲಿಟಿ ಶೋ ಭರ್ಜರಿ ಆರಂಭದ ನಂತರ ತುಸು ಮಂಕಾದಂತೆ ಕಂಡು ಬಂದಿತ್ತು. ಕಿರುತೆರೆಯ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಅವರು ನಿರೀಕ್ಷೆಯಂತೆ ಹಳೆ ಚಾಳಿ ಮುಂದುವರೆಸಿದರೆ, ಸ್ಪರ್ಧಿಗಳು ರಿಹರ್ಸಲ್ ಮಾಡಿಕೊಂಡು ಕಿತ್ತಾಟವಾಡಿದಂತೆ ಬಹುತೇಕ ಎಪಿಸೋಡುಗಳಲ್ಲಿ ಕಂಡು ಬಂದಿತ್ತು.
ರಾಟೆ, ಮಾರ್ಷಲ್ ಆರ್ಟ್ಸ್, ದೊಣ್ಣೆ ವರಸೆ, ಕತ್ತಿ ವರಸೆ ಹಾಗೂ ಇನ್ನಿತರ ಕೌಶಲ್ಯಗಳನ್ನು ತಿಳಿದಿರುವ ಸುನಾಮಿ ಕಿಟ್ಟಿ ಕೂಡಾ ಕಾಡಿನ ಕೂಸಾಗಿದ್ದಾನೆ. ನಾಗರಿಕ ಸಮಾಜದ ಥಳಕು ಬಳಕು ತಿಳಿಯದ ಅಮಾಯಕನಾಗಿದ್ದಾನೆ. ಹೌದು ಜಂಗಲ್ ಜಾಕಿ ಖ್ಯಾತಿಯ ರಾಜೇಶ್ ಹಳ್ಳಿ ಹೈದ ಪ್ಯಾಟೆಗೆ ಬಂದ ರಿಯಾಲಿಟಿ ಶೋ ಗೆದ್ದು ಹೆಗ್ಗಡದೇವನ ಕೋಟೆ ತಾಲೂಕಿಗೆ ಕೀರ್ತಿ ತಂದ ರೀತಿಯಲ್ಲೇ ಪ್ರದೀಪ ಅಲಿಯಾಸ್ ಸುನಾಮಿ ಕಿಟ್ಟಿ ಮಿಂಚಿದ್ದಾನೆ. ಮುಂದೇನು ದೇವರೇ ಬಲ್ಲ. ಇಂಡಿಯನ್ ಜರ್ನಿ ಮುಂದೆ ಓದಿ..

ಶೋ ವಿಜೇತರು
ಇಂಡಿಯನ್ ಶೋನಲ್ಲಿ ಕೊನೆ ವಾರದಲ್ಲಿ ಸ್ಪರ್ಧಿಗಳಾಗಿ ಸುನಾಮಿ ಕಿಟ್ಟಿ, ಭುವನ್, ಪ್ರಾರ್ಥನಾ, ರೂಪಾ, ವಿನೋದ್ ಮಾತ್ರ ಉಳಿದಿದ್ದರು. ಈ ಪೈಕಿ ಸುನಾಮಿ ಕಿಟ್ಟಿ ತನ್ನ ನೆಚ್ಚಿನ ಟಾಸ್ಕ್ ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಆಗಿದ್ದಾನೆ. ಎರಡನೇ ಸ್ಥಾನವನ್ನು ವಿನೋದ್ ಹಾಗೂ ಮೂರನೇ ಸ್ಥಾನವನ್ನು ಪ್ರಾರ್ಥನಾ ಪಡೆದುಕೊಂಡಿದ್ದಾರೆ.
ಕಳೆದ ತಿಂಗಳಿನಿಂದ ಶೋ ನೋಡುತ್ತಿದ್ದವರಿಗೆ ಸುನಾಮಿ ಕಿಟ್ಟಿ ಗೆಲ್ಲುವುದು ಬಹುತೇಕ ಖಚಿತ ಎನ್ನಿಸಿತ್ತು. ಪ್ರಬಲ ಸ್ಪರ್ಧಿ ಮಹೇಶ್, ಶಿವಮೊಗ್ಗದ ಪ್ರದೀಪ್ ಆಗಲಿ ಸ್ಪರ್ಧೆಯಿಂದ ಹೊರ ಬಿದ್ದಿರುವುದು ಕಿಟ್ಟಿಗೆ ಕಿರೀಟ ತೊಡೆಸಿದೆ

