'ವೀಕೆಂಡ್' ವೇದಿಕೆ ಮೇಲೆ ನಿಂತು ಸ್ಯಾಂಡಲ್ ವುಡ್ ಗೆ ಸಂದೇಶ ಕೊಟ್ಟ ಜಗ್ಗೇಶ್!
ಸದಾ ಒಂದಲ್ಲೊಂದು ವಿವಾದಗಳಿಂದ ಸದ್ದು ಮಾಡುವ ಗಾಂಧಿನಗರದಲ್ಲಿ ಒಗ್ಗಟ್ಟಿಲ್ಲ ಎಂಬುದೀಗ ಗೌಪ್ಯವಾಗಿ ಉಳಿದಿಲ್ಲ. ಕೆಲ ನಟರನ್ನ ಕಂಡ್ರೆ ನಿರ್ಮಾಪಕರಿಗಾಗಲ್ಲ.. ಕೆಲ ನಿರ್ಮಾಪಕರನ್ನ ಕಂಡ್ರೆ ಇಡೀ ಕನ್ನಡ ಚಿತ್ರರಂಗಕ್ಕೆ ಆಗ್ಬರಲ್ಲ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಸ್ಯಾಂಡಲ್ ವುಡ್ ಗೆ ನವರಸ ನಾಯಕ ಜಗ್ಗೇಶ್ ಒಂದು ಸಂದೇಶ ಕೊಟ್ಟಿದ್ದಾರೆ.
'ವೀಕೆಂಡ್ ವಿತ್ ರಮೇಶ್-3' ವೇದಿಕೆ ಮೇಲೆ ನಿಂತು ''ನಾವೆಲ್ಲ ಒಂದಾಗಿರಬೇಕು'' ಎಂದು ಒಗ್ಗಟ್ಟಿನ ಮಂತ್ರ ಜಪ್ಪಿಸಿದ್ದಾರೆ ನಟ ಜಗ್ಗೇಶ್. ಮುಂದೆ ಓದಿ...

ಬೇಸರ ವ್ಯಕ್ತ ಪಡಿಸಿದ ಟೆನ್ನಿಸ್ ಕೃಷ್ಣ
ನವರಸ ನಾಯಕ ಜಗ್ಗೇಶ್ ಬಗ್ಗೆ ಮಾತನಾಡಲು 'ವೀಕೆಂಡ್ ವಿತ್ ರಮೇಶ್' ವೇದಿಕೆಗೆ ಆಗಮಿಸಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ ತಮ್ಮಲ್ಲಡಗಿದ್ದ ಬೇಸರವನ್ನ ಹೊರಹಾಕಿದ್ದು ಹೀಗೆ - ''ನಾನು ಡೈರೆಕ್ಷನ್ ಡಿಪಾರ್ಟ್ಮೆಂಟ್ನಿಂದ ಬಂದೋನು. ಎನ್.ಎಸ್.ರಾವ್ ಅವರು ತೀರಿಕೊಂಡ ನಂತರ ಒಬ್ಬ ಕಾಮಿಡಿಯನ್ ಗಾಗಿ ಹುಡುಕುತ್ತಿದ್ದರು. ಈಗ ಬದುಕಿದ್ದಾಗಲೇ ನಮ್ಮನ್ನ ಸಾಯಿಸಿ ಕೂರಿಸಿದ್ದಾರೆ'' [ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!]

