ಕನ್ನಡ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಎಲ್ಲವೂ ಸರಿ ಇದ್ಯಾ?
ತಿಂಗಳುಗಳಿಂದ ಕನ್ನಡ ಕಿರುತೆರೆ ಪ್ರಿಯರು ಕಾತರದಿಂದ ಕಾಯುತ್ತಿದ್ದ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿ ಶುರುವಾಗಿದೆ. ಎಂದಿನಂತೆ ಕಿಚ್ಚ ಸುದೀಪ್ ಈ ಬಾರಿಯೂ ಶೋ ಹೋಸ್ಟ್ ಮಾಡುತ್ತಿದ್ದಾರೆ.
ಇಲ್ಲಿಯವರೆಗೂ 'ಬಿಗ್ ಬಾಸ್-3' ಕಾರ್ಯಕ್ರಮದ ಸ್ಪರ್ಧಿಗಳು ಯಾರ್ಯಾರು ಅನ್ನುವ ಬಗ್ಗೆ ಕರ್ನಾಟಕದ ಮೂಲೆಮೂಲೆಯಲ್ಲೂ ಬಿಸಿ ಬಿಸಿ ಚರ್ಚೆ ಆಗುತ್ತಿತ್ತು. ಯಾರು ಇರ್ಲಿ, ಬಿಡ್ಲಿ 'ಹುಚ್ಚ ವೆಂಕಟ್' ಇರ್ಲೇಬೇಕು ಅಂತ ವೀಕ್ಷಕರ ಒತ್ತಾಯ ಮಾಡಿದ ಮೇರೆಗೆ 'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಕಾಲಿಟ್ಟಿದ್ದಾರೆ. [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]
ಇದು ಅನೇಕರಿಗೆ ಖುಷಿ ವಿಷಯ. ಯಾಕಂದ್ರೆ, ಹುಚ್ಚ ವೆಂಕಟನ ಹುಚ್ಚಾಟವನ್ನ ಪ್ರತಿದಿನ ನೋಡಬಹುದಲ್ಲಾ ಅನ್ನೋದು ಎಲ್ಲರ ಲೆಕ್ಕಾಚಾರ. ಆದ್ರೆ, ಬಾಕಿ ಸ್ಪರ್ಧಿಗಳ ಬಗ್ಗೆ ವೀಕ್ಷಕರಿಗೆ ಅಷ್ಟಾಗಿ ಕುತೂಹಲ ಇರ್ಲಿಲ್ಲ. ಇದಕ್ಕೆ ಕಾರಣ, ವಾಹಿನಿ ಮೂಲಗಳಿಂದ ಲೀಕ್ ಆಗಿದ್ದ 'ಬಿಗ್ ಬಾಸ್-3' ಸ್ಪರ್ಧಿಗಳ ಲಿಸ್ಟ್. ಮುಂದೆ ಓದಿ...

ಆಗಾಗ ಲೀಕ್ ಆಗುತ್ತಿದ್ದ ಲಿಸ್ಟ್.!
'ಬಿಗ್ ಬಾಸ್-3' ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ಕೆಲಸಗಳು ಚಾಲನೆಗೊಂಡಾಗಿನಿಂದಲೂ, ಸ್ಪರ್ಧಿಗಳ ಬಗ್ಗೆ ಎಲ್ಲಾ ಕಡೆ ಲೆಕ್ಕಾಚಾರಗಳು ನಡೆಯುತ್ತಲೇ ಇದ್ದವು. ಆಗಾಗ, 'ಇವರೆಲ್ಲಾ' ಇರಲಿದ್ದಾರೆ ಅಂತ 'ಬಿಗ್ ಬಾಸ್-3' ಸಂಭಾವ್ಯ ಪಟ್ಟಿ ಬಿಡುಗಡೆ ಆಗುತ್ತಲೇ ಇತ್ತು. ['ಬಿಗ್ ಬಾಸ್ 3' ಎಲ್ಲಾ 15 ಸ್ಪರ್ಧಿಗಳ ಕಿರು ಪರಿಚಯ]

ಈ ಬಾರಿ ನಿಜವಾಗಿತ್ತು.!
ಇದೆಲ್ಲಾ ಗಾಸಿಪ್ ಅಂತಲೇ ಎಲ್ಲರೂ ಪರಿಗಣಿಸಿದ್ದರು. ಆದ್ರೆ, ನಿನ್ನೆ ಮುಂಜಾನೆ ಲೀಕ್ ಆಗಿದ್ದ ಲಿಸ್ಟ್ ನಲ್ಲಿ 'ಬಿಗ್ ಬಾಸ್-3' ಮನೆ ಒಳಗಡೆ ಹೋಗಿದ್ದ ಸ್ಫರ್ಧಿಗಳ ಹೆಸರಿತ್ತು. ಲೀಕ್ ಆಗಿದ್ದ ಲಿಸ್ಟ್ ನಲ್ಲಿದ್ದ ಕರೆಕ್ಟ್ ಆರ್ಡರ್ ನಲ್ಲೇ ಕಾರ್ಯಕ್ರಮದ ಶುರುವಾಯ್ತು.!