ಎಚ್ ಡಿ ಕೋಟೆ ಎರಡನೇ ಕಲಿ
ಹಿಂದುಳಿದ ತಾಲೂಕಿನ ಹಣೆಪಟ್ಟಿಗೆ ಕಾಡು ಕುರುಬನೊಬ್ಬ ಕಿರುತೆರೆಯ ಮೂಲಕ ತನ್ನದೆ ಆದ ಶೈಲಿಯಿಂದ ಗೌರವ ತಂದುಕೊಟ್ಟ ದಿವಂಗತ ರಾಜೇಶನ ನೆನಪನ್ನು ಸುನಾಮಿಕಿಟ್ಟಿ ತಂದು ಕೊಟ್ಟಿದ್ದಲ್ಲದೆ ಇಂಡಿಯನ್ ಶೋ ಗೆಲ್ಲುವ ಮೂಲಕ ಎಚ್ ಡಿ ಕೋಟೆ ತಾಲೂಕಿನತ್ತ ಜನ ಮತ್ತೆ ತಿರುಗಿ ನೋಡುವಂತೆ ಮಾಡಿದ್ದಾನೆ.
ತಾಲೂಕಿನ ಬಳ್ಳೆಯ ಗಿರಿಜನ ಹಾಡಿಯ ರಾಜೇಶ ಕಳೆದ ಕೆಲ ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಹಳ್ಳಿಹೈದ ಪ್ಯಾಟೆಗೆ ಬಂದ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ತಾಲೂಕಿನ ಜನತೆಯ ಮನೆಮಾತಾಗಿದ್ದ ದಿ.ರಾಜೇಶ ಇಂದು ನೆನಪು ಮಾತ್ರ.
ಮೃತ ರಾಜೇಶನ ನೋವನ್ನು ಮರೆಯುವಂತೆ ಸುನಾಮಿಕಿಟ್ಟಿ ಇದೀಗ ತಾಲೂಕಿನ ಎರಡನೆಯ ಪ್ರತಿಭೆಯಾಗಿ ಮೆರೆಯುತ್ತಿದ್ದಾನೆ. ಅದರೆ, ಕಿಟ್ಟಿ ಚಲನಚಿತ್ರ ರಂಗಕ್ಕೆ ಬಂದು ಮತ್ತೊಂದು ದುರಂತ ಕಥೆಗೆ ಮುನ್ನುಡಿಯಾಗದಿರಲಿ ಎಂದು ಜನ ಬಯಸಿದ್ದಾರೆ.

