ಬ್ರಾಹ್ಮಣರ ಬಗ್ಗೆ ಅವಹೇಳನ: ಬೇಷರತ್ ಕ್ಷಮೆ ಕೇಳಿದ 'ಡ್ರಾಮಾ ಜ್ಯೂನಿಯರ್ಸ್' ತಂಡ
ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಡ್ರಾಮಾ ಜ್ಯೂನಿಯರ್ಸ್'ನಲ್ಲಿ ಪುರೋಹಿತರ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣರು ಆಕ್ರೋಶ ವ್ಯಕ್ತಪಡಿಸಿದ್ದರು.
ಬ್ರಾಹ್ಮಣರನ್ನು ಕೀಳಾಗಿ ತೋರಿಸಿರುವ 'ಡ್ರಾಮಾ ಜ್ಯೂನಿಯರ್ಸ್' ಹಾಗೂ ಜೀ ಕನ್ನಡ ವಾಹಿನಿ ಬೇಷರತ್ ಕ್ಷಮೆ ಕೇಳದಿದ್ದರೆ, ಉಗ್ರ ಪ್ರತಿಭಟನೆ ಗ್ಯಾರೆಂಟಿ ಎಂದು ಬ್ರಾಹ್ಮಣ ಸಮುದಾಯ ಎಚ್ಚರಿಕೆ ನೀಡಿತ್ತು.
ಇವೆಲ್ಲವನ್ನು ಗಮನಿಸಿ, ಆಗಿರುವ ತಪ್ಪನ್ನು ಒಪ್ಪಿಕೊಂಡಿರುವ ಜೀ ಕನ್ನಡ ಹಾಗೂ 'ಡ್ರಾಮಾ ಜ್ಯೂನಿಯರ್ಸ್' ತಂಡ ನಿನ್ನೆ ರಾತ್ರಿ 9 ಗಂಟೆಗೆ ಪ್ರಸಾರವಾದ ಸಂಚಿಕೆಯಲ್ಲಿ ಬೇಷರತ್ ಕ್ಷಮೆ ಕೇಳಿ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ಮುಂದೆ ಓದಿರಿ...

ಎಲ್ಲರ ಪರವಾಗಿ ಕ್ಷಮೆ ಕೇಳಿದ ಮಾಸ್ಟರ್ ಆನಂದ್
'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮ ಆರಂಭ ಮಾಡಿ, 'ಡ್ರಾಮಾ ಜ್ಯೂನಿಯರ್ಸ್' ತಂಡ ಹಾಗೂ ಜೀ ಕನ್ನಡ ವಾಹಿನಿ ಪರವಾಗಿ ನಿರೂಪಕ ಮಾಸ್ಟರ್ ಆನಂದ್ ಕ್ಷಮೆ ಕೇಳಿದರು.

ಮಾಸ್ಟರ್ ಆನಂದ್ ಮಾತುಗಳಿವು...
''ನಮ್ಮ ಶೋನಲ್ಲಿ ಡ್ರಾಮಾ ಇದೆ, ರಿಯಾಲಿಟಿ ಇದೆ. ಅವೆಲ್ಲದಕ್ಕೂ ಮೀರಿ Honesty ಇದೆ. ನಿಮ್ಮನ್ನ ರಂಜಿಸೋಕೆ ಸದಭಿರುಚಿಯ ಮನರಂಜನೆ ನೀಡೋಕೆ ನಾವೆಲ್ಲರೂ ಅವಿರತ ಪರಿಶ್ರಮವನ್ನ ಪಡುತ್ತಲೇ ಇರ್ತೀವಿ'' - ಮಾಸ್ಟರ್ ಆನಂದ್, 'ಡ್ರಾಮಾ ಜ್ಯೂನಿಯರ್ಸ್' ನಿರೂಪಕ

ಸಮಾಜದ ಹುಳುಕಿಗೆ ಕನ್ನಡಿ ಹಿಡಿಯುವ ವಿಚಾರಗಳು...
''ನಾವು ಡ್ರಾಮಾಗಳನ್ನ ನಿಮ್ಮ ಮುಂದೆ ತರಬೇಕಾದರೆ, ನಮ್ಮ ಸುತ್ತಮುತ್ತಲಿನ ಸಮಾಜದ ಹುಳುಕಿಗೆ ಕನ್ನಡಿ ಹಿಡಿಯುವಂತಹ ವಿಚಾರಗಳನ್ನ ತಿಳಿ ಹಾಸ್ಯದ ಲೇಪನ ಕೊಟ್ಟು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಲಿರುತ್ತೇವೆ'' - ಮಾಸ್ಟರ್ ಆನಂದ್, 'ಡ್ರಾಮಾ ಜ್ಯೂನಿಯರ್ಸ್' ನಿರೂಪಕ

