ವೀಕ್ಷಕರಿಗೆ ನಿರಾಸೆ.. 'ಜೊತೆ ಜೊತೆಯಲಿ' ಧಾರಾವಾಹಿ ಕಥೆ ಮುಗೀತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸದ್ಯ ಅನು ಆರ್ಯನನ್ನು ಬಿಟ್ಟು ಹೊರಟಿದ್ದಾಳೆ. ಆರಾಧನಾ ಜೊತೆಗೆ ಆರ್ಯನಿಗೆ ಹೊಸ ಜೀವನ ಪ್ರಾರಂಭಿಸಲಿ ಎಂದು ಬಯಸಿದ್ದಾಳೆ.
ಆರ್ಯನನ್ನು ಬೇಕಂತಲೇ ಅನು ಬಿಟ್ಟು ಕೊಡುತ್ತಿರುವುದು ಯಾರಿಗೂ ಇಷ್ಟವಿಲ್ಲ. ಹಾಗಿದ್ದರೂ ಹಠ ಬಿಡದ ಅನು, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾಳೆ.
ಆರಾಧನಾಳಿಗೂ ವಿಶ್ವಾಸ್ ದೇಸಾಯಿ ಸಾವನ್ನಪ್ಪಿದ್ದಾನೆ ಎಂದೂ ಯಾರು ಸರಿಯಾಗಿ ಅರ್ಥ ಮಾಡಿಸಲಿಲ್ಲ. ಈಗ ಹೇಳುವುದನ್ನು ಕೇಳುವುದಕ್ಕೆ ಆರಾಧನಾ ತಯಾರಿಲ್ಲ. ನಿಜ ಹೇಳಬೇಕು ಅಂದರೆ ಧಾರಾವಾಹಿ ಕಥೆ ಗೊಂದಲಮಯವಾಗಿದೆ.

ಅನಿರುದ್ಧ್ ಹೊರನಡೆದಿದ್ದೇ ತಪ್ಪಾಯ್ತಾ..?
'ಜೊತೆ ಜೊತೆಯಲಿ' ಧಾರಾವಾಹಿ ಮುಗಿಯುವ ಹಂತ ತಲುಪಿದೆ ಎಂಬ ಅನುಮಾನ ಶುರುವಾಗಿದೆ. ಧಾರಾವಾಹಿ ನಿರ್ಮಾಣ ಸಂಸ್ಥೆಯೊಂದಿಗೆ ಅನಿರುದ್ಧ್ ಅವರು ಮನಸ್ತಾಪ ಮಾಡಿಕೊಂಡಿದ್ದರು. ಇದು ಎಲ್ಲೆಡೆ ಸುದ್ದಿಯಾಗಿ, ಕೊನೆಗೆ ಆರ್ಯವರ್ಧನ್ ಪಾತ್ರದಿಂದ ಅನಿರುದ್ಧ್ ಅವರನ್ನು ಹೊರಗಿಡಲಾಯಿತು. ಕೆಲ ಅಭಿಮಾನಿಗಳು ನಿರ್ಮಾಣ ಸಂಸ್ಥೆಯ ತೀರ್ಮಾನವನ್ನು ಒಪ್ಪಲಿಲ್ಲ. ಆರ್ಯವರ್ಧನ್ ಪಾತ್ರವನ್ನು ಅನಿರುದ್ಧ್ ಅವರೇ ಮುಂದುವರಿಸಬೇಕು ಎಂದು ಒತ್ತಾಯ ಮಾಡಿದರು. ಆದರೂ, ನಿರ್ಮಾಣ ಸಂಸ್ಥೆ ಮತ್ತೆ ಅನಿರುದ್ಧ್ ಅವರನ್ನು ಸೇರಿಸಿಕೊಳ್ಳಲಿಲ್ಲ. ಧಾರಾವಾಹಿಯಿಂದ ಅನಿರುದ್ಧ್ ಜತ್ಕರ್ ಹೊರ ನಡೆದ ಮೇಲೆ ಕೆಲವರು ಸೀರಿಯಲ್ ನೋಡುವುದನ್ನೇ ಕಡಿಮೆ ಮಾಡಿದ್ದರು.