ಕ್ರಿಯೆಟೀವ್ ತಂಡ
ಈಟಿವಿ ಕನ್ನಡದ ಪ್ರೋಗ್ರಾಮಿಂಗ್ ಹೆಡ್ ಪರಮೇಶ್ವರ್ ಗುಂಡ್ಕಲ್ ಕ್ರಿಯೆಟೀವ್ ಹೆಡ್ ರಾಘವೇಂದ್ರ ಹುಣಸೂರು, ನಿರೂಪಕ ಅಕುಲ್ ಬಾಲಾಜಿ.
"ಇಂಡಿಯನ್, ಇದು ಪ್ರವಾಸ ಮತ್ತು ಸಾಹಸದ ಆಕರ್ಷಕವಾದ ಸಂಯೋಜನೆಯಾಗಿದ್ದು, ಎಲ್ಲ ವಯೋಮಾನದವರಿಗೂ ಸೂಕ್ತವಾಗಿದೆ. ಕಾರ್ಯಕ್ರಮವನ್ನು ಭಾರತದ ಉದ್ದಕ್ಕೂ 7 ಬೇರೆ ಬೇರೆ ರಾಜ್ಯಗಳು ಜಮ್ಮು ಕಾಶ್ಮೀರ, ಗುಜರಾತ್, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಅಕುಲ್ ಬಾಲಾಜಿ ಅವರು ನಿರೂಪಕರಾಗಿ ಇರುವುದರೊಂದಿಗೆ ನಾವು ಕಾರ್ಯಕ್ರಮಕ್ಕೆ ಅಗತ್ಯವಾದ ತಂಡವನ್ನು ಹೊಂದಿದ್ದೇವೆ. ಈ ಕಾರ್ಯಕ್ರಮವು ರಾತ್ರಿ 8 ಗಂಟೆಯ ಪ್ರೈಮ್ ಟೈಮ್ ನಲ್ಲಿಯೇ ಪ್ರಸಾರವಾಗಿ ಜನಪ್ರಿಯತೆ ಗಳಿಸಿದೆ" ಎಂದು ಪರಮೇಶ್ವರ್ ಹೇಳಿದ್ದಾರೆ

ನಾನು ಸೋಲಲ್ಲ
ಅಥ್ಲೆಟಿಕ್ಸ್, ವಾಲಿಬಾಲ್ ಆಡಿಕೊಂಡು ರಾಷ್ಟ್ರಮಟ್ಟಕ್ಕೆ ಬೆಳೆದ ಬೆಂಗಳೂರು ಹುಡುಗ ವಿನೋದ್ ಈ ಹಿಂದೆ ಆರ್ಮಿಯಲ್ಲಿದ್ದರು. ಆದರೆ, ಮನೆಯವರ ಒತ್ತಾಯಕ್ಕೆ ಮಣಿದು ವಾಪಸ್ ಬಂದರು. ನಂತರ ಅಂಚೆ ಇಲಾಖೆಯಲ್ಲಿ ವೃತ್ತಿಯಲ್ಲಿದ್ದಾರೆ. ನನಗಿರುವ ಟ್ಯಾಲೆಂಟಿಗೆ ನಾನು ಯಾವತ್ತು ಸೋತಿಲ್ಲ. ನಾನು ಸೋಲಲ್ಲ ಎನ್ನುತ್ತಾರೆ ಎಂದಿದ್ದ ವಿನೋದ್ ಎರಡನೇ ಸ್ಥಾನ ಗಳಿಸಿದ್ದು ಅಚ್ಚರಿ ಎನ್ನಬಹುದು

ಸಮರ್ಥ ಪ್ರಾರ್ಥನಾ
ಲೇಟ್ ಆಗಿ ಬಂದರೂ ಲೇಟೆಸ್ಟ್ ಆಗಿ ಬಂದ ಪ್ರಾರ್ಥನಾ ಅನೇಕ ಟಾಸ್ಕ್ ಗಳಲ್ಲಿ ಗೆದ್ದು ಎಲ್ಲರ ಅಚ್ಚು ಮೆಚ್ಚಿನ ಸ್ಪರ್ಧಿಯಾಗಿದ್ದಳು.ಮುಂಬೈ ಶೋ ನಡುವೆ ಅಪ್ಪನಿಗೆ ಹುಷಾರಿಲ್ಲ ಎಂದು ಮನೆಗೆ ಬಂದಿದ್ದ ಪ್ರಾರ್ಥನಾ ಮರಳಿ ಶೋ ಸೇರಿ ಮೂರನೆ ಸ್ಥಾನ ಗೆದ್ದಿದ್ದು ನಿರೀಕ್ಷಿತ


Click it and Unblock the Notifications