ಏನೇ ಆದರೂ ಸರ್ಧಿಗಳ ಗುಟ್ಟು ಬಿಟ್ಟುಕೊಡೋಲ್ಲ
'ಬಿಗ್ ಬಾಸ್-3' ಕಾರ್ಯಕ್ರಮದ ಪರವಾಗಿ ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆದಿತ್ತು. ಅದರಲ್ಲಿ ಸ್ಪರ್ಧಿಗಳ ಗುಟ್ಟನ್ನ ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಬಿಟ್ಟುಕೊಡಲಿಲ್ಲ. ''ಕಾರ್ಯಕ್ರಮವನ್ನೇ ನೋಡೇ ತಿಳಿದುಕೊಳ್ಳಿ ಇಲ್ಲಾಂದ್ರೆ ಚೆನ್ನಾಗಿರೋಲ್ಲ'' ಅಂತ ಹೇಳಿದ್ರು.

ಗೊತ್ತಾದ್ರೆ ಮಜಾ ಇರೋಲ್ಲ ಅಂತ ಸುದೀಪ್ ಹೇಳಿದ್ರು.!
''ಕಾರ್ಯಕ್ರಮ ಲಾಂಚ್ ಆಗುವ ಮುನ್ನವೇ ಸ್ಪರ್ಧಿಗಳು ಯಾರು ಅಂತ ಗೊತ್ತಾದ್ರೆ, ಶೋ ನೋಡೋಕೆ ಮಜಾ ಇರೋಲ್ಲ. ಹೀಗಾಗಿ ಸ್ಪರ್ಧಿಗಳ ಹೆಸರನ್ನ ಕೇಳ್ಬೇಡಿ'' ಅಂತ ಸುದೀಪ್ ಹೇಳಿದ್ರು. ಹೀಗಿದ್ದರೂ, ವಾಹಿನಿ ಕಡೆಯಿಂದ ಲಿಸ್ಟ್ ಲೀಕ್ ಆಗೇಹೋಯ್ತು.!

ಸ್ಪರ್ಧಿಗಳಿಗೂ ಮೊದಲೇ ಗೊತ್ತಿತ್ತಾ?
ಅಸಲಿ ಆಟ ಏನಂದ್ರೆ, 'ಬಿಗ್ ಬಾಸ್' ಮನೆ ಒಳಗೆ ಕಾಲಿಡುವವರೆಗೂ ಯಾರ್ಯಾರು ಸ್ಪರ್ಧಿಸುತ್ತಾರೆ ಅನ್ನೋದು ಸ್ವತಃ ಸ್ಪರ್ಧಿಗಳಿಗೇ ಗೊತ್ತಿರಬಾರದು. ಆದ್ರೆ, ನಿನ್ನೆ ಪ್ರಸಾರವಾದ ಕಾರ್ಯಕ್ರಮದಲ್ಲಿ ಕೆಲವರಿಗೆ ಕೆಲವರ ಆಗಮನ ಖಚಿತವಾಗಿ ಗೊತ್ತಿದ್ದಂತೆ ಕಾಣ್ತಿತ್ತು.

ಸುನಾಮಿ ಕಿಟ್ಟಿ-ಮಾಸ್ಟರ್ ಆನಂದ್.!
Contestant ನಂಬರ್ 1 ಆಗಿ ಸುನಾಮಿ ಕಿಟ್ಟಿ ಎಂಟ್ರಿಪಡೆದುಕೊಂಡರು. Contestant ನಂಬರ್ 15 ಆಗಿ ಮಾಸ್ಟರ್ ಆನಂದ್ ಬಂದರು. ಮಾಸ್ಟರ್ ಆನಂದ್ ಬರುತ್ತಿದ್ದಂತೆಯೇ, ಸುನಾಮಿ ಕಿಟ್ಟಿ ''ಇಷ್ಟು ಲೇಟ್ ಆಗಿ ಬರ್ತಿದ್ದೀರಾ'' ಅಂತ ಕೇಳಿದ್ರು. ಹಾಗಾದ್ರೆ, ಸುನಾಮಿ ಕಿಟ್ಟಿಗೆ ಮಾಸ್ಟರ್ ಆನಂದ್ ಸ್ಪರ್ಧಿ ಅನ್ನೋದು ಮೊದಲೇ ಗೊತ್ತಿತ್ತಾ?

ಮೊದಲೇ ಗೊತ್ತಿದ್ರೆ, ಪ್ಲಾನ್ ಮಾಡಬಹುದಲ್ಲಾ?
'ಬಿಗ್ ಬಾಸ್' ಮನೆ ಮೂಲೆ ಮೂಲೆಯಲ್ಲೂ ಕ್ಯಾಮರಾ ಕಣ್ಗಾವಲು ಇದೆ. ಹೀಗಾಗಿ ಮನೆಯಲ್ಲಿ ಎಲಿಮಿನೇಷನ್ ಬಗ್ಗೆ ಯಾರೂ ಪ್ಲಾನ್ನಿಂಗ್, ಪ್ಲಾಟಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. ಸ್ಪರ್ಧಿಗಳಿಗೆ ಮೊದಲೇ ಗೊತ್ತಿದ್ದರೆ, ಪ್ಲಾನ್ ಮಾಡಿಕೊಂಡು ಇಲ್ಲಿ ಚೆನ್ನಾಗಿ ಆಡಬಹುದು. ಇದರಿಂದ ಆಟ ಕೆಡುತ್ತೆ ಅಲ್ವೇ?