ವೀಕ್ಷಕರಿಗೆ ಶುರುವಾಯಿತು ಬೇಸರ
ಅಕ್ಟೋಬರ್ ತಿಂಗಳಿನಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಶುರುವಾಯಿತು. ಅದಕ್ಕಾಗಿ 'ಜೊತೆ ಜೊತೆಯಲಿ' ಧಾರಾವಾಹಿ ಸ್ಲಾಟ್ ಬದಲಾಯಿತು. 'ಜೊತೆ ಜೊತೆಯಲಿ' ಧಾರಾವಾಹಿ 8.30 ರಿಂದ 9.30ಕ್ಕೆ ಬದಲಾಯ್ತು. ಧಾರಾವಾಹಿ ಪ್ರಸಾರದ ಸಮಯ ಬದಲಾದ ಕಾರಣ ನೋಡುವವರ ಸಂಖ್ಯೆ ಮತ್ತಷ್ಟು ಕಡಿಮೆ ಆಗಿತ್ತು. ಇದೆಲ್ಲದರ ಜೊತೆಗೆ ಧಾರಾವಾಹಿಯ ಕಥೆಯೂ ವೀಕ್ಷಕರ ನಿರೀಕ್ಷೆಯನ್ನು ಹುಸಿ ಮಾಡಿತು. ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟನನ್ನು ನೇರವಾಗಿ ಕರೆ ತರಬಹುದಿತ್ತು. ಬದಲಿಗೆ, ಅದಕ್ಕಾಗಿ ಮತ್ತಷ್ಟು ಪಾತ್ರಗಳನ್ನು ಸೃಷ್ಟಿಸಲಾಯ್ತು. ಇದೆಲ್ಲವೂ ವೀಕ್ಷಕರಿಗೆ ಬೇಸರ ತಂದಿತು.

ನಾಗಿಣಿ- 2 ಮುಗಿಯುತ್ತಾ..?
ಇದೆಲ್ಲದರ ನಡುವೆ ಹೊಸ ಧಾರಾವಾಹಿಗಳು ಸ್ಲಾಟ್ ಗಾಗಿ ಕಾಯುವಂತಾಗಿದೆ. ವೈಷ್ಣವಿ ಗೌಡ ನಟನೆಯ ಹೊಸ ಧಾರಾವಾಹಿ 'ಸೀತಾ ರಾಮ', ನವೀನ್ ಕೃಷ್ಣ ಅಭಿನಯದ 'ಭೂಮಿಗೆ ಬಂದ ಭಗವಂತ' ಕಿರುತೆರೆಗೆ ಲಗ್ಗೆ ಇಡಲು ತುದಿ ಗಾಲಿನಲ್ಲಿ ನಿಂತಿವೆ. ಹೀಗಾಗಿ 'ಜೊತೆ ಜೊತೆಯಲಿ' ಧಾರಾವಾಹಿಯನ್ನು ಮುಕ್ತಾಯಗೊಳಿಸಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ. ಜೀಕನ್ನಡದಲ್ಲಿ ಮೂಡಿ ಬರುತ್ತಿರುವ 'ನಾಗಿಣಿ- 2' ಸೀರಿಯಲ್ ಕೂಡ ಮುಗಿಯುತ್ತಿದೆ. ಇವರೆಡು ಧಾರಾವಾಹಿಯ ಸಮಯಕ್ಕೆ ಈಗಾಗಲೇ ಪ್ರಸಾರವಾಗುತ್ತಿರುವ ಸೀರಿಯಲ್ಗಳನ್ನು ಹಾಕಿ, ಪ್ರೈಂ ಟೈಮ್ಗೆ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಬಹುದು ಎಂದು ಹೇಳಲಾಗುತ್ತಿದೆ.

'ಸೀತಾ ರಾಮ' ಧಾರಾವಾಹಿ ಎಂಟ್ರಿ
'ಸೀತಾ ರಾಮ' ಧಾರಾವಾಹಿಯ ಎರಡು ಪ್ರೋಮೋ ಪ್ರಸಾರವಾಗಿದ್ದು, ಎರಡರಲ್ಲೂ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಹಾಗೂ ರಿತೂ ಸಿಂಗ್ ಕಾಣಿಸಿಕೊಂಡಿದ್ದಾರೆ. 'ಸೀತಾ ರಾಮ' ಧಾರಾವಾಹಿಯ ಪ್ರೋಮೋ ನೋಡಿಯೇ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. ಧಾರಾವಾಹಿಯನ್ನು ಆದಷ್ಟು ಬೇಗ ಪ್ರಸಾರ ಮಾಡುವಂತೆ ಕಮೆಂಟ್ ಮಾಡುತ್ತಿದ್ದಾರೆ. ಸತ್ಯ ಧಾರಾವಾಹಿಯ ನಿರ್ದೇಶಕಿ ಸ್ವಪ್ನಕೃಷ್ಣ ಅವರೇ ಈ ಸೀರಿಯಲ್ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಇನ್ನು ಮತ್ತೊಂದು ಧಾರಾವಾಹಿ 'ಭೂಮಿಗೆ ಬಂದ ಭಗವಂತ'. ಈ ಧಾರಾವಾಹಿಯಲ್ಲಿ ನವೀನ್ ಕೃಷ್ಣ ಹಾಗೂ ಕೃತಿಕಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಪ್ರಮೋವನ್ನು ಕೂಡ ಈಗಾಗಲೇ ವಾಹಿನಿ ಹಂಚಿಕೊಂಡಿದೆ.


Click it and Unblock the Notifications