ಕಣ್ಣಳತೆ, ಊಹೆ ಮೀರಿ...
''ಕಳೆದ ವಾರ ನಾವು ತೆನಾಲಿ ರಾಮನ ಚಿನ್ನದ ಮಾವಿನ ಹಣ್ಣಿನ ಕಥೆಯನ್ನ ಸ್ಫೂರ್ತಿ ಪಡೆದು ಮಕ್ಕಳ ಕೈಯಲ್ಲಿ ಒಂದು ಡ್ರಾಮಾ ಮಾಡಿಸಿದ್ವಿ. ಕೆಲವೊಮ್ಮೆ ಹಾಸ್ಯ ಅನ್ನೋದು ಇದೆ ನೋಡಿ... ಅದನ್ನ ಮಾಡಲು ಹೋದಾಗ ನಮ್ಮ ಕಣ್ಣಳತೆ, ಊಹೆ ಮೀರಿ ಜನರ ಭಾವನೆಗೆ ನೋವು ಆಗ್ಬಿಡುತ್ತೆ. ಕೆಲವರಿಗೆ ಅದು ಅಪರಾಧವಾಗಿ ಕಾಣುತ್ತದೆ'' - ಮಾಸ್ಟರ್ ಆನಂದ್, 'ಡ್ರಾಮಾ ಜ್ಯೂನಿಯರ್ಸ್' ನಿರೂಪಕ

ನಮಗೂ ನೋವಾಗುತ್ತದೆ
''ನಮ್ಮ ಕುಟುಂಬದವರಿಗೆ, ನಮ್ಮ ಸಮಾಜದಲ್ಲಿ ಇರುವ ಯಾರಿಗೇ ಆದರೂ ನಮ್ಮಿಂದ ನೋವು ಆದರೆ, ಅದು ನಮಗೂ ನೋವಾಗುತ್ತದೆ. ಯಾರನ್ನೇ ಕೀಳಾಗಿ ನೋಡುವುದಾಗಲಿ, ಯಾರನ್ನೇ ತೇಜೋವಧೆ ಮಾಡುವುದಾಗಲಿ... ಎಂದಿಗೂ ನಮ್ಮ ಉದ್ದೇಶ ಆಗಿರುವುದಕ್ಕೆ ಸಾಧ್ಯವೇ ಇಲ್ಲ'' - ಮಾಸ್ಟರ್ ಆನಂದ್, 'ಡ್ರಾಮಾ ಜ್ಯೂನಿಯರ್ಸ್' ನಿರೂಪಕ

ದಯವಿಟ್ಟು ಕ್ಷಮಿಸಿ
''ನಮ್ಮ ಡ್ರಾಮಾದಿಂದ ನಿಮ್ಮಲ್ಲಿ ಯಾರಿಗೇ ಆಗಲಿ, ಯಾವುದೇ ಸಮುದಾಯದವರಿಗೆ ಆಗಿರಲಿ... ಬೇಸರ ಆಗಿದ್ದರೆ ನಾವು ಈ ವೇದಿಕೆಯಿಂದಲೇ ಬೇಷರತ್ ಕ್ಷಮೆ ಕೇಳುತ್ತಿದ್ದೇವೆ. ಅದರಲ್ಲಿ ಯಾವುದೇ ಸಂಕೋಚ ಇಲ್ಲ. ಅವಮಾನ ಕೂಡ ಇಲ್ಲ. ದಯವಿಟ್ಟು ಕ್ಷಮಿಸಿ....'' - ಮಾಸ್ಟರ್ ಆನಂದ್, 'ಡ್ರಾಮಾ ಜ್ಯೂನಿಯರ್ಸ್' ನಿರೂಪಕ

ಕ್ಷಮೆ ಕೇಳಿ ಟಿ.ಎನ್.ಸೀತಾರಾಂ
ತೀರ್ಪುಗಾರರ ಪರವಾಗಿ ಮಾತನಾಡಿದ ಟಿ.ಎನ್.ಸೀತಾರಾಂ, ''ಇಲ್ಲಿಯವರೆಗೂ ಎರಡೂ ಸೀಸನ್ ಗಳಲ್ಲಿ 167 ಸ್ಕಿಟ್ ಗಳನ್ನು ಮಾಡಿದ್ದೇವೆ. ಅದರಲ್ಲಿ ಅನೇಕ ಸ್ಕಿಟ್ ಗಳು ಹಲವರಿಗೆ ಪ್ರಿಯವಾಗಿ, ಇಂತಹದ್ದು ಸಮಾಜಕ್ಕೆ ಬರಬೇಕು ಅಂತ ಹೇಳಿದ್ದಾರೆ. ಯಾಕಂದ್ರೆ, ಸ್ಫೂರ್ತಿ ನೀಡುವ, ದೇಶಭಕ್ತಿ ಸಾರುವ ಒಳ್ಳೆಯ ಸ್ಕಿಟ್ ಗಳನ್ನು ಮಾಡಿಕೊಂಡು ಬಂದಿದ್ದೇವೆ. ಮಧ್ಯದಲ್ಲಿ ಇಂಥದ್ದೊಂದು ಹಾಸ್ಯ ಅನಿಸಿದ್ದು, ಲೇವಡಿ ಹಾಗೆ ಕಾಣಿಸಿದ್ದರೆ, ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ನಮ್ಮ ಕಡೆಯಿಂದ ಕ್ಷಮೆ ಕೇಳುತ್ತೇವೆ'' ಎಂದರು


Click it and Unblock the Notifications