ಮಾಧುರಿಗೆ ಹುಚ್ಚ ವೆಂಕಟ್ ಕಂಡ್ರೆ ಭಯ.!
ಸಂಭಾವ್ಯ ಪಟ್ಟಿಯ ಪೈಕಿ ನಿಮಗೆ ಯಾರ ಕಂಡ್ರೆ ಭಯ ಅಂತ ಕಿಚ್ಚ ಸುದೀಪ್, ಮಾಧುರಿ ಇಟಗಿಯವರನ್ನ ಕೇಳಿದಾಗ, ''ಮಿಸ್ಟರ್ ವೆಂಕಟ್ ಕಂಡ್ರೆ ಭಯ'' ಅಂತ ಹೇಳಿದ್ರು.

ಮೊಬೈಲ್ ಬಗ್ಗೆ ಮಾತು?
ಸ್ಪರ್ಧಿಗಳು ಬೆಡ್ ರೂಮ್ ಒಳಗೆ ಹೆಜ್ಜೆ ಹಾಕುತ್ತಿದ್ದಂತೆ, ಎಲ್ಲಾ ಲೈಟ್ಸ್ ಆಫ್ ಆಯ್ತು. ಆಗ, ''ಯಾರ್ದಾದ್ರೂ ಫೋನ್ ನಲ್ಲಿ ಟಾರ್ಚ್ ಇದ್ಯಾ'' ಅಂತ ಒಬ್ಬರು ಕೇಳಿದ್ರು. ಅದಕ್ಕೆ ''ಅಯ್ಯೋ...ಮೊಬೈಲ್ ಇಲ್ಲ'' ಅಂತ ಉತ್ತರ ಬಂತು.

ಶೋನಲ್ಲಿ ಎಲ್ಲವೂ ಸರಿ ಇದ್ಯಾ?
ಈ ಹಿಂದೆ 'ಬಿಗ್ ಬಾಸ್' ಕಾರ್ಯಕ್ರಮ ಪೂಣೆ ಸಮೀಪದ ಲೋನಾವಾಲಾದಲ್ಲಿ ನಡೆಯುತ್ತಿತ್ತು. ಹೀಗಾಗಿ ಇಲ್ಲಿನವರಿಗೆ, ಸ್ಪರ್ಧಿಗಳು ಯಾರ್ಯಾರು, ಈ ವಾರ ಯಾರು ಔಟ್ ಆಗುತ್ತಾರೆ ಅಂತ ಅಷ್ಟು ಬೇಗ ಗೊತ್ತಾಗುತ್ತಿರಲಿಲ್ಲ. ಆದ್ರೆ, ಬಾರಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಪ್ರೀಮಿಯರ್ ಶೋ ಶೂಟಿಂಗ್ ಎರಡು ದಿನಗಳ ಹಿಂದೆ ಮುಗಿದಿದೆ. ಇದರಿಂದ ಲಿಸ್ಟ್ ಲೀಕ್ ಆಗಿದೆ.

ಚಾನೆಲ್ ಹೆಚ್ಚು ಜಾಗರೂಕತೆ ವಹಿಸಬೇಕು.!
ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. 'ವಾರದ ಕಥೆ ಕಿಚ್ಚನ ಕತೆ' ಚಿತ್ರೀಕರಣ ನಡೆಯುವಾಗ ಯಾರು ಬೇಕಾದರೂ ಹೋಗಿ ವೀಕ್ಷಿಸಬಹುದು. ಹೀಗಾಗಿ ವಾರದಲ್ಲಿ ಔಟ್ ಆಗುವುದು ಯಾರು ಅನ್ನೋದು ಅಲ್ಲಿ ನೋಡುವವರಿಗೆ ಮೊದಲೇ ಗೊತ್ತಿರುತ್ತದೆ. ಶೋ ಪ್ರಸಾರವಾಗುವುದಕ್ಕೂ ಮುನ್ನವೇ ಯಾರು ಔಟ್ ಅಂತ ಗೊತ್ತಾದರೆ, ವೀಕ್ಷಕರ ಸಂಖ್ಯೆ ಕಡಿಮೆ ಆಗುವುದು ಖಂಡಿತ. ಇದರಿಂದ ಚಾನೆಲ್ ಟಿ.ಆರ್.ಪಿಗೇ ಏಟು. ಹೀಗಾಗಿ ಕಲರ್ಸ್ ಕನ್ನಡ ವಾಹಿನಿ ಹೆಚ್ಚು ಜಾಗರೂಕತೆ ವಹಿಸಿದರೆ ಒಳಿತು.


Click it and Unblock the Notifications