ಜಗ್ಗೇಶ್ ಆಡಿದ ಸ್ಫೂರ್ತಿಯ ಮಾತುಗಳು
''ಯಾರು ಯಾರನ್ನೂ ಸಾಯಿಸೋಕೆ ಆಗಲ್ಲ. ನಿಮ್ಮ ಪ್ರತಿಭೆಯನ್ನ ಯಾರೂ ಕೀಳೋಕೆ ಆಗಲ್ಲ. ಕೃಷ್ಣ ರವರನ್ನ ಯಾರೂ ಮರೆಯೋಕೆ ಆಗಲ್ಲ. ಬಂದೋರೆಲ್ಲ ಬರಲಿ, ನಮ್ಮ ರೆಕಾರ್ಡ್ ಗಳನ್ನೆಲ್ಲ ಯಾರೂ ಮುಟ್ಟೋಕೆ ಆಗಲ್ಲ'' ಅಂತ ಹೇಳ್ತಾ ಟೆನ್ನಿಸ್ ಕೃಷ್ಣ ರವರಿಗೆ ಜಗ್ಗೇಶ್ ಸಮಾಧಾನ ಪಡಿಸಿದ್ರು.

ನನಗೂ ನೋವು ಇದೆ
''ನಿಮ್ಮಂತೆ ನನಗೂ ನೋವು ಆಗುತ್ತೆ. ಉದ್ಯಮದಲ್ಲಿ ದೊಡ್ಡೋರು, ಚಿಕ್ಕೋರು ಅನ್ನೋ ಮರ್ಯಾದೆ ಇಲ್ಲ. ಬೆಲೆ ಇಲ್ಲ. ಆದ್ರೇನಂತೆ ಜನ ನಮ್ಮನ್ನ ಮರೆಯಲ್ಲ. ಈಗ ನರಸಿಂಹರಾಜು, ಬಾಲಣ್ಣ ಇಲ್ಲ. ಹಾಗಂತ ಜನ ಅವರನ್ನೆಲ್ಲ ಮರೆತುಬಿಟ್ರಾ.? ನಮ್ಮನ್ನೂ ಮರೆಯಲ್ಲ ಬಿಡಿ'' ಅಂತ ಟೆನ್ನಿಸ್ ಕೃಷ್ಣ ರವರಿಗೆ ಜಗ್ಗೇಶ್ ಹೇಳಿದರು.

ಸ್ಯಾಂಡಲ್ ವುಡ್ ಗೆ ಜಗ್ಗೇಶ್ ಕೊಟ್ಟ ಸಂದೇಶ
''ಇವತ್ತಿನ ಪರಿವರ್ತನೆ ಯಾಕೋ ನನ್ನ ಮನಸ್ಸಿಗೆ ಇಷ್ಟ ಆಗಲಿಲ್ಲ. ನಾವೆಲ್ಲ ರಾಜ್ ಕುಮಾರ್ ರವರನ್ನ ನೋಡಿ ಬೆಳೆದವರು. ನಾವೆಲ್ಲ ಶಾರದೆ ಮಕ್ಕಳು. ಇನ್ನೊಬ್ಬರ ಒಗ್ಗಟ್ಟು ನೋಡಿ ನಾವು ಕಲಿಯಬೇಕಾಗಿದೆ. ಅಕ್ಕ-ಪಕ್ಕದ ರಾಜ್ಯ ನೋಡಿದ್ರೆ, ಹೊಟ್ಟೆಗೆ ಆಸಿಡ್ ಹಾಕ್ಕೊಂಡ ಹಾಗೆ ಆಗುತ್ತೆ. ಎಲ್ಲ ಒಂದು ತಾಯಿ ಮಕ್ಕಳ ಹಾಗಿದ್ರೆ, ನಾವು ಸವತಿ ಮಕ್ಕಳ ತರಹ ಬದುಕುತ್ತಿದ್ದೇವೆ. ದಯವಿಟ್ಟು ಇಲ್ಲಿಂದ ಒಂದು ಮೆಸೇಜ್ ನ ರವಾನೆ ಮಾಡೋಣ. ನಾವು ಕಲಾವಿದರೆಲ್ಲ ಇನ್ಮುಂದೆ ಒಟ್ಟಿಗೆ ಇರೋಣ'' ಅಂತ ನಟ ಜಗ್ಗೇಶ್ ಸಂದೇಶ ರವಾನಿಸಿದರು.


Click it and Unblock the Notifications











